ದಾವಣಗೆರೆ : ಕಾಂಗ್ರೆಸ್ ಅಭ್ಯರ್ಥಿಗಾಗಿ ಜನರಿಂದ ದೇಣಿಗೆ ಸಂಗ್ರಹ
ದಾವಣಗೆರೆ, ಏಪ್ರಿಲ್ 18 : ಪಕ್ಷೇತರ ಅಭ್ಯರ್ಥಿಗಳು ಒಂದು ನೋಟು ಒಂದು ವೋಟು ಎಂದು ಚುನಾವಣೆಗೆ ಜನರಿಂದ ಹಣ ಸಂಗ್ರಹಿಸುವುದನ್ನು ಕೇಳಿದ್ದೇವೆ. ಆದರೆ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರಿಗೆ ಜನರೇ ಚುನಾವಣಾ ಖರ್ಚಿಗಾಗಿ ಹಣದ ಸಹಾಯ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರಿಗೆ ಚುನಾವಣಾ ಖರ್ಚಿಗಾಗಿ ಜನರು 90 ಸಾವಿರ ಹಣವನ್ನು ನೀಡಿದ್ದಾರೆ. ಕ್ಷೇತ್ರದಲ್ಲಿ ಸ್ವಯಂ ಪ್ರೇರಣೆಯಿಂದ ಹಣವನ್ನು ಸಂಗ್ರಹಿಸಿ ನೀಡುತ್ತಿದ್ದಾರೆ.
ಹೊನ್ನಾಳಿ ಮಂಜಪ್ಪ (ಎಚ್.ಬಿ.ಮಂಜಪ್ಪ) ಅವರು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ದಾವಣಗೆರೆ ತಾಲೂಕಿನ ಬಾಡ ಗ್ರಾಮದ ಜನರು 90 ಸಾವಿರ ದೇಣಿಗೆಯನ್ನು ನೀಡಿದ್ದಾರೆ.

'ನಮ್ಮ ಅಭ್ಯರ್ಥಿ ರೈತ ಕುಟುಂಬದಿಂದ ಬಂದಿದ್ದಾರೆ. ಅವರಿಗೆ ಪ್ರಚಾರಕ್ಕೆ ಹಣವಿಲ್ಲ. ಹೀಗಾಗಿ ಹಣಕಾಸಿನ ನೆರವು ನೀಡಿದ್ದೇವೆ' ಎಂದು ಗ್ರಾಮಸ್ಥರು ಹೇಳಿದ್ದಾರೆ. ಬಾಡಾ ಗ್ರಾಮದಲ್ಲಿ ಮಂಜಪ್ಪ ಅವರು ಪ್ರಚಾರ ನಡೆಸುವಾಗ ಜನರು ದೇಣಿಗೆ ನೀಡಿದ್ದಾರೆ.
ಏಪ್ರಿಲ್ 23ರಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕಣದಲ್ಲಿದ್ದಾರೆ. ಎಚ್.ಬಿ.ಮಂಜಪ್ಪ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬದವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ, ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಅವರು ಎಚ್.ಬಿ.ಮಂಜಪ್ಪ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.












Click it and Unblock the Notifications