ದಾವಣಗೆರೆ; ತುಂಬಿದ ಶಾಂತಿ ಸಾಗರ ಕೆರೆ, ರೈತರಿಗೆ ಹರ್ಷ ಮತ್ತು ಸಂಕಟ!

ದಾವಣಗೆರೆ, ಆಗಸ್ಟ್‌, 12: ಏಷ್ಯಾ ಖಂಡದಲ್ಲಿಯೇ 2ನೇ ಅತೀ ದೊಡ್ಡ ಕೆರೆ ಎಂದು ಹೆಸರುವಾಸಿಯಾಗಿರುವ ಸೂಳೆಕೆರೆ (ಶಾಂತಿ ಸಾಗರ) ಸಂಪೂರ್ಣ ಭರ್ತಿಯಾಗಿದೆ. ಸೂಳೆಕೆರೆ ಭರ್ತಿಯಾಗಿರುವುದು ಒಂದೆಡೆ ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದರೆ, ಮತ್ತೊಂದೆಡೆ ಕೆರೆ ಕೋಡಿ ಬಿದ್ದರೆ ಬೆಳೆದ ಬೆಳೆಗಳು ನೀರುಪಾಲಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಮಲೆನಾಡು ಹಾಗೂ ಚನ್ನಗಿರಿಯಲ್ಲಿಯೂ ಅಬ್ಬರದ ಮಳೆ ಸುರಿದಿದ್ದು, ಅಲ್ಲಿನ ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಕೆರೆಗೆ ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನು ಭದ್ರಾ ಜಲಾಶಯದಿಂದಲೂ ಭಾರೀ ಪ್ರಮಾಣದಲ್ಲಿ ನೀರು ಹೊರಗೆ ಬಿಡುತ್ತಿರುವುದರಿಂದ ಸೂಳೆಕೆರೆ ಮೈದುಂಬಿ ಹರಿಯುತ್ತಿದ್ದು, ಇಲ್ಲಿನ ಮಂಟಪ ಜಲಾವೃತವಾಗಿದೆ. ಮಳೆಗಾಲ ಮುಗಿಯುವ ಮುನ್ನವೇ ಕೆರೆ ತುಂಬಿ ಕೋಡಿ ಬಿದ್ದಿದೆ.

ಲಕ್ಷಾಂತರ ಹೆಕ್ಟೇರ್‌ ಭೂಮಿಗೆ ನೀರುಣಿಸುವ ಈ ಕೆರೆ ರೈತರ ಜೀವನಾಡಿಯಾಗಿದೆ. ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಆಗುವುದು ಇದೇ ಕೆರೆಯಿಂದಲೇ. ಇದು ಪೂರ್ಣ ಪ್ರಮಾಣದಲ್ಲಿ ತುಂಬಿರುವುದು ಕಡಿಮೆ. ಕಳೆದ ಎರಡು ವರ್ಷಗಳಿಂದಲೂ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಕೆರೆಯು ತುಂಬಿಹರಿಯುತ್ತಲೇ ಇದೆ.

ಮೊದಲೆಲ್ಲ ಸ್ವಲ್ಪ ಪ್ರಮಾಣದಲ್ಲಿ ಕೆರೆ ಕೋಡಿ ಬಿದ್ದಿತ್ತು. ಆದರೆ ಈ ಬಾರಿ ಮಳೆಗಾಲ ಇನ್ನು ಮುಗಿದಿಲ್ಲ. ಅಷ್ಟರಲ್ಲೇ ಕೆರೆ ತುಂಬಿರುವುದು ರೈತರಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಮಳೆ ಇದೇ ರೀತಿ ಮುಂದುವರೆದರೆ ಹಾಗೂ ಭದ್ರಾ ಜಲಾಶಯದಿಂದ ಮತ್ತಷ್ಟು ಹೆಚ್ಚಿನ ನೀರು ಹೊರಬಿಟ್ಟರೆ ಈ ಭಾಗದ ಅಡಿಕೆ ಬೆಳೆಗಾರರು ತೊಂದರೆಗೆ ಸಿಲುಕಲಿದ್ದಾರೆ. ಇದೀಗ ಕೊಯ್ಲಿನ ವೇಳೆ ಆಗಿರುವುದರಿಂದ ಅಡಿಕೆ ಬೆಳೆಗಾರು ತೋಟದಲ್ಲಿ ನೀರು ನಿಂತರೆ ಫಸಲು ಕೊಯ್ಯುವುದು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

