Breaking; ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ದಾವಣಗೆರೆ, ಸೆಪ್ಟೆಂಬರ್ 20; ನಿಜಕ್ಕೂ ವಿಧಿ ಎಂತಾ ಘೋರ. ಇನ್ನು ಬದುಕಿ ಬಾಳಬೇಕಿದ್ದ 8 ವರ್ಷದ ಬಾಲಕನ ಕಥೆ ಮುಗಿದಿದೆ. ಆತನ ಜೊತೆಗೆ ತಂದೆ ತಾಯಿಯೂ ಸಾವಿನಲ್ಲಿ ಜೊತೆಯಾಗಿದ್ದಾರೆ. ಇಂಥದ್ದೊಂದು ಹೃದಯವಿದ್ರಾವಕ ಘಟನೆಗೆ ಬೆಣ್ಣೆನಗರಿ ದಾವಣಗೆರೆ ಸಾಕ್ಷಿಯಾಗಿದೆ.
ಅದು ಪುಟ್ಟ ಕುಟುಂಬ. ಗಂಡ, ಹೆಂಡತಿ, ಮಗು ವಾಸವಾಗಿದ್ದರು. ಆರ್ಥಿಕವಾಗಿ ಮೇಲ್ನೋಟಕ್ಕೆ ಚೆನ್ನಾಗಿದ್ದರು ಎಂದುಕೊಂಡರೂ ಸಾವಿಗೆ ಇನ್ನು ಸ್ಪಷ್ಟ ಕಾರಣ ಸಿಕ್ಕಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದಲೇ ಸಾವಿಗೆ ಶರಣಾಗಿರಬಹುದು ಎಂಬುದು ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ.
ಅಂದ ಹಾಗೆ ಈ ಹೃದಯವಿದ್ರಾವಕ ಘಟನೆ ನಡೆದಿರುವುದು ದಾವಣಗೆರೆ ಭಾರತ್ ಕಾಲೋನಿಯ ಶೇಖರಪ್ಪ 'ಬಿ' ಬ್ಲಾಕ್ ನಲ್ಲಿ. ಕೃಷ್ಣಾನಾಯ್ಕ್ ಕುಟುಂಬದ ಮೂವರು ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

48 ವರ್ಷದ ಕೃಷ್ಣಾನಾಯ್ಕ್, 35 ವರ್ಷದ ಆತನ ಪತ್ನಿ ಸರಸ್ವತಿ ಬಾಯಿ, 8 ವರ್ಷದ ಮಗು ಧ್ರುವ ಮೃತಪಟ್ಟವರು ಎಂದು ತಿಳಿದು ಬಂದಿದೆ. ಭಾರತ್ ಕಾಲೋನಿ ಶೇಖರಪ್ಪ 'ಬಿ' ಬ್ಲಾಕನಲ್ಲಿ ವಾಸವಾಗಿದ್ದ ಕೃಷ್ಣನಾಯ್ಕ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಸರಸ್ವತಿ ಬಾಯಿ ಮೂಲವ್ಯಾಧಿಯಿಂದ ಬಳಲುತ್ತಿದ್ದರೆ, ಕೃಷ್ಣಾನಾಯ್ಕ್ರಿಗೆ ಸಹ ಆರೋಗ್ಯ ಸಮಸ್ಯೆ ಇತ್ತು. ಕೃಷ್ಣನಾಯ್ಕ್ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ತೀವ್ರ ಮನನೊಂದಿದ್ದರು. ಆರೋಗ್ಯದಲ್ಲಿ ಉಂಟಾಗುತ್ತಿದ್ದ ಏರುಪೇರಿನಿಂದಾಗಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಬೇಸತ್ತಿದ್ದ ದಂಪತಿ ಆಸ್ಪತ್ರೆಗೆ ತೋರಿಸಿದ್ದರೂ ಸಂಪೂರ್ಣ ಗುಣಮುಖರಾಗಿರಲಿಲ್ಲ ಎನ್ನಲಾಗಿದೆ. ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿದ್ದ ಧ್ರುವ ಎಂಬ ಬಾಲಕ ಮೃತಪಟ್ಟಿದ್ದು, ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕೃಷ್ಣಾನಾಯ್ಕ್ ಶವ ಪತ್ತೆಯಾಗಿದ್ದರೆ, ಸರಸ್ವತಿ ಬಾಯಿ ಹಾಗೂ ಮಗು ಧ್ರುವ ಮಲಗಿದ ಸ್ಥಿತಿಯಲ್ಲೇ ಪತ್ತೆಯಾಗಿದ್ದಾರೆ.
ಮನೆ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೂ ಆರೋಗ್ಯ ಕೈಕೊಟ್ಟ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರ್. ಎಂ. ಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಅವರ ಅಕ್ರಂದನ ಮುಗಿಲು ಮುಟ್ಟಿದೆ. ಏನು ಅರಿಯದ ಎಂಟು ವರ್ಷದ ಕಂದಮ್ಮನೂ ಬಲಿಯಾಗಿದ್ದು ವಿಪರ್ಯಾಸವೇ ಸರಿ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications