ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ, ಉತ್ತರದಲ್ಲಿ ಮಗ ಎಸ್.ಎಸ್.ಮಲ್ಲಿಕಾರ್ಜುನ್ ಅಬ್ಬರದ ಪ್ರಚಾರ
ದಾವಣಗೆರೆ, ಏಪ್ರಿಲ್, 03: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಎಲ್ಲಾ ಪಕ್ಷಗಳ ರಾಜಕಾರಣಿಗಳು ಆಯಾ ಕ್ಷೇತ್ರಗಳಲ್ಲಿ ಮತಬೇಟೆ ಮುಂದುವರೆಸಿದ್ದಾರೆ. ಇದೇ ರೀತಿ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ, ಉತ್ತರದಲ್ಲಿ ಮಗ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು. ಈ ವೇಳೆ ಅವರ ಮಗ ಮಲ್ಲಿಕಾರ್ಜುನ್ ಸಹ ಇದ್ದರು.

ಶಾಮನೂರಿಗೆ ಆಗಮಿಸಿದ S.S.ಮಲ್ಲಿಕಾರ್ಜುನ್
ಇನ್ನು ಶಾಮನೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಈಶ್ವರ ದೇಗುಲದಲ್ಲಿ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರ ಜೊತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಎಸ್.ಎಸ್.ಮಲ್ಲಿಕಾರ್ಜುನ್ ಬಳಿಕ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ದುಮುಕಿದರು. ಮಲ್ಲಿಕಾರ್ಜುನ್ ಅವರು ಶಾಮನೂರಿಗೆ ಆಗಮಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಜಮಾಯಿಸಿದರು.
ಕಾರಿನಿಂದ ಇಳಿಯುತ್ತಿದ್ದಂತೆ ಮಲ್ಲಿಕಾರ್ಜುನ್ ಅವರ ಪರ ಘೋಷಣೆಗಳು ಕೇಳಿಬಂದವು. ನಂತರ ಪಟಾಕಿ ಸಿಡಿಸಲಾಯಿತು. ಮಲ್ಲಿಕಾರ್ಜುನ್ ಅವರು ದೇವಸ್ಥಾನಕ್ಕೆ ಬರುತ್ತಿದ್ದಂತೆ ನೂಕು ನುಗ್ಗಲು ಆಯಿತು. ಇನ್ನು ಕೆಲವರು ಅವರಿಗೆ ಹೂವಿನ ಹಾರ ಹಾಕುವ ಮೂಲಕ ಬರಮಾಡಿಕೊಂಡರು.

ಬಿಜೆಪಿಗೆ ಸವಾಲು ಹಾಕಿದ ಎಸ್.ಎಸ್.ಮಲ್ಲಿಕಾರ್ಜುನ್
ದೇವರಲ್ಲಿ ಗೆಲುವಿಗೆ ಪ್ರಾರ್ಥಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪ್ರಚಾರಕ್ಕೆ ಹೋಗುವಾಗಲೂ ಅಭಿಮಾನಿಗಳ ತಳ್ಳಾಟ, ನೂಕಾಟ ಮುಂದುವರಿಯಿತು. ನೂರಾರು ಮಹಿಳೆಯರು ಸಹ ಮಲ್ಲಿಕಾರ್ಜುನ್ ಅವರಿಗೆ ಸ್ವಾಗತ ಕೋರಿದರು. ಈ ವೇಳೆ ಮಾಧ್ಯಮದವರ ಬಳಿ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ದಾವಣಗೆರೆ ಉತ್ತರದಿಂದ ಸಿಎಂ ಆದರೂ ಬರಲಿ, ಪ್ರಧಾನಿ ನರೇಂದ್ರ ಮೋದಿ ಬೇಕಾದರೂ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
ಯಾರೂ ಬೇಕಾದರೂ ನನ್ನ ವಿರುದ್ಧ ಸ್ಪರ್ಧಿಸಲಿ, ಬೇಡ ಅಂತಾ ಹೇಳಿಲ್ಲ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರು ಬೇಸತ್ತು ಹೋಗಿದ್ದಾರೆ. ಶೇಕಡಾ 40 ಸರ್ಕಾರ ಎಂದು ಮಾಧ್ಯಮಗಳಲ್ಲಿ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಯಾವ ಅಭಿವೃದ್ಧಿ ಆಗಿದೆ ಎಂಬುದನ್ನು ಹೇಳಲಿ. ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಈಗಾಗಲೇ ಎಲ್ಲೆಡೆ ಪಕ್ಷದ ಪರ ಅಲೆ ಎದ್ದಿದ್ದು, ಇದು ನಮಗೂ ಹುಮ್ಮಸ್ಸು ತಂದಿದೆ ಎಂದು ತಿಳಿಸಿದರು.
ಸ್ಪರ್ಧೆ ಮಾಡುವಂತೆ ಜನರೇ ಈ ಬಾರಿ ಒತ್ತಾಯ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೇ ಜನರ ಒಲವು ಇದೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು. ಮಲ್ಲಿಕಾರ್ಜುನ್ ಅವರ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ಘಟನೆಯೂ ನಡೆಯಿತು. ನಂತರ ದೇವಸ್ಥಾನದ ಒಳಗಡೆಯೂ ನೂರಾರು ಮಂದಿ ಆಗಮಿಸಿದ್ದು, ನೂಕು ನುಗ್ಗಲು ಸಂಭವಿಸಿತು.
ಟಿಕೆಟ್ಗಾಗಿ ಭಾರಿ ಪೈಪೋಟಿ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಕಾಂಗ್ರೆಸ್ನಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮತ್ತೊಂದೆಡೆ ಎಸ್.ಎ.ರವೀಂದ್ರನಾಥ್ಗೆ ವಯಸ್ಸು ಆಗಿದ್ದು ಹಾಗೂ ಆರೋಗ್ಯ ಸಮಸ್ಯೆಯಿರುವ ಕಾರಣ ಅವರು ಸ್ಪರ್ಧಿಸುವುದು ಅನುಮಾನವಾಗಿದೆ. ಆದ್ದರಿಂದ ಉಳಿದವರು ಟಿಕೆಟ್ಗೆ ತೀವ್ರ ಪೈಪೋಟಿ ಹಾಗೂ ಲಾಬಿ ನಡೆಸತೊಡಗಿದ್ದಾರೆ.
ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್.ಟಿ.ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಜೀವನ್ ಮೂರ್ತಿ, ಕೆ. ಎಂ. ಸುರೇಶ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ. ಆದರೆ ಈ ಮೂವರಲ್ಲಿ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.












Click it and Unblock the Notifications