3ನೇ ಪಂಚಮಸಾಲಿ ಪೀಠ ಸ್ಥಾಪನೆಗೆ ವಚನಾನಂದ ಶ್ರೀ ಬೆಂಬಲ
ದಾವಣಗೆರೆ, ಜನವರಿ 23; ವೀರಶೈವ ಲಿಂಗಾಯತ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿಚಾರ ಈಗ ಬಹುಚರ್ಚೆಗೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ. ಹರಿಹರ ವೀರಶೈವ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳು ಪೀಠ ಸ್ಥಾಪನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂಬ ಘೋಷಣೆ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಭಾನುವಾರ ಹರಿಹರದ ಪಂಚಮಸಾಲಿ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಜಿಲ್ಲೆಗೊಂದರಂತೆ ಪೀಠ ಸ್ಥಾಪನೆಯಾಗಲಿ. ಅದಕ್ಕೇನೂ ನಮ್ಮ ಅಭ್ಯಂತರವಿಲ್ಲ. ಹರಿಹರ ಪಂಚಮಸಾಲಿ ಪೀಠವೇ ಪಂಚಮಸಾಲಿಗಳ ಮೂಲಕ್ಷೇತ್ರ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ, ಈ ಪೀಠಕ್ಕೆ ತನ್ನದೇ ಆದ ವಿಶಿಷ್ಟ ಮಾನ್ಯತೆ, ಗೌರವ, ಇತಿಹಾಸವಿದೆ" ಎಂದರು.
ಇನ್ನು ಜಮಖಂಡಿಯಲ್ಲಿ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಜಯಮೃತ್ಯುಂಜಯ ಸ್ವಾಮೀಜಿ ಹೆಸರನ್ನು ಎಲ್ಲಿಯೂ ಉಲ್ಲೇಖಿಸದ ವಚನಾನಂದ ಶ್ರೀಗಳು ಪೀಠ ಸ್ಥಾಪನೆಗೆ ಸಂಪೂರ್ಣವಾಗಿ ಬೆಂಬಲ ಇದೆ ಎಂಬ ಮಾತು ಹೇಳಿರುವುದು ಈಗ ಚರ್ಚೆಗೆ ಕಾರಣವಾಗಿದೆ.
ವಚನಾನಂದ ಶ್ರೀಗಳು ಮಾತನಾಡಿ, "ಕೆಲವು ಮಠಗಳೇ ಮುರುಗೇಶ್ ನಿರಾಣಿ ಅವರನ್ನು ಬಳಸಿಕೊಂಡಿವೆ. ಅವರಿಂದ ಸಹಾಯವನ್ನೂ ಪಡೆದಿವೆ. ಆದರೆ ಈಗ ಅವರ ವಿರುದ್ಧವೇ ಆರೋಪ ಮಾಡುತ್ತಿರುವುದು ಸರಿಯಲ್ಲ. ಟಾರ್ಗೆಟ್ ಮಾಡಿ ಯಾಕೆ ಮಾತನಾಡಲಾಗುತ್ತಿದೆ?" ಎಂದು ಹೇಳುವ ಮೂಲಕ ಜಯ ಮೃತ್ಯುಂಜಯ ಶ್ರೀಗಳಿಗೆ ಟಾಂಗ್ ಕೊಟ್ಟಿದ್ದಾರೆ.

