ದಾವಣಗೆರೆಯಲ್ಲಿ ರೌಡಿಗಳ ಪರೇಡ್; ಖಡಕ್ ಎಚ್ಚರಿಕೆ ಕೊಟ್ಟ ಎಸ್ಪಿ
ದಾವಣಗೆರೆ, ಆಗಸ್ಟ್ 26; "ಏಯ್ ಎಷ್ಟು ಕೇಸ್ ಇರೋದು ನಿನ್ಮೇಲೆ?, ಐದಾ, ಹತ್ತಾ. ಇಪ್ಪತ್ತು ಕೇಸ್ ಇವೆಯಾ?, ನಿನ್ಗೆ ಗೊತ್ತಿಲ್ವಾ?, ಇನ್ಮುಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಸುಮ್ಮನಿರೋಲ್ಲ. ಜನರಿಗೆ ಹೆದರಿಸೋದು, ಬೆದರಿಸೋದು, ಹಣ ವಸೂಲಿ ಮಾಡೋದು ಸೇರಿದಂತೆ ಕಾನೂನು ವಿರೋಧಿ ಚಟುವಟಿಕೆ ನಡೆಸಿದರೆ ಪರಿಣಾಮ ನೆಟ್ಟಗಿರದು'' ಎಂದು ದಾವಣಗೆರೆ ಎಸ್ಪಿ ರೌಡಿಗಳಿಗೆ ಎಚ್ಚರಿಕೆ ಕೊಟ್ಟರು.
ಗುರುವಾರ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ವಿವಿಧ ಪೊಲೀಸ್ ಠಾಣೆಗಳ ರೌಡಿ ಪರೇಡ್ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡರು.
"ಪಂಚಾಯ್ತಿ ಮಾಡೋದು, ಜನರಿಗೆ ಹೆದರಿಸೋದು, ಹಫ್ತಾ ವಸೂಲಿ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಜನರಿಗೆ ತೊಂದರೆ ಕೊಟ್ಟ ಬಗ್ಗೆ ದೂರು ಬಂದರೆ ಸುಮ್ಮನಿರೋಲ್ಲ. ಜನರನ್ನು ಹೆದರಿಸಿ ಕೆಲವರು ಪುಂಡಾಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ರೌಡಿಶೀಟರ್ಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಎಸ್ಪಿ ಹೇಳಿದರು.

ನಗರದ ವಿವಿಧ ಬಡಾವಣೆಯ ಸುಮಾರು 156ಕ್ಕೂ ಹೆಚ್ಚು ರೌಡಿಶೀಟರ್ಗಳು ಪರೇಡ್ಗೆ ಬಂದಿದ್ದರು. "ಇನ್ನು ಕೆಲವರಿಗೆ ವಯಸ್ಸಾಗಿರುವ ವಿಚಾರವೂ ಗಮನಕ್ಕೆ ಬಂದಿದೆ. ಅವರ ಸನ್ನಡತೆ ಆಧಾರವಾಗಿಟ್ಟುಕೊಂಡು ಅವರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯುವ ಕುರಿತಂತೆ ಪರಾಮರ್ಶೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು.
ರೌಡಿಗಳು ಎಂದಾಕ್ಷಣ ಎಲ್ಲವೂ ನಿಮ್ಮ ಕೈಯಲ್ಲಿಲ್ಲ. ರೌಡಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಆಯಾ ಪೊಲೀಸ್ ಠಾಣೆಗಳ ಇನ್ಸ್ಸ್ಪೆಕ್ಟರ್ಗೆ ಸೂಚನೆ ನೀಡಿದ ರಿಷ್ಯಂತ್, ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೇ ಕಾನೂನು ರೀತಿಯಲ್ಲಿ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಖಡಕ್ ವಾರ್ನಿಂಗ್ ನೀಡಿದರು.