 ಕೆರೆ ಕೋಡಿ ಬೀಳುವ ಆತಂಕದಲ್ಲಿರುವ ರೈತರು

ಕೆರೆ ಕೋಡಿ ಬೀಳುವ ಆತಂಕದಲ್ಲಿರುವ ರೈತರು

ಮಳೆ ಹೀಗೆ ಮುಂದುವರೆದರೆ ಅಡಿಕೆ ಬೆಳೆ ಕಟಾವು ಮಾತ್ರವಲ್ಲ, ಅಡಿಕೆ ಒಣಗಿಸುವುದು ಬಹುದೊಡ್ಡ ಸಮಸ್ಯೆಯಾಗಬಹುದು. ಕೆರೆಗೆ ಇನ್ನು ಜಾಸ್ತಿ ನೀರು ಬಂದರೆ ಕೋಡಿ ಬೀಳುವುದಂತೂ ತಪ್ಪಿದ್ದಲ್ಲ ಎಂದು ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ಚನ್ನಗಿರಿ ಅಡಿಕೆ ನಾಡು ಅಂತಲೇ ಪ್ರಸಿದ್ಧಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆ ಬೆಳೆ ಬೆಳೆಯುವುದು ಈ ತಾಲೂಕಿನಲ್ಲಿ ಮಾತ್ರ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿರುವ ಈ ಭಾಗದ ರೈತರು ಇದೀಗ ಭಾರೀ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ತೋಟಗಳಲ್ಲಿ ನೀರು ನಿಂತರೆ ಅಡಿಕೆ ಹರಳು ಉದುರುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

ಈಗಾಗಲೇ ಬೆಳೆದಿದ್ದ ಭತ್ತ, ಮೆಕ್ಕಜೋಳ ಸೇರಿದಂತೆ ಇತರೆ ಬೆಳೆಗಳು ಭಾರೀ ಮಳೆಯಿಂದ ಜಲಾವೃತವಾಗಿವೆ. ಬೆಳೆಗಳನ್ನು ಕಳೆದುಕೊಂಡ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ. ಇನ್ನು ಅಧಿಕಾರಿಗಳು ಸರ್ವೇ ನಡೆಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಮಳೆ ನೀರು ಮನೆಗಳಿಗೂ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಸೇತುವೆಗಳು ಜಲಾವೃತಗೊಂಡಿದ್ದು, ಜನರು ಓಡಾಟಕ್ಕೆ ತುಂಬಾ ಕಷ್ಟವಾಗಿದೆ.

 ತುಂಬಿ ತುಳುಕುತ್ತಿರುವ ಜಿಲ್ಲೆಯ ಶಾಂತಿಸಾಗರ

ತುಂಬಿ ತುಳುಕುತ್ತಿರುವ ಜಿಲ್ಲೆಯ ಶಾಂತಿಸಾಗರ

ಸೂಳೆಕೆರೆ ತುಂಬಿತೆಂದರೆ ಚಿತ್ರದುರ್ಗ ಹಾಗೂ ದಾವಣಗೆರೆ ಜನರಲ್ಲಿ ಸಂತಸ ಮೂಡುತ್ತದೆ. ಈ ಕೆರೆ ನೀರನ್ನೇ ನಂಬಿಕೊಂಡು ಇಲ್ಲಿನ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೊಂದೆಡೆ ಕೆರೆ ಅಪಾಯಮಟ್ಟದಲ್ಲಿ ತುಂಬಿದ್ದು, ಜನರಿಗೆ ಆತಂಕ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಶಾಂತಿಸಾಗರ ಅಚ್ಚುಕಟ್ಟು ಮತ್ತು ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಲೇ ಇದೆ. ಸಣ್ಣದಾಗಿ ಕೋಡಿ ಬಿದ್ದಿದ್ದು, ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಅಲ್ಲಿನ ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ.

 ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮದ ಎಚ್ಚರಿಕೆ

ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮದ ಎಚ್ಚರಿಕೆ

ಸೂಳೆಕೆರೆ ಸುತ್ತ ಹಾಗೂ ಕೋಡಿ, ಹಳ್ಳದ ಅಕ್ಕಪಕ್ಕ ಜನ, ಜಾನುವಾರುಗಳ ಓಡಾಟವನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಓಡಾಡುವುದು ಮತ್ತು ಮೊಬೈಲ್ ಫೋನ್‌ನಲ್ಲಿ ಸೆಲ್ಫೀ ತೆಗೆಯುವುದು ಇತರೆ ಯಾವುದೇ ಚಟುವಟಿಕೆಗಳನ್ನು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಸೂಳೆಕೆರೆ ಸುತ್ತಮುತ್ತಲಿನ ಗುಡ್ಡವು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಸ ಲೋಕವೇ ಅನಾವರಣಗೊಂಡಿದೆ. ಇದನ್ನು ನೋಡಲು ವೀಕೆಂಡ್‌ಗಳಲ್ಲಿ ಜನಸಾಗರವೇ ಬರುತ್ತದೆ. ಕೆಲವರಂತೂ ತುಂಬಿರುವ ಕೆರೆಯ ಮುಂದೆ ನಿಂತು ಮೊಬೈಲ್‌ಗಳಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದ್ದು, ಇಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 ಕೆರೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ

ಕೆರೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ

ನಿಯಮಬಾಹಿರ ಚಟುವಟಿಕೆಗಳಿಂದ ಆದ ಯಾವುದೇ ಅನಾಹುತಗಳಿಗೆ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಇಲಾಖೆಯು ನೀಡಿರುವ ಸೂಚನೆಯನ್ನು ಸಾರ್ವಜನಿಕರು ಹಾಗೂ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬರುವವರು ಪಾಲಿಸಬೇಕು. ಇಲ್ಲದಿದ್ದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ತ್ಯಾವಣಿಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+