ಮುರುಗೇಶ್ ನಿರಾಣಿ ಪರ ಬ್ಯಾಟಿಂಗ್
"ಮೊದಲಿನಿಂದಲೂ ಸಚಿವ ಮುರುಗೇಶ್ ನಿರಾಣಿ ನಮ್ಮ ಮಠದ ಭಕ್ತರು. ತಾವು ಪೀಠಕ್ಕೆ ಪೀಠಾಧಿಪತಿಯಾಗಿ ಬರುವ ಮುಂಚೆಯೇ ನಿರಾಣಿ ಅವರು ಹರಿಹರ ಪಂಚಮಸಾಲಿ ಪೀಠದ ಭಕ್ತರು. ಪಂಚಮಸಾಲಿ ಮಠ ಸೇರಿದಂತೆ ಎಲ್ಲಾ ಮಠಗಳಿಗೂ ಸಹಾಯ ಮಾಡಿದ್ದಾರೆ. ಕೈಯಲ್ಲಿ ಆದಷ್ಟು ದೇಣಿಗೆ ಕೊಟ್ಟಿದ್ದಾರೆ. ಎಲ್ಲಾ ಪೀಠಗಳು ಮುರುಗೇಶ್ ನಿರಾಣಿ ಬಳಸಿಕೊಂಡಿವೆ. ಆದರೆ ನಿರಾಣಿ ಮಾತ್ರ ಸಮಾಜವನ್ನು ತಮ್ಮ ಸ್ವಾರ್ಥಕ್ಕೆ ಎಂದಿಗೂ ಬಳಸಿಕೊಂಡಿಲ್ಲ. ಈಗ ಕೆಲವರು ಮುರುಗೇಶ್ ನಿರಾಣಿ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಸಮಾಜದ 75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದಾರೆ. ಈ ಮೂಲಕ ಮೂರು ಲಕ್ಷ ಮಂದಿಗೆ ಆಹಾರ ನೀಡುವಂಥ ಪುಣ್ಯದ ಕೆಲಸ ಮಾಡಿದ್ದಾರೆ. ಸುಖಾಸುಮ್ಮನೆ ನಿರಾಣಿ ವಿರುದ್ಧ ಆರೋಪ ಮಾಡುವುದು ಸರಿಯಲ್ಲ" ಎಂದು ವಚನಾನಂದ ಶ್ರೀಗಳು ಹೇಳಿದರು.

ಪೀಠ ಸ್ಥಾಪನೆಯಾದರೆ ತಪ್ಪಿಲ್ಲ
"ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಯಾದರೆ ತಪ್ಪೇನಿಲ್ಲ. ನಮ್ಮ ಸಹಕಾರವನ್ನು ಕೇಳಿದ್ದಾರೆ. ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಸಮಾಜ ಶೈಕ್ಷಣಿಕ, ಸಾಮಾಜಿಕ, ಉದ್ಯೋಗಿಕವಾಗಿ ಉನ್ನತಿಯಾಗಲು ಜಿಲ್ಲೆಗೊಂದರಂತೆ ಮಠ ಸ್ಥಾಪನೆಯಾದರೆ ಆಗಲಿ. ಇದಕ್ಕೆ ಅಭ್ಯಂತರವೇನಿಲ್ಲ. ಯಾಕೆಂದರೆ ಎಲ್ಲಾ ಕಾರ್ಯಗಳನ್ನು ನಾವೊಬ್ಬರೇ ಮಾಡಲು ಆಗದು" ಎಂದು ವಚನಾನಂದ ಶ್ರೀಗಳು ಹೇಳಿದರು.
"ಪಂಚಮಸಾಲಿ ಸಮಾಜದ ಮೂಲಕ್ಷೇತ್ರ ಇರುವುದು ಹರಿಹರದಲ್ಲಿಯೇ. ಮೂಲ ಪೀಠ ಇರುವುದು ಇಲ್ಲಿಯೇ. ಬೇರೆ ಕಡೆಗಳಲ್ಲಿ ಪೀಠ ಸ್ಥಾಪಿಸಿದರೆ ಖಂಡಿತವಾಗಿಯೂ ಸಹಕಾರ ಕೊಡುತ್ತೇವೆ. ಪೀಠಗಳು ಹೆಚ್ಚಾದರೆ ಮಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಸರಿಯಲ್ಲ. ಈ ಭೀತಿಯೂ ನಮಗಿಲ್ಲ. ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯತ ವಿರಕ್ತ ಮಠಗಳಿವೆ. ಈ ಮಠಗಳಿಗೆ ಹೆಚ್ಚಿನ ದಾನ, ಆಸ್ತಿ ನೀಡಿರುವುದು ಪಂಚಮಸಾಲಿಗಳೇ" ಎಂದರು.