ಕೆಲವರು ಇನ್ನು ಸಮಾಜಘಾತುಕ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಣಕ್ಕಾಗಿ ಭೂಮಿ ಸೇರಿದಂತೆ ಬೇರೆ ಬೇರೆ ವ್ಯಾಜ್ಯಗಳಲ್ಲಿ ಜನರಿಗೆ ತೊಂದರೆ ಕೊಡೋದು, ಹಣ ವಸೂಲಿ ಮಾಡೋದು, ದುಡ್ಡಿನ ವ್ಯವಹಾರ, ಬಡ್ಡಿ ವಸೂಲಿ ಸೇರಿದಂತೆ ಬೇರೆ ಬೇರೆಯ ದೂರುಗಳು ಕೇಳಿ ಬರುತ್ತಿವೆ. ಗ್ಯಾಂಗ್ ಕಟ್ಟಿಕೊಂಡು ತಿರಾಗಾಡುವುದು ಗೊತ್ತಾಗಿದೆ. ಇವೆಲ್ಲಾ ನಡೆಯಲ್ಲ ಎಂದು ಖಾಕಿ ಭಾಷೆಯಲ್ಲಿ ಎಚ್ಚರಿಕೆ ನೀಡಿದರು.
"ಕೆಲವರು ರೌಡಿಗಳಿಗೆ ಹೆದರಿ ಪೊಲೀಸ್ ಠಾಣೆಗೆ ದೂರು ಕೊಡಲು ಬರುವುದಿಲ್ಲ. ಮೌಖಿಕವಾಗಿ ಹೇಳಿದರೂ ಎಫ್ಐಆರ್ ಮಾಡಲು ಆಗದಂತಿರುತ್ತದೆ. ಹಾಗಾಗಿ ನಾವು ಏನು ಮಾಡಲು ಆಗದು. ಜನರು ಧೈರ್ಯವಾಗಿ ಬಂದು ದೂರು ಕೊಟ್ಟರೆ ರೌಡಿಶೀಟರ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
"ಕೆಲವೊಬ್ಬರ ಮೇಲೆ ಹತ್ತರಿಂದ ಇಪ್ಪತ್ತು ಕೇಸ್ಗಳಿವೆ ಇವೆ. ಇವರೆಲ್ಲಾ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಹೆಚ್ಚೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಬೇಲ್ ಹೇಗೆ ಸಿಗ್ತು? ಎಂಬ ಮಾಹಿತಿ ಪಡೆದು ಕೋರ್ಟ್ಗೆ ಇಂಥವರಿಗೆ ಜಾಮೀನು ಸಿಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ" ಎಂದು ಎಸ್ಪಿ ಮಾಹಿತಿ ನೀಡಿದರು.
"ಯಾವುದೇ ತೊಂದರೆ ಇದ್ದರೂ ಬನ್ನಿ. ರೌಡಿಶೀಟರ್ಗಳಿಗೆ ಹೆದರಬೇಡಿ. ನಾವೆಲ್ಲಾ ಅಪರಾಧ ಚಟುವಟಿಕೆ ನಡೆಸುವವರ ಮೇಲೆ ನಿಗಾ ಇಡಲಾಗುವುದು. ರೌಡಿಗಳ ಇತ್ತೀಚಿನ ಭಾವಚಿತ್ರ ಸಂಗ್ರಹ ಮಾಡಲಾಗುವುದು. ಕೆಲವರು ರೌಡಿಶೀಟರ್ ಗಳಾಗಿದ್ದರೂ, ಹಲವು ವರ್ಷಗಳಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಂಥವರನ್ನು ಈ ಪಟ್ಟಿಯಿಂದ ಸನ್ನಡತೆ ಆಧಾರದಲ್ಲಿ ಮುಕ್ತಿಗೊಳಿಸಲಾಗುವುದು" ಎಂದು ರಿಷ್ಯಂತ್ ತಿಳಿಸಿದರು.











Click it and Unblock the Notifications