Get Updates
Get notified of breaking news, exclusive insights, and must-see stories!

ಎಂ.ಪಿ.ರೇಣುಕಾಚಾರ್ಯರನ್ನು ಪೊಲೀಸರು ಬಂಧಿಸಿದ್ದೇಕೆ?-ಇಲ್ಲಿದೆ ಮಾಹಿತಿ

ದಾವಣಗೆರೆ, ಜನವರಿ, 08: ಭದ್ರಾ ಜಲಾಶಯದಿಂದ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರ ಪ್ರದೇಶಗಳಿಗೆ ಕನಿಷ್ಠ 60 ದಿನಗಳಾದರೂ ನೀರು ಹರಿಸಬೇಕು. ಈಗ ತೆಗೆದುಕೊಂಡಿರುವ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರ ಅವೈಜ್ಞಾನಿಕ ಎಂದು ಆರೋಪಿಸಿ ಜನವರಿ 10ರಂದು ಪ್ರತಿಭಟನೆ ನಡೆಸಲು ರೈತ ಒಕ್ಕೂಟ ನಿರ್ಧರಿಸಿದೆ.

ಅಂದು ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಾಲಯದಿಂದ ಬೆಳಗ್ಗೆ 10.30ಕ್ಕೆ ಪ್ರತಿಭಟನಾ‌‌ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಲಿಂಗರಾಜು ಶಾಮನೂರು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇನ್ನಯ ಮಲವಗೊಪ್ಪದ ಕಾಡಾ‌ ಕಚೇರಿಯಲ್ಲಿ ನಡೆದ ಐಸಿಸಿ ಸಭೆಯ ನಿರ್ಧಾರ ಪುನರ್ ಪರಿಶೀಲಿಸಬೇಕು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

Taliban rule by Congress government says M.P.Renukacharya

ರೈತ ಒಕ್ಕೂಟದ ಮುಖಂಡ ಬಿ.ಎಂ.ಸತೀಶ್ ಕೊಳೇನಹಳ್ಳಿ ಮಾತನಾಡಿ, ಜನವರಿ 20ರಿಂದ 12 ದಿನಗಳ ಕಾಲ ನೀರು ಹರಿಸುವುದು ಮತ್ತು 20 ದಿನ ನಿಲ್ಲಿಸುವ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಬಹುಡೊಡ್ಡ ಅನ್ಯಾಯವಾಗಿದೆ. 12 ದಿನ ನೀರು ಹರಿಸಿದರೆ ದಾವಣಗೆರೆ ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ ಎಂದರು.

ಅಧಿಕಾರಿಗಳು ಹೇಳುವ ಪುಕಾರ ಪ್ರತಿ ದಿನ ಎಡ ಮತ್ತು ಬಲದಂಡಗಳಿಗೆ ನೀರು ಬಿಡಲು 0.29 ಟಿಎಂಸಿ ನೀರು ಬೇಕಾಗುತ್ತದೆ. ಈಗ ಡ್ಯಾಂನಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ 13.83 ಟಿಎಂಸಿ ತೆಗೆದರೆ ಉಳಿದ ಬಳಕೆಗೆ ಬರುವ ನೀರು 21.54 ಟಿಎಂಸಿ. ಇದನ್ನು ದಿನ 0.29ರಂತೆ 74 ದಿನ ಹರಿಸಬಹುದು ಎಂದು ತಿಳಿಸಿದರು.

21.54 ಟಿಎಂಸಿಯನ್ನು 0.29 ಟಿಎಂಸಿ ಭಾಗಿಸಿದರೆ 74.27 ದಿನಗಳು ಆಗುತ್ತದೆ. ಆದರೆ ಅಧಿಕಾರಿಗಳು 6.90 ಟಿಎಂಸಿ ನೀರನ್ನು ಕುಡಿಯುವ ನೀರು, ಕೈಗಾರಿಕೆಗಳಿಗೆ ಮತ್ತು ಆವಿಯಾಗುವ ನೀರು 1.91 ಟಿಎಂಸಿ ಎಂದು ಮೀಸಲಿಟ್ಟು ಲೆಕ್ಕ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ನಾಲೆಯಲ್ಲಿ ನೀರು ಬಿಟ್ಟ ಉದಾಹರಣೆ ಡ್ಯಾಂ ಇತಿಹಾಸದ ಇಲ್ಲ ಎಂದರು.

ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ ದಾವಣಗೆರೆಯ ಸ್ಟೇಷನ್ ಕೆರೆ, ಕುಂದುವಾಡದ ಕೆರೆ ಇನ್ನಿತರ ಕೆರೆಗಳಿಗೆ ತುಂಬಿಸಿಕೊಳ್ಳಬಹುದು. ಆದರೂ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ. 1.91 ಟಿಎಂಸಿ ನೀರು ಆವಿಯಾಗುತ್ತದೆ ಎಂದು ಲೆಕ್ಕ ಹಾಕಿರುವುದು ತಲೆ ಬುಡವಿಲ್ಲದ ಲೆಕ್ಕಾಚಾರ. ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಎಂದು ಹೇಳಿದರು.

ಆವಿಯಾಗುವ ನೀರನ್ನು ಲೆಕ್ಕ ಹಾಕುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಿಂದ ಡ್ಯಾಂಗೆ ಬರುವ ಒಳಹರಿವಿನ ಪ್ರಮಾಣ ಲೆಕ್ಕ ಮಾಡಿಲ್ಲ. ಇದನ್ನು ಮುಚ್ಚಿಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಹರಿಸುವ ಎಡದಂಡೆಗೆ ಪ್ರತ್ಯೇಕ ವೇಳಾಪಟ್ಟಿ ನಿಗದಿ ಮಾಡಿದ್ದು, ಜನವರಿ 10ರಿಂದಲೇ 16 ದಿನ ನೀರು ಹರಿಸುವುದು ಮತ್ತು 15 ದಿನ ನಿಲ್ಲಿಸುವುದು ನಿರ್ಣಯಿಸಲಾಗಿದೆ. ಎಡದಂಡೆಗೆ ಮತ್ತು ಬಲದಂಡೆಗೆ ಬೇರೆ ಬೇರೆ ವೇಳಾಪಟ್ಟಿ ಮಾಡಿರುವುದು ಡ್ಯಾಂನ ಇತಿಹಾಸದಲ್ಲಿಯೇ ಇದೇ ಮೊದಲು ಎಂದು ಆರೋಪಿಸಿದರು.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ದಿವ್ಯ ನಿರ್ಲಕ್ಷ ತೋರುತ್ತಿದೆ. ದಾವಣಗೆರೆ ಜಿಲ್ಲೆ ರೈತರ ಜೀವನಾಡಿ ಭದ್ರಾ ಜಲಾಶಯದಿಂದ ನೀರು ಹರಿಸಿ ತೆಂಗು ಇನ್ನಿತರೆ ಬಹು ವಾರ್ಷಿಕ ಬೆಳಗಳ ತೋಟಗಳನ್ನು ಭೀಕರ ಬರದ ಬೇಗುದಿ ಉಳಿಸಿಕೊಳ್ಳಲು ನೆರವಾಗಬೇಕು.‌ ತೋಟಗಾರಿಕೆ ಖಾತೆ ಹೊಂದಿರುವ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅವರು ಐಸಿಸಿ ಸಭೆಗೆ ಗೈರು ಹಾಜರಾಗಿರುವುದು ಅವರ ರೈತ ವಿರೋಧಿ ನಡೆಯಾಗಿದೆ. ಬರದ ಬವಣೆಯಿಂದ ತತ್ತರಿಸಿರುವ ಸಂಕಷ್ಟಕ್ಕೆ ಧಾವಿಸುವ ಇಚ್ಚಾಶಕ್ತಿ ಅವರಿಗಿಲ್ಲ ಎಂದು ದೂರಿದರು.

ರೈತರ ಹಿತಾಸಕ್ತಿ ಬಯಸದ ಇಂಥವರು ಸಚಿವರಾಗಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಕೊನೆ ಭಾಗಕ್ಕೆ ತಿಂಗಳಿಗೆ ಒಂದು ಸಲವಾದರೂ ನೀರು ತಲುಪದಿದ್ದರೆ ಜಿಲ್ಲೆಯ ಬೋರ್ ವೆಲ್‌ಗಳು ಸಂಪೂರ್ಣ ಫೇಲ್ ಆಗುತ್ತಿವೆ. ಇದರಿಂದ ತೋಟಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆಗಬಹುದು. ಭದ್ರಾ ನೀರು ನಮ್ಮ ಹಕ್ಕು. ಡ್ಯಾಂನಲ್ಲಿ ನೀರು ಇದೆ ಕೊಡಿ ಎಂದು ಕೇಳುತ್ತಿದ್ದೇವೆ. ಆದ್ದರಿಂದ ರೈತರು ಎಚ್ಚರಗೊಂಡು ಬೀದಿಗಿಳಿದು ಹೋರಾಟ ಮಾಡಬೇಕೆಂದು ತಿಳಿಸಿದರು.