ಒಕ್ಕೂಟ ರಚಿಸಲಾಗಿದೆ
"ಜಮಖಂಡಿಯಲ್ಲಿ ಪೀಠ ಸ್ಥಾಪನೆ ಬಗ್ಗೆ ಬಬಲೇಶ್ವರ ಬೃಹನ್ಮಠದ ಷಟಸ್ಥಲ ಬೃಹ್ಮಿ ಡಾ.ಶ್ರೀ ಮಹಾದೇವ ಶಿವಾಚಾರ್ಯಮಹಾಸ್ವಾಮಿಗಳವರು ಬೆಂಬಲ ಕೋರಿದ್ದಾರೆ. ಹರಿಹರಕ್ಕೆ ಕಳೆದ ಜನವರಿ 14ರ ಮಕರ ಸಂಕ್ರಮಣ ದಿನದಂದು ಇಲ್ಲಿಗೆ ಬಂದಿದ್ದರು. ಮಾತ್ರವಲ್ಲ, ನಮ್ಮ ಮೂಲಪೀಠ ಇರುವುದು ಹರಿಹರದಲ್ಲಿಯೇ ಎಂಬ ಮಾತು ಹೇಳಿದ್ದಾರೆ. ಹರಿಹರ ಪೀಠ ಬೇರೆ ಅಲ್ಲ, ಜಮಖಂಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಪೀಠ ಬೇರೆ ಅಲ್ಲ. ಎಲ್ಲಾ ಮಠಗಳು ಪಂಚಮಸಾಲಿಗಳ ಶೈಕ್ಷಣಿಕ, ಉದ್ಯೋಗ ನೀಡುವ ನಿಟ್ಟಿನಲ್ಲಿ ಶ್ರಮಿಸುವುದು ಈ ಪೀಠದ ಮೇಲೆ ಕೂರುವ ಪ್ರತಿಯೊಬ್ಬರ ಜವಾಬ್ದಾರಿ. ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪ್ರಯತ್ನವನ್ನೂ ಮಾಡಿದ್ದೇವೆ. ಈ ನಿಟ್ಟಿನಲ್ಲಿ 1994ರಿಂದಲೂ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಾವು ಪಾದಯಾತ್ರೆ, ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಸಮಾಜಕ್ಕೋಸ್ಕರ ದುಡಿಯುವುದು ನಮ್ಮ ಆದ್ಯ ಕರ್ತವ್ಯ" ಎಂದು ಪ್ರತಿಪಾದಿಸಿದರು.
"ಈಗಾಗಲೇ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿಗಳ ಒಕ್ಕೂಟ ರಚಿಸಲಾಗಿದೆ. ಈ ಒಕ್ಕೂಟದ ಮೂಲಕ ಸಮಾಜದ ಏಳಿಗೆ, ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಈಗಾಗಲೇ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಪೀಠ ಸ್ಥಾಪನೆಯಾದರೆ ಭಕ್ತರು ಕಡಿಮೆಯಾಗುತ್ತಾರೆ ಎಂಬ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಯಾರ್ಯಾರೋ ಏನೇನೋ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜಕ್ಕಾಗಿ ದುಡಿಯುವೆ
"ಇನ್ನು ಪಂಚಮಸಾಲಿಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇವೆ. ಧಾರವಾಡ ಸೇರಿದಂತೆ ಕೆಲವು ಭಾಗಗಳಲ್ಲಿ ಸಮಾಜದವರು ಮತಾಂತರ ಆಗುತ್ತಿರುವ ವಿಚಾರವೂ ಗೊತ್ತಾಗಿದೆ. ಮತಾಂತರ ಎಂಬುದು ದೊಡ್ಡ ಪಿಡುಗು ಆಗಿದೆ. ಸಮಾಜದ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಯಾವುದೇ ಕಾರಣಕ್ಕೂ ಪಂಚಮಸಾಲಿಗಳು ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿರುವುದನ್ನು ತಡೆಗಟ್ಟಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸೋಣ" ಎಂದು ಶ್ರೀಗಳು ಕರೆ ನೀಡಿದರು.












Click it and Unblock the Notifications