ಸ್ಪೆಷಲ್ ರಿಪೋರ್ಟ್; ವಾದಕ್ಕಿಳಿದರೆ ಕೇಸ್, ಕೋರ್ಟ್ಗೆ ಹಾಜರು!
ದಾವಣಗೆರೆ, ಜುಲೈ 04; ಜನರು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ಪೊಲೀಸರ ಜೊತೆ ವಾದಕ್ಕೆ ಇಳಿದರೆ ಹುಷಾರ್. ದಾವಣಗೆರೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಸಂಚಾರಿ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಪೊಲೀಸರ ಜೊತೆ ವಾದಕ್ಕೆ ಮುಂದಾದರೆ ಮುಲಾಜಿಲ್ಲದೇ ಕೇಸ್ ಮಾಡಿ ಕೋರ್ಟ್ಗೆ ಹಾಜರುಪಡಿಸಿ ಎಂಬ ನಿರ್ದೇಶನ ನೀಡಿದ್ದಾರೆ.
ದಾವಣಗೆರೆ ಮಟ್ಟಿಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಖಡಕ್ ಆಗಿ ಎಸ್ಪಿ ನೀಡಿರುವ ಎಚ್ಚರಿಕೆಯಾಗಿದೆ. ಸೋಮವಾರದಿಂದ ಈ ಕಾರ್ಯ ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಟ್ರಾಫಿಕ್ ಪೊಲೀಸರ ಜೊತೆ ಸಭೆ ನಡೆಸಿರುವ ರಿಷ್ಯಂತ್, ಹೊಸ ದಾವಣಗೆರೆ, ಹಳೇ ದಾವಣಗೆರೆಯ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ನಿಯಮ ಪಾಲನೆ ಮಾಡದಿರುವ ಬಗ್ಗೆ ದೂರು ಬಂದ ಕಾರಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ನಗರದಲ್ಲಿ ಹಲವು ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಲ್ಲೇ ಹೆಚ್ಚಾಗಿ ಮೊದಲು ಬಿಗಿಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ತ್ರಿಬಲ್ ರೈಡಿಂಗ್, ಅಜಾಗರೂಕತೆ, ವೇಗದ ಚಾಲನೆ, ಹೆಲ್ಮೆಟ್ ಇಲ್ಲದ ಪ್ರಯಾಣ, ಸಿಗ್ನಲ್ ಜಂಪ್, ವಾಹನಗಳ ದಾಖಲಾತಿ, ಡ್ರಿಂಕ್ ಅಂಡ್ ಡ್ರೈವ್ ಸೇರಿದಂತೆ ನಿಯಮಾವಳಿಯನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಚಾಲನಾ ಪರವಾನಗಿ ಇಲ್ಲದಿದ್ದರೆ ದಂಡ ಕಟ್ಟಲೇಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

"ಸೋಮವಾರದಿಂದ ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಟ್ರಾಫಿಕ್ ಡ್ರೈವ್ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಗುವುದು. ಕಾನೂನು ಉಲ್ಲಂಘನೆ ಮಾಡಿ ಪೊಲೀಸರ ಜೊತೆ ಕಿರಿಕ್ ಮಾಡಿದರೆ ಕ್ರಮ ಕಟ್ಟಿಟ್ಟ ಬುತ್ತಿ" ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.
ಹೆಚ್ಚಿನ ವಾಹನಗಳ ಓಡಾಟವಿರುವ ರಸ್ತೆಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ. ವಾಹನ ದಟ್ಟಣೆ ಹೆಚ್ಚಾಗಿರುವ ಜಾಗದಲ್ಲಿ ಒಂದಿಬ್ಬರು ಏನು ಮಾಡಲು ಆಗದು. ಈ ನಿಟ್ಟಿನಲ್ಲಿ ಕೋವಿಡ್ ವೇಳೆಯಲ್ಲಿ ಸೇವೆಗೆ ತೆಗೆದುಕೊಂಡಿರುವ ನೂರು ಮಂದಿ ಹೋಂ ಗಾರ್ಡ್ಗಳನ್ನು ಟ್ರಾಫಿಕ್ ವ್ಯವಸ್ಥೆ ಸರಿಪಡಿಸಲು ಬಳಕೆ ಮಾಡಿಕೊಳ್ಳಲಾಗುವುದು. 15 ದಿನಗಳ ಕಾಲ ಕೆಲಸ ನಿರ್ವಹಿಸಲಿದ್ದು, ಜನರು ಪೊಲೀಸರಿಗೆ ಸಹಕರಿಸಬೇಕು. ಕಾನೂನು ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸರಗಳ್ಳರ ಬಂಧನ; ರಿಷ್ಯಂತ್ ದಾವಣಗೆರೆಗೆ ಬಂದು ಇನ್ನು ಒಂದು ತಿಂಗಳಾಗಿಲ್ಲ. ಮರಳು ಅಡ್ಡೆ, ಅಕ್ಕಿ ಅಕ್ರಮ ಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.
ಕಳ್ಳತನ, ಸರಗಳ್ಳತನ, ಗಾಂಜಾ ಮಾರಾಟ ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸಲಾಗಿದೆ. ಹತ್ತು ದಿನಗಳೊಳಗೆ ನಡೆದ ಸರಗಳ್ಳತನ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಟ್ರಾಫಿಕ್ ವಿಚಾರದಲ್ಲಿ ಕಟ್ಟುನಿಟ್ಟಾಗಿ ಕ್ರಮ ಎಂದಿದ್ದು, ಸೋಮವಾರದಿಂದ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ? ಎಂಬುದು ಗೊತ್ತಾಗಲಿದೆ.












Click it and Unblock the Notifications