ರಾಮಮಂದಿರ ಕಟ್ಟುವುದಷ್ಟೇ ಅಲ್ಲ, ರಾಮರಾಜ್ಯ ಆಗಬೇಕು: ಪೇಜಾವರ ಶ್ರೀ
ದಾವಣಗೆರೆ, ಡಿಸೆಂಬರ್ 13: ನಮ್ಮದು ಕೇವಲ ರಾಮಮಂದಿರ ಕಟ್ಟುವ ಕೆಲಸ ಅಷ್ಟೇ ಅಲ್ಲ. ರಾಮರಾಜ್ಯ ಆಗಬೇಕು ಎಂಬ ಕನಸಿದೆ. ಇದಕ್ಕೆ ನಿರಂತರವಾದ ಪ್ರಯತ್ನ ಆಗಬೇಕು. ಧರ್ಮವೇ ಮೂರ್ತಿ ಎತ್ತಿ ಬಂದಿರುವಂಥ ವ್ಯಕ್ತಿತ್ವ ಶ್ರೀರಾಮಚಂದ್ರರದ್ದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಿಟುವಳ್ಳಿಯ ಶಕ್ತಿನಗರದ ಬನಶಂಕರಿ ದೇವಸ್ಥಾನದ ಹತ್ತಿರ ಇರುವ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಆಲೂರು ನಿಂಗರಾಜು ಅವರ ಮನೆಗೆ ಆಗಮಿಸಿ ಪಾದಪೂಜೆ ಮತ್ತು ತೀರ್ಥ ಪ್ರಸಾದ ಮಂತ್ರಾಕ್ಷತೆ ಅನುಗ್ರಹಿಸಿದ ಮಾತನಾಡಿದ ಶ್ರೀಗಳು, ಒಬ್ಬ ಶ್ರೀರಾಮಚಂದ್ರರಿಂದ ರಾಮರಾಜ್ಯ ನಿರ್ಮಾಣ ಅಂದು ಆಗಿತ್ತು. ಇವತ್ತು ಸಹ ಪುನಃ ರಾಮರಾಜ್ಯ ನಿರ್ಮಾಣ ಆಗಬೇಕಾದರೆ ನಾವೆಲ್ಲರೂ ರಾಮನಂತೆ ಆಗಬೇಕು. ಆ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು. ಧರ್ಮದ ದಾರಿಯಲ್ಲಿ ನಡೆದರೆ ಸಮಾಜದಲ್ಲಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.
ನರ್ಸಿಂಗ್ ಕಾಲೇಜಿನಲ್ಲಿ ಸಾಮೂಹಿಕ ನಕಲು ಆರೋಪ: ಹಣ ಕೊಟ್ಟವರಿಗೆ ಉತ್ತರ ತೋರಿಸಿ ಬರೆಸಿದ ಸಿಬ್ಬಂದಿ
ನಮ್ಮ ಪ್ರಯತ್ನದಿಂದ ಎಲ್ಲರಿಗೂ ಸುಖ ಸಿಗಬೇಕು. ನಮ್ಮ ಆಸೆ ಇದ್ದರೆ ಮಾತ್ರ ಸಾಲದು. ಅದಕ್ಕೆ ಅನುಗುಣವಾದ ಪ್ರವೃತ್ತಿಯೂ ಬೇಕು. ಆ ರೀತಿ ಧರ್ಮದ ದಾರಿಯಲ್ಲಿ ನಡೆದರೆ ಸಮಾಜದಲ್ಲಿ ಸುಖ, ಶಾಂತಿ ಲಭಿಸುವುದರಲ್ಲಿ ಸಂದೇಹವಿಲ್ಲ. ಶ್ರೀ ಕೃಷ್ಣ, ಶ್ರೀರಾಮ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಕರೆ ನೀಡಿದರು.
ಮತ್ತೊಬ್ಬರಿಗೆ ದುಃಖ ಆಗದಂತೆ ನಡೆದುಕೊಳ್ಳಬೇಕು
ಧರ್ಮದ ದಾರಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು, ಬದುಕಬೇಕು. ನಾವು ಹೇಗೆ ಸುಖ, ಸಂತೋಷ ಬಯಸುತ್ತೇವೆಯೋ ಸಮಾಜದ ಎಲ್ಲರೂ ಸುಖ, ಸಂತೋಷದಿಂದ ಬದುಕುವಂತಾಗಬೇಕು. ಬೇಡಿದ್ದನ್ನು ಪಡೆಯಲು ಶ್ರಮಿಸುತ್ತೇವೆ. ಆದರೆ, ನಮ್ಮ ಶ್ರಮ ಧರ್ಮದ ಹಾದಿಯದ್ದಾಗಿರಬೇಕು. ಮತ್ತೊಬ್ಬರಿಗೆ ದುಃಖ ಆಗದಂತೆ ನಡೆದುಕೊಳ್ಳಬೇಕು. ಪಕ್ಕದ ಮನೆಯವರಿಗೂ ದುಃಖವಾಗದಂತೆ ಎಲ್ಲರಿಗೂ ಒಳಿತು ಬಯಸುವ, ಸುಖ, ಸಂತೋಷ ನೀಡುವಂಥ ಪ್ರಯತ್ನ ನಡೆದಾಗ ಮಾತ್ರ ಸುಖೀ ಸಮಾಜ ನಿರ್ಮಾಣ ಸಾಧ್ಯ. ಸ್ವಾರ್ಥಕ್ಕಾಗಿ ಮಾಡಿದರೆ ಒಬ್ಬನೇ ಆಗುತ್ತಾನೆ. ಯಾರಿಗೂ ದುಃಖವಾಗದಂತೆ, ಎಲ್ಲರ ಏಳಿಗೆಗಾಗಿ ಬದ್ಧರಾಗೋಣ ಎಂದು ಸಲಹೆ ನೀಡಿದರು.
