ಕಚ್ಚಾವಸ್ತುಗಳೇ ಇಲ್ಲಿ ಕಲಾಕೃತಿ, ಈ ಶಾಲಾ ವಿದ್ಯಾರ್ಥಿಗಳಲ್ಲಿ ಇದೆಂಥಾ ಶಕ್ತಿ?
ದಾವಣಗೆರೆ, ನವೆಂಬರ್.29: ಕಚ್ಚಾ ವಸ್ತುಗಳಿಂದ ಕಾರಂಜಿ, ಪೇಪರ್ ನಿಂದ ಟೋಪಿ, ಕಾರ್ಡ್ ಶೀಟ್ ನಲ್ಲಿ ಕಲರ್ ಕಲರ್ ಕನ್ನಡಕ, ವಿವಿಧ ತರಹದ ಹೂವುಗಳು, ಗಣಿತ ಕಲಾಕೃತಿಗಳು, ಹೀಗೆ ಹತ್ತಾರು ಆಕರ್ಷಣೆಗಳು ಕಂಡು ಬಂದಿದ್ದು ದಾವಣಗೆರೆಯಲ್ಲಿ ನಡೆದ ಮಕ್ಕಳ ಹಬ್ಬದಲ್ಲಿ.
ಹೌದು, ದಾವಣಗೆರೆ ನಗರದ ಸಮೀಪದ ಹಳೆ ಕುಂದುವಾಡ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಮಕ್ಕಳ ವಿಜ್ಞಾನ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಈ ಹಬ್ಬದಲ್ಲಿ ವಿವಿಧ ಕಲಾಕೃತಿಗಳನ್ನು ಮಕ್ಕಳು ತಯಾರಿಸಿದರು.

ಮುಖ್ಯವಾಗಿ ಶಾಲೆಯ ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಸಾಂಪ್ರದಾಯಿಕ ಶೈಲಿಯ ಪಂಚೆ, ಅಂಗಿ, ಟವಲ್, ಟೋಪಿ ಧರಿಸಿ ಗಮನ ಸೆಳೆದರು. ಜೊತೆಗೆ ವಿದ್ಯಾರ್ಥಿಗಳು ಗಾಂಧೀಜಿ, ಅಂಬೇಡ್ಕರ್, ರೈತ, ಒನಕೆ ಒಬ್ಬವ್ವ, ಭುವನೇಶ್ವರಿ ವೇಷಭೂಷಣ ಧರಿಸಿ ಗ್ರಾಮದ ತುಂಬಾ ಡ್ರಮ್ ಸೆಟ್ ಬಾರಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪೇಪರ್ ಕಾರಂಜಿ, ಕನ್ನಡಕ ತಯಾರು ಮಾಡಿದ ಪುಟಾಣಿಗಳು
ಕಚ್ಚಾ ವಸ್ತುಗಳಿಂದ ಕಾರಂಜಿ, ಪೇಪರ್ ನಿಂದ ಟೋಪಿಗಳು, ಶೀಟ್ ನಲ್ಲಿ ಕಲರ್ ಕಲರ್ ಕನ್ನಡಕ, ವಿವಿಧ ತರಹದ ಹೂವುಗಳು, ಗಣಿತ ಕಲಾಕೃತಿಗಳು. ಹೀಗೆ ಹತ್ತಾರು ಕಲಾಕೃತಿಗಳನ್ನು ಮಕ್ಕಳೇ ತಮ್ಮ ಕೈಯ್ಯಾರೆ ತಯಾರಿಸಿದ್ದು ವಿಶಿಷ್ಟವಾಗಿತ್ತು.

ಎರಡು ದಿನ ನಡೆಯುವ ಈ ಹಬ್ಬದಲ್ಲಿ ಮಕ್ಕಳು ವಿವಿಧ ರೀತಿಯಲ್ಲಿ ಕಲಾಕೃತಿಗಳು, ವಿಜ್ಙಾನ ವಸ್ತುಗಳನ್ನು ತಯಾರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಇಒ ಸಿದ್ದಪ್ಪ, ವೈಜ್ಞಾನಿಕವಾಗಿ ಕಲಿಯಲು ಈ ಕಲಿಕಾ ಹಬ್ಬ ಸಹಕಾರಿಯಾಗಲಿದೆ. ವಿಜ್ಞಾನ, ಗಣಿತ ಕಷ್ಟ ಎನ್ನುತ್ತಾರೆ. ಈ ಕಲಿಕಾ ಹಬ್ಬದಿಂದ ಈ ವಿಷಯಗಳು ಸುಲಭ ಎನ್ನುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಒಟ್ಟಾರೆ ಎರಡು ದಿನಗಳ ಈ ಕಲಿಕಾ ಹಬ್ಬದಲ್ಲಿ ಮಕ್ಕಳು, ವೈಜ್ಞಾನಿಕ ಕಿಟ್ ಬಳಸಿ ವಿವಿಧ ವಸ್ತುಗಳನ್ನು ತಯಾರಿಸಲಿದ್ದು, ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.












Click it and Unblock the Notifications