ಎ.ಕೆ.ಫೌಂಡೇಶನ್ ಅಧ್ಯಕ್ಷರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.‌ಬಿ.ಕೊಟ್ರೇಶ್ ಅವರು ಮಾತನಾಡಿ, ಶಿವಮೊಗ್ಗದ ಮಲವಗೊಪ್ಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅಧ್ಯಕ್ಷತೆಯಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಭದ್ರಾ ಅಚ್ಚುಕಟ್ಟುದಾರ ಪ್ರದೇಶದವರನ್ನೇ ಕಾಡಾ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.

ಈಗ ತೆಗೆದುಕೊಂಡಿರುವ ನಿರ್ಧಾರ ತಪ್ಪು. ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟುಕೊಂಡು 72 ದಿನಗಳ ಕಾಲ‌ ನೀರನ್ನು ಭದ್ರಾ ಡ್ಯಾಂನಿಂದ ಬಲದಂಡೆ‌ ನಾಲೆಯಲ್ಲಿ ಹರಿಸಬೇಕು ಎಂದು ಒತ್ತಾಯಿಸಿದರು. ಭದ್ರಾ ಡ್ಯಾಂನ ನೀರು ಅವಲಂಬಿಸಿರುವುದು ದಾವಣಗೆರೆ ಜಿಲ್ಲೆ ಜನರು, ರೈತರು. ಶೇಕಡಾ 70ರಷ್ಟು ಭಾಗ ಇಲ್ಲಿದೆ. ಇಲ್ಲಿನವರೇ ಕಾಡಾ ಅಧ್ಯಕ್ಷರಾದರೇ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ರೈತರ ಕಷ್ಟಗಳು ಗೊತ್ತಿರುತ್ತವೆ. ಆದ್ದರಿಂದ ದಾವಣಗೆರೆ ಭಾಗದವರೇ ಅಧ್ಯಕ್ಷರಾಗಬೇಕು ಎಂದರು.

ಭಾರತ ದೇಶಕ್ಕೆ ರೈತರೇ ಬೆನ್ನಲುಬು. ಬೆನ್ನಲುಬು ಮುರಿಯುವ ಕೆಲಸ ಮಾಡಬಾರದು. ಕಟ್ಟುವ ಕೆಲಸ ಮಾಡಬೇಕು. ಆದರೆ ಭದ್ರಾ ಡ್ಯಾಂ ನೀರು ಹರಿಸುವ ಸಂಬಂಧ ತೆಗೆದುಕೊಂಡಿರುವ ನಿರ್ಧಾರ ಸರಿಯಿಲ್ಲ. ಆದ್ದರಿಂದ ಈ ತೀರ್ಮಾನ ಪುನರ್ ಪರಿಶೀಲಿಸಿ ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡುವಂಥ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ರೈತರಿಗೆ ನೀರು ಅವಶ್ಯಕತೆ ಇದೆ. ಅನ್ನದಾತರ ಬಗ್ಗೆ ಮಾತನಾಡುತ್ತಾರೆ. ಆದರೆ ಆ ರೈತರ ಹಿತ ಕಾಪಾಡಲು ಮುಂದಾಗುತ್ತಿಲ್ಲ. ಇದು ಬೇಸರದ ಸಂಗತಿ. ದಾವಣಗೆರೆ ಜಿಲ್ಲೆಯವರೇ ಕಾಡಾ ಅಧ್ಯಕ್ಷರಾದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸಮರ್ಥವಾಗಿ‌ ಮಂಡನೆ ಮಾಡಬಹುದು. ಆಗ ನಮ್ಮ ಹಕ್ಕು ಭದ್ರಾ ಡ್ಯಾಂ ನೀರು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+