ಭಕ್ತವೃಂದದ ಜೊತೆಗೆ ಸಮಯ ಕಳೆದಿದ್ದು ಸಂತಸ ತಂದಿದೆ- ಪೇಜಾವರ ಶ್ರೀ
ಹಿರಿಯೂರು ಆದಿಜಾಂಭವ ಬೃಹನ್ಮಠದ ಶ್ರೀ ಷಡಾಕ್ಷರಿ ಮುನಿ ದೇಶೀ ಕೇಂದ್ರ ಸ್ವಾಮೀಜಿ ಜೊತೆಗೆ ಉತ್ತಮ ಒಡನಾಟ ಇದೆ. ವಿಶ್ವಕ್ಕೆ ಕಂಟಕವಾಗಿ ಕಾಡಿದ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಮತ್ತೆ ಆ ಅವಕಾಶ ಸಿಕ್ಕಿದೆ. ಷಡಾಕ್ಷರಿ ಮುನಿದೇವ ಶ್ರೀಗಳ ಮೂಲಕ ಸಮಾಜದ ಎಲ್ಲಾ ಭಕ್ತವೃಂದದ ಜೊತೆಗೆ ಸಮಯ ಕಳೆದಿದ್ದು ಸಂತಸ ತಂದಿದೆ ಎಂದು ಶ್ರೀಗಳು ತಿಳಿಸಿದರು.
ಸಮಾರಂಭದಲ್ಲಿ ಹಿರಿಯೂರು ಆದಿಜಾಂಭವ ಬೃಹನ್ಮಠದ ಶ್ರೀ ಷಡಾಕ್ಷರಿ ಮುನಿ ದೇಶೀ ಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿ ಆಲೂರು ನಿಂಗರಾಜ್ ಅವರು ಪೇಜಾವರ ಶ್ರೀಗಳ ಪಾದಪೂಜೆ ನೆರವೇರಿಸಿದರು. ಈ ವೇಳೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಆಯುರ್ವೇದ, ವೈದ್ಯ ಶಾಸ್ತ್ರ ಅಷ್ಟೇ ಅಲ್ಲ. ಜೀವನ ಪದ್ಧತಿ ತಿಳಿಸುವ ಶಾಸ್ತ್ರ
ತಾಲೂಕಿನ ದೊಡ್ಡಬಾತಿಯಲ್ಲಿರುವ ತಪೋವನ ವೈದ್ಯಕೀಯ ಕಾಲೇಜು ಮತ್ತು ಯೋಗಾಸ್ಪತ್ರೆ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿದರು. ಈ ವೇಳೆ ತಪೋವನ ಮುಖ್ಯಸ್ಥರಾದ ಡಾ. ಶಶಿಕುಮಾರ್ ಅವರನ್ನು ಶಾಲು ಹೊದಿಸಿ ಶ್ರೀಗಳು ಸನ್ಮಾನಿಸಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಪ್ರಪಂಚದ ಅತ್ಯಂತ ಪ್ರಾಚೀನವಾಗಿರುವ, ಭಾರತದ ನೆಲದಲ್ಲಿ ಹುಟ್ಟಿರುವಂತಹ ವೈದ್ಯ ಪದ್ಧತಿ ಅಭ್ಯಸಿಸಲು ಎಲ್ಲರೂ ಸೇರಿದ್ದೀರಾ. ಮುಂದಿನ ಭವಿಷ್ಯ ಉಜ್ವಲವಾಗಿರಲಿ, ಸಾಂಗವಾಗಿ ವಿದ್ಯಾಭ್ಯಾಸ ನಡೆಯಲಿ. ಆಯುರ್ವೇದ ಕೇವಲ ವೈದ್ಯ ಶಾಸ್ತ್ರ ಅಷ್ಟೇ ಅಲ್ಲ. ಜೀವನ ಪದ್ಧತಿ ತಿಳಿಸುವಂಥ ಶಾಸ್ತ್ರವಾಗಿದೆ. ಕೆಸರಿನಲ್ಲಿ ಕೈ ಹಾಕಿದರೆ ