ಅಮೆರಿಕದಲ್ಲಿ ಜನಾಂಗೀಯ ನಿಂದನೆ: ದಾವಣಗೆರೆಯಲ್ಲಿ ಖಂಡನೆ
ದಾವಣಗೆರೆ, ಜೂನ್ 24: ಅಮೆರಿಕದಲ್ಲಿ ಜನಾಂಗೀಯ ನಿಂದನೆ ಹಾಗೂ ಜಾರ್ಜ್ ಪ್ಲಾಯ್ಡ್ ಕೊಲೆ ಮತ್ತು ಜನಾಂಗೀಯವಾದದ ವಿರುದ್ಧ ಅಮೇರಿಕನ್ನರ ಹೋರಾಟ ಬೆಂಬಲಿಸಿ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಕಾರ್ಮಿಕ ಸಂಘಟನೆಗಳ ಸದಸ್ಯರು ಗಾಂಧಿ ವೃತ್ತದಲ್ಲಿಂದು ಜಂಟಿಯಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಎಚ್.ಕೆ ರಾಮಚಂದ್ರಪ್ಪ ಮಾತನಾಡಿ, ಇತ್ತೀಚಿಗೆ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ಯುವಕನನ್ನು ಪೊಲೀಸರು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆಗೈದರು. ಕಪ್ಪು ಜನಾಂಗಕ್ಕೆ ಸೇರಿದ್ದಾನೆಂಬ ಕಾರಣಕ್ಕೆ ಅವನನ್ನು ಅಮಾನುಷವಾಗಿ ಕೊಲ್ಲಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೇರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಜನಾಂಗೀಯವಾದಕ್ಕೆ ರಾಜ್ಯ ಯಂತ್ರವನ್ನು ಬಳಸಿಕೊಂಡು ಪುಷ್ಠಿ ನೀಡಲಾಗಿದೆ. ಇದರ ವಿರುದ್ಧ ಅಮೆರಿಕ ಇಂದು ಬೃಹತ್ ಜನ ಹೋರಾಟಕ್ಕೆ ಸಾಕ್ಷಿಯಾಗಿದೆ. ಅಮೇರಿಕಾದ ಹೋರಾಟವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಾಗತಿಕ ಒಕ್ಕೂಟ ಜಗತ್ತಿನಾದ್ಯಂತ ಜುಲೈ 2 ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಎಲ್ಲಾ ದೇಶಗಳಲ್ಲಿಯೂ ಆಳುವ ವರ್ಗವು ನೈಜ ಜನ ಹೋರಾಟಗಳನ್ನು ಹತ್ತಿಕ್ಕಲು ಜನಾಂಗೀಯವಾದ, ಧರ್ಮ, ಭಾಷೆ ಮುಂತಾದ ವಿಭಜನಕಾರಿ ಧೋರಣೆಯನ್ನು ಅನುಸರಿಸುತ್ತದೆ. ಇಂತಹ ವಿಭಜಕ ದೋರಣೆಗಳಿಗೆ ವಿರುದ್ದವಾಗಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಲು ಜನ ಹೋರಾಟಗಳು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಮೇರಿಕನ್ ಜನರ ಹೋರಾಟದೊಂದಿಗೆ, ಎಲ್ಲಾ ದುಡಿಯುವ ಜನರು ಮತ್ತು ಪ್ರಗತಿಪರರು ಧನಿಗೂಡಿಸಬೇಕಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಆನಂದರಾಜು, ಕೆ.ಎಚ್ ಮಂಜುನಾಥ ಕೈದಾಳೆ, ಆವರಗೆರೆ ಚಂದ್ರು, ತಿಪ್ಪೇಸ್ವಾಮಿ ಅಣಬೇರು, ಮಹಾಂತೇಶ್, ಗುಡ್ಡಪ್ಪ, ಶ್ರೀನಿವಾಸ್ ಪರಶುರಾಮ್, ಐರಣಿ ಚಂದ್ರು, ಆವರಗೆರೆ ವಾಸು, ಸರೋಜ ಸೇರಿದಂತೆ ಅನೇಕರಿದ್ದರು.












Click it and Unblock the Notifications