ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದ ಖಾಸಗಿ ಬಸ್: ಪ್ರಾಣಾಪಾಯದಿಂದ ಪಾರಾಗಿದ್ದೇಗೆ ಪ್ರಯಾಣಿಕರು?
ದಾವಣಗೆರೆ, ಡಿಸೆಂಬರ್ 22: ಟ್ರಾನ್ಸ್ಫಾರ್ಮರ್ನಲ್ಲಿ ಕರೆಂಟ್ ಇದ್ದಿದ್ದರೆ ಭಾರೀ ಅನಾಹುತವೇ ಸಂಭವಿಸಿ ಬಿಡುತ್ತಿತ್ತು. ಬಸ್ನಲ್ಲಿ ಆರಾಮಾಗಿ ಕುಳಿತಿದ್ದವರಿಗೆ ಒಮ್ಮೆಲೆ ಭೂಮಿ ಕಂಪಿಸಿದ ಅನುಭವ. ಏನಾಯ್ತು ಅಂತಾ ನೋಡುವಷ್ಟರಲ್ಲಿ ಬಸ್ ಪಲ್ಟಿಯಾಗಿತ್ತು. ನೋಡನೋಡುತ್ತಿದ್ದಂತೆ ಎಲ್ಲರಲ್ಲೂ ಆತಂಕ, ಆಘಾತ ಹಾಗೂ ಭಯ ಆವರಿಸಿತ್ತು.
ಇಂಥದ್ದೊಂದು ಘಟನೆ ನಡೆದಿರುವುದು ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ. ಯಾಕೆಂದರೆ ಟ್ರಾನ್ಸ್ಫಾರ್ಮರ್ಗೆ ಬಸ್ ಡಿಕ್ಕಿ ಹೊಡೆದ ವೇಳೆ ಅದೃಷ್ಟವಶಾತ್ ಕರೆಂಟ್ ಇರಲಿಲ್ಲ. ಒಂದು ವೇಳೆ ವಿದ್ಯುತ್ ಪ್ರವಹಿಸುತ್ತಿದ್ದರೆ ದೊಡ್ಡ ಅನಾಹುತ ಸಂಭವಿಸಿ ಬಿಡುತ್ತಿತ್ತು. ಬಸ್ನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು. ಕೇವಲ ಗಾಯಗೊಂಡು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಹಿನ್ನೆಲೆ ಏನು?
ದಾವಣಗೆರೆ ತಾಲೂಕಿನ ಎಲೆಬೇತೂರು ಬಳಿ ಟ್ರಾನ್ಸ್ಫಾರ್ಮರ್ಗೆ ಬಸ್ ಡಿಕ್ಕಿ ಹೊಡೆದ ಬಳಿಕ ಬಸ್ ಪಲ್ಟಿಯಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾವಣಗೆರೆಯಿಂದ ಎಲೆಬೇತೂರು ಮಾರ್ಗವಾಗಿ ಜಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಎಲೆಬೇತೂರು ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ವಿನಾಯಕ ಹೆಸರಿನ ಖಾಸಗಿ ಬಸ್ ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಪಲ್ಟಿಯಾಗಿದ್ದು, ಬಸ್ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದಿದ್ದರಿಂದ ಕಂಬ ಮುರಿದಿದ್ದು, ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಘಟನೆ ಸಮಯದಲ್ಲಿ ವಿದ್ಯುತ್ ಪೂರೈಕೆ ಇರದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಅಲ್ಲದೇ ಈಗ ಆ ಭಾಗದಲ್ಲಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇನ್ನು ಬಸ್ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಎಲ್ಲರೂ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನ ಅಜಾಗರೂಕತೆಯೇ ದುರ್ಘಟನೆ ಕಾರಣ ಎನ್ನಲಾಗುತ್ತಿದೆ.
ವಿಷ ಸೇವಿಸಿ ತಾಯಿ, ಮಗ ಆತ್ಮಹತ್ಯೆಗೆ ಯತ್ನ
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ವಿಷ ಸೇವಿಸಿ ತಾಯಿ ಹಾಗೂ ಮಗ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರೈತ ಮಹಿಳೆ ಸಿದ್ದಮ್ಮ ಹಾಗೂ ಆಕೆಯ ಪುತ್ರ ಎಂ.ಎಸ್ಸಿ ಪದವೀಧರ ಉಜ್ಜನಗೌಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು.
