ದಾವಣಗೆರೆ; 13 ಕುಟುಂಬಗಳಿಗೆ ಆಘಾತ ತಂದ ಧಾರವಾಡದ ಅಪಘಾತ
ದಾವಣಗೆರೆ, ಜನವರಿ 15: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಗೋವಾ ಪ್ರವಾಸ ಹೊರಟಿದ್ದ 13 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧಾರವಾಡ ಹೊರವಲಯದಲ್ಲಿ ಈ ಅಪಘಾತ ನಡೆದಿದೆ.
ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ಮುಂಜಾನೆ ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. 10 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರೆಲ್ಲರೂ ದಾವಣಗೆರೆಯ ವಿದ್ಯಾನಗರದ ನಿವಾಸಿಗಳು. ತಾಯಿ-ಮಗಳು, ಮಾಜಿ ಶಾಸಕರ ಸೊಸೆ, ಸ್ತ್ರೀ ರೋಗ ತಜ್ಞೆ ಸೇರಿದಂತೆ ಹಲವರು ಮೃತಪಟ್ಟಿದ್ದಾರೆ.
ಎಲ್ಲರೂ ಅಪರೂಪಕ್ಕೆ ಒಂದೇ ಕಡೆ ಸೇರಿದ್ದು, ಗೋವಾಕ್ಕೆ ಪ್ರವಾಸ ಹೊರಟಿದ್ದರು. ಮುಂಜಾನೆ 3.30ರ ಸುಮಾರಿಗೆ ದಾವಣಗೆರೆಯಿಂದ ಟೆಂಪೋ ಟ್ರಾವೆಲರ್ ಹೊರಟಿತ್ತು. ಪ್ರವಾಸ ಹೊರಟಾಗ ಎಲ್ಲರೂ ಸಂತಸದಿಂದ ಸೆಲ್ಪೀ ತೆಗೆದುಕೊಂಡಿದ್ದರು.

ಪ್ರವಾಸ ಹೊರಟವರು ಸಾವು
ಜಗಳೂರಿನ ಮಾಜಿ ಶಾಸಕ ಗುರುಸಿದ್ಧನಗೌಡ ಅವರ ಸೊಸೆ, ಸ್ತ್ರೀ ರೋಗ ತಜ್ಞೆ, ಮಂಜುಳಾ, ರಾಜೇಶ್ವರಿ, ಉಷಾ, ವೇದ, ಮಂಜುಳಾ ಸೇರಿದಂತೆ 10 ಮಂದಿ ಅಪಘಾತ ನಡೆದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲೇಡಿಸ್ ಕ್ಲಬ್ನ ಸದಸ್ಯರು
ಎಲ್ಲರೂ ದಾವಣಗೆರೆಯ ವಿದ್ಯಾನಗರದ ನಿವಾಸಿಗಳು ಮತ್ತು ಲೇಡಿಸ್ ಕ್ಲಬ್ನ ಸದಸ್ಯರಾಗಿದ್ದಾರೆ. ಒಟ್ಟು 17 ಮಂದಿ ಮಹಿಳೆಯರು ಸಂಕ್ರಮಣ ಹಿನ್ನೆಲೆಯಲ್ಲಿ ಟೆಂಪೋ ಟ್ರಾವೆಲರ್ನಲ್ಲಿ ಗೋವಾಕ್ಕೆ ತೆರಳುತ್ತಿದ್ದರು. ಧಾರವಾಡ ಬೈಪಾಸ್ ಬಳಿ ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಎದುರಿನಿಂದ ಬಂದ ಮರಳು ತುಂಬಿದ್ದ ಟಿಪ್ಪರ್ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿದೆ.

ಛಿದ್ರವಾಗಿರುವ ಮೃತ ದೇಹಗಳು
ಅಪಘಾತದ ರಭಸಕ್ಕೆ ಟೆಂಪೋ ಟ್ರಾವೆಲರ್ ಸಂಪೂರ್ಣ ಜಖಂಗೊಂಡಿವೆ. ಮೃತದೇಹಗಳು ಛಿದ್ರಗೊಂಡಿದ್ದು, ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟರು. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video
|
ಮೃತಪಟ್ಟವರ ಹೆಸರುಗಳು
1) ಪೂರ್ಣಿಮಾ
2) ಪ್ರವೀಣಾ
3) ಆಶಾ ಜಗದೀಶ್
4) ಮಾನಸಿ
5) ಪರಂಜ್ಯೋತಿ
6) ರಾಜೇಶ್ವರಿ ಶಿವಕುಮಾರ
7) ಶಕುಂತಲಾ
8) ಉಷಾ
9) ವೇದಾ
10) ನಿರ್ಮಲಾ
11) ಮಂಜುಳಾ ನಿಲೇಶ
12) ರಜನಿ ಶ್ರೀನಿವಾಸ
13) ಪ್ರೀತಿ ರವಿಕುಮಾರ












Click it and Unblock the Notifications