ಸಿದ್ದರಾಮಯ್ಯರ ಅಮೃತ ಮಹೋತ್ಸವದ ಯಶಸ್ಸಿನಿಂದ ಕೈ ಪಾಳೆಯದಲ್ಲಿ ಹುರುಪು... ಇತಿಹಾಸ ಮರುಕಳಿಸುತ್ತಾ...?
ದಾವಣಗೆರೆ, ಆಗಸ್ಟ್ 4: ದಾವಣಗೆರೆಯಲ್ಲಿ ಬುಧವಾರ ನಡೆದ ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಕಾರ್ಯಕರ್ತರ ಆಗಮಿಸಿದ್ದರಿಂದ ಅದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಯಶಸ್ಸಿಯಾಗಿದ್ದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಲ್ಲಿ ನವಚೈತನ್ಯ ತಂದಿದೆ.
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸೇರಿದ್ದ ಜನಸ್ತೋಮ, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರದರ್ಶಿಸಿದ ಒಗ್ಗಟ್ಟು, ವೇದಿಕೆ ಮೇಲೆ ಮಾತನಾಡಿದ ಕಾಂಗ್ರೆಸ್ ನಾಯಕರ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಹುರುಪು ತಂದಿದೆ.
ಸಿದ್ದರಾಮಯ್ಯರ ಶಕ್ತಿ ಪ್ರದರ್ಶನ ಎಂದೇ ಬಿಂಬಿತವಾಗಿದ್ದ ಈ ಮಹೋತ್ಸವ ಅಕ್ಷರಶಃ ಸಿದ್ದರಾಮಯ್ಯರ ಬಲ ಏನು ಎಂಬುದು ತೋರ್ಪಡಿಸಿತು. ದಾವಣಗೆರೆ ಮೊದಲಿನಿಂದಲೂ ರಾಜಕಾರಣಿಗಳಿಗೆ ಅದೃಷ್ಟದ ತಾಣ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ದಾವಣಗೆರೆಯಿಂದಲೇ ಮೊದಲ ಪ್ರಚಾರ ಸಭೆ ನಡೆಸಿದ್ದು. ಇಲ್ಲಿ ಸಮಾವೇಶಕ್ಕೆ ಬಂದು ಹೋದ ಮೇಲೆ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿತ್ತು. ಪ್ರಧಾನ ಮಂತ್ರಿಯಾಗಿ ಮನಮೋಹನ್ ಸಿಂಗ್ ಆಯ್ಕೆಯಾಗಿದ್ದರು. ಆ ಬಳಿಕ ದಾವಣಗೆರೆಯಲ್ಲಿ ಚುನಾವಣೆಗೆ ಮುನ್ನ ನಡೆಯುವ ಸಮಾವೇಶ, ಉತ್ಸವಗಳಿಗೆ ಹೆಚ್ಚು ಮಹತ್ವ ಬಂದಿದೆ.

ಬಂಗಾರಪ್ಪ ಸಮಾವೇಶ ನೆನಪಿಸಿದ ಸಿದ್ದರಾಮೋತ್ಸವ
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕಾಂಗ್ರೆಸ್ ಬಿಟ್ಟಾಗ ದಾವಣಗೆರೆಯಲ್ಲಿ ನಡೆಸಿದ ಸಮಾವೇಶವನ್ನು ಇನ್ನೂ ಜನರು ನೆನಪು ಮಾಡಿಕೊಳ್ಳುತ್ತಾರೆ. ಅಷ್ಟು ಅಚ್ಚುಕಟ್ಟಾಗಿ, ಲಕ್ಷಾಂತರ ಜನರು ಸೇರಿದ್ದ ಸಮಾವೇಶ ಮತ್ತೆ ಮರುಕಳಿಸುವಂತೆ ಮಾಡಿದ್ದು ಸಿದ್ದರಾಮೋತ್ಸವ. ಬಂಗಾರಪ್ಪ ಸಹ ತನ್ನ ಶಕ್ತಿ ಏನು ಎಂಬುದನ್ನು ಇಲ್ಲಿ ತೋರಿಸಿದ್ದರು. ಆಗ ದಾವಣಗೆರೆ ಜಿಲ್ಲೆಯಾಗಿರಲಿಲ್ಲ. ಚಿತ್ರದುರ್ಗ ಜಿಲ್ಲೆ ಆಗಿತ್ತು. ಮಧ್ಯಕರ್ನಾಟಕದ ಹೆಬ್ಬಾಗಿಲು ಅಂತಾ ಕರೆಯಲ್ಪಡುವ ದಾವಣಗೆರೆ ಅಂದರೆ ಮೊದಲಿನಿಂದಲೂ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳಿಗೆ ಅಚ್ಚುಮೆಚ್ಚು. ಜೊತೆಗೆ ಅದೃಷ್ಟದ ತಾಣ ಎಂಬುದು ಮೊದಲಿನಿಂದಲೂ ಇದೆ. ಇದೇ ಫಾರ್ಮುಲಾವನ್ನು ಎಲ್ಲರೂ ಬಳಸತೊಡಗಿದ್ದಾರೆ.