ಬಿದರಕೆರೆ ಗ್ರಾಮದಲ್ಲಿ ರೈತ ಮಹಿಳೆ ಸಿದ್ದಮ್ಮ ಅವರ ಜಮೀನಿತ್ತು, ಇವರಿಗೆ ಇದೇ ಆಧಾರವಾಗಿದರೆ. ಆದರೆ ಕುಟುಂಬಕ್ಕೆ ಆಧಾರವಾಗಿದ್ದ ಜಮೀನಿನಲ್ಲಿ ಹರಿಯಾಣ ಮೂಲದ ರಿನಿವೂ ಪವರ್ ಕಂಪನಿ ಯಾವುದೇ ಅನುಮತಿ ಪಡೆಯದೇ ಪೊಲೀಸ್ ರಕ್ಷಣೆಯಲ್ಲಿ ಹೈ-ವೋಲ್ಟೇಜ್ ಟವರ್ ಅಳವಡಿಕೆ ಮಾಡಲು ಬಂದಿತ್ತು ಎಂಬುದು ರೈತ ಮಹಿಳೆಯ ಆರೋಪವಾಗಿದೆ.

ಈ ವೇಳೆ ಹೈಟೆನ್ಷನ್ ವೈರ್ ಅಳವಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದಮ್ಮ ಹಾಗೂ ಅವರ ಪುತ್ರ ಉಜ್ಜನಗೌಡರ ಜೊತೆ ಕಂಪೆನಿಯ ಸಿಬ್ಬಂದಿ ಜಗಳಕ್ಕಿಳಿದರು. ಮಧ್ಯ ಪ್ರವೇಶಿಸಿದ ತಾಲೂಕು ಆಡಳಿತ ಮತ್ತು ಪೊಲೀಸ್ನವರು ಸಿದ್ದಮ್ಮ ಹಾಗೂ ಆಕೆಯ ಪುತ್ರರನ್ನು ಸುಮ್ಮನಾಗಿಸಿದ್ದರು. ಆಗ ಸ್ಥಳದಲ್ಲಿಯೇ ತಾಯಿ ಹಾಗೂ ಪುತ್ರ ವಿಷ ಸೇವಿಸಿದ್ದಾರೆ. ಕೂಡಲೇ ವಿಷದ ಬಾಟಲಿ ಕಿತ್ತಸೆದು ಪೊಲೀಸರು ಇಬ್ಬರನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಕಂಪನಿಯ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯದಲ್ಲಿಯೇ ಕೆರೆಯ ನೀರು ಬರುತ್ತದೆ ಎಂಬ ವಿಶ್ವಾಸ ಇತ್ತು. ನರ್ಸರಿ ಹಾಗೂ ಸೌತೆ ಫ್ಯಾಕ್ಟರಿ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ ಬ್ಯಾಂಕ್ಗೆ ಸಾಲ ತೆಗೆಯಲು ದಾಖಲಾತಿ ನೀಡಿದ್ದೇನೆ. ಆದರೆ ಹೈಟೆನ್ಷನ್ ವೈರ್ ಅಳವಡಿಕೆಯಿಂದ ತುಂಬಾ ತೊಂದರೆಯಾಗಲಿದೆ. ಕಷ್ಟಪಟ್ಟು ಓದಿದ್ದರೂ ಕೃಷಿ ಮಾಡಬೇಕು. ಇದರಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಬಂದರೆ ಹೀಗೆ ಮಾಡಿದ್ದಾರೆ. ಹಾಗಾಗಿ ಮುಂದೇನು ಮಾಡಬೇಕೆಂದು ಗೊತ್ತಾಗದೆ ವಿಷ ಸೇವಿಸಿರುವುದಾಗಿ ಸಿದ್ದಮ್ಮರ ಪುತ್ರ ಉಜ್ಜನಗೌಡ ತಿಳಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications