ದಾವಣಗೆರೆ; ಪಾಲಿಕೆ ಅಧಿಕಾರಿಗಳ ಸೀಲ್, ಸಹಿ ಫೋರ್ಜರಿ ಮಾಡುತ್ತಿದ್ದ ವಂಚಕರ ಬಂಧನ
ದಾವಣಗೆರೆ, ಅಕ್ಟೋಬರ್ 14: ಮಹಾನಗರ ಪಾಲಿಕೆ ಮತ್ತು ಅಧಿಕಾರಿಗಳ ಸೀಲ್, ಸಹಿಯನ್ನು ಫೋರ್ಜರಿ ಮಾಡಿ, ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಮೂವರು ವಂಚಕರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಮಹಾನಗರ ಪಾಲಿಕೆಗೆ ಬರಬೇಕಾದ ಕಂದಾಯವನ್ನು ವಂಚಿಸಿ ಸಾರ್ವಜನಿಕರಿಗೆ ಮತ್ತು ಪಾಲಿಕೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡುವಲ್ಲಿ ಮಹೇಶ್ ಬಿನ್ ಬಸಪ್ಪ ಎಂಬುವವರು ಭಾಗಿಯಾಗಿರುವ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಮೇರೆಗೆ ಹೊನ್ನಾಳಿ ತಾಲೂಕು ಮಾಸಡಿ ಗ್ರಾಮದ ಮಹೇಶನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದ್ದು, ಆತ ಮಹಾನಗರ ಪಾಲಿಕೆ ಫೋರ್ಜರಿ ಸೀಲ್ ಗಳನ್ನು ಬಳಸಿ ವಂಚಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಅ. 13ರಂದು ನೇತ್ರಾವತಿ ಮತ್ತು ರಾಜೇಶ್ವರಿ ಅವರ ಆಸ್ತಿ ತೆರಿಗೆ ಮತ್ತು ಇತರೆ ದಾಖಲೆಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಕೊಟ್ಟಂತೆ ಸಹಿ ಮತ್ತು ಸೀಲ್ ಮಾಡಿ ಫೋರ್ಜರಿ ಮಾಡಿರುವುದು ಬೆಳಕಿಗೆ ಬಂದಿತ್ತು.

ಮಹೇಶನ ಈ ಕೃತ್ಯಕ್ಕೆ ಗುರುರಾಜ್, ವೆಂಕಟೇಶ ಎಂಬುವರೂ ಸಹಾಯ ಮಾಡಿದ್ದು, ಅವರನ್ನೂ ಬಂಧಿಸಲಾಗಿದೆ. ಪಾಲಿಕೆಯ ಸೀಲ್ ಮತ್ತು ಚಲನ್ ಗಳನ್ನು ನಕಲಿ ಸೃಷ್ಟಿಸಿ ಸಾರ್ವಜನಿಕರಿಂದ ಹಣ ಪಡೆದು ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾರೆಂದು ತಿಳಿದುಬಂದಿದೆ.
ದಕ್ಷಿಣ ವೃತ್ತದ ಸಿಪಿಐ ಎಚ್. ಗುರುಬಸವರಾಜ್ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆದಿದ್ದು, ತಂಡವನ್ನು ಪೊಲೀಸ್ ಅಧೀಕ್ಷಕರು, ಹಿರಿಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಪ್ರಶಂಸಿಸಿದ್ದಾರೆ.












Click it and Unblock the Notifications