ಸಮಾವೇಶ ನಡೆಸಿ ಸಿಎಂ ಆಗಿದ್ದ ಎಸ್ಎಂ ಕೃಷ್ಣ
ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆ ದಾವಣಗೆರೆಯಲ್ಲಿ ಪಾಂಚಜನ್ಯ ಮೊಳಗಿಸಿದ್ದರು. ಆಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಇನ್ನು ಸಿದ್ದರಾಮಯ್ಯ ಅವರು ಜೆಡಿಎಸ್ ನಿಂದ ಉಚ್ಛಾಟನೆಗೊಂಡಾಗ ದಾವಣಗೆರೆಯಲ್ಲಿ ನಡೆಸಿದ್ದ ಅಹಿಂದ ಸಮಾವೇಶ ಯಶಸ್ವಿಯಾಗಿತ್ತು. ಆಗಲೂ ನಾಡಿನ ಮೂಲೆ ಮೂಲೆಗಳಿಂದ ಅಹಿಂದ ಸಮುದಾಯವು ಸಮುದ್ರೋಪಾದಿಯಲ್ಲಿ ಹರಿದು ಬಂದಿತ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ.

ಅಮಿತ್ ಶಾ ಅಕ್ಕಿಮುಷ್ಠಿ ಅಭಿಯಾನ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ ದಾವಣಗೆರೆಯ ಭಾತಿಯಿಂದ ಅಕ್ಕಿಮುಷ್ಠಿ ಅಭಿಯಾನಕ್ಕೆ ಚಾಲನೆ ನೀಡುವ ಚುನಾವಣೆಯ ಕಹಳೆ ಮೊಳಗಿಸಿದ್ದರು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರದಿದ್ದರೂ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಾರಥ್ಯದ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದರೂ ಹೆಚ್ಚು ದಿನ ಸರಕಾರ ಉಳಿಯಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಶಾಸಕರನ್ನು ಆಪರೇಷನ್ ಕಮಲ ಮಾಡಿ ರಾಜೀನಾಮೆ ಕೊಡಿಸಿ ಮತ್ತೆ ಯಡಿಯೂರಪ್ಪ ಸಿಎಂ ಆದರು.
ಯಡಿಯೂರಪ್ಪ ಅಧಿಕಾರದಿಂದ ಇಳಿದರೂ ಕಳೆದ ಒಂದು ವರ್ಷದಿಂದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಈ ಎಲ್ಲಾ ಕಾರಣಗಳಿಗೆ ಚುನಾವಣೆಗೆ ಮುನ್ನ ದಾವಣಗೆರೆಯಲ್ಲಿ ದೊಡ್ಡದಾದ ಸಮಾವೇಶ ನಡೆಸಿದರೆ ಅಧಿಕಾರ ಸಿಗಬಹುದು ಎಂಬ ಲೆಕ್ಕಾಚಾರ ಪಕ್ಷಗಳಲ್ಲಿ ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ.

ಇತಿಹಾಸ ಮರುಕಳಿಸುವಂತೆ ಮಾಡುತ್ತಾ?
ದಾವಣಗೆರೆ, ಹಾವೇರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕುರುಬ ಸಮುದಾಯದವರು ಹೆಚ್ಚಿದ್ದಾರೆ. ಸಿದ್ದರಾಮಯ್ಯಗೂ ಇಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮತ್ತು ಅದೃಷ್ಟದ ನೆಲ ಎಂಬ ನಂಬಿಕೆ ಇರುವ ಕಾರಣಕ್ಕೆ ಕಾಂಗ್ರೆಸ್ ನಾಯಕರು, ಸ್ನೇಹಿತರು, ಹಿತೈಷಿಗಳು ಸೇರಿಕೊಂಡು ಸಿದ್ದರಾಮಯ್ಯರ ಹುಟ್ಟುಹಬ್ಬವನ್ನು ದೊಡ್ಡ ಉತ್ಸವದಂತೆ ಮಾಡಿದ್ದಾರೆ. ಅವರಂದುಕೊಂಡದ್ದಕ್ಕಿಂತ ಹೆಚ್ಚಿನ ಜನರು ಆಗಮಿಸಿದ್ದು ಮತ್ತಷ್ಟು ಶಕ್ತಿ ಬರುವಂತೆ ಮಾಡಿದೆ.
ಸಿದ್ದರಾಮಯ್ಯ ಸಹ ಜನರನ್ನು ಕಂಡು ಅದ್ಭುತವಾಗಿ ಭಾಷಣ ಮಾಡಿದ್ದಾರೆ. ತನ್ನ ಶಕ್ತಿ ಏನೆಂಬುದನ್ನು ವಿಪಕ್ಷಗಳು ಹಾಗೂ ಸ್ವಪಕ್ಷೀಯದವರಿಗೆ ಸಂದೇಶ ರವಾನಿಸಿದ್ದಾರೆ. ಒಟ್ಟಾರೆ, ಈ ಅಮೃತ ಮಹೋತ್ಸವ ಎನ್ನುವ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಆಶಾಕಿರಣ ಮೂಡುವಂತೆ ಮಾಡಿದೆ. ದಾವಣಗೆರೆ ನೆಲದಲ್ಲಿ ನಡೆದ ಈ ಸಮಾವೇಶ ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡುತ್ತಾ? ಇದು ಆಗುತ್ತೋ ಇಲ್ಲವೋ ಎಂಬುದು 2023ರ ವಿಧಾನಸಭೆ ಚುನಾವಣೆಯ ಫಲಿತಾಂಶದ ದಿನ ಗೊತ್ತಾಗಲಿದೆ.












Click it and Unblock the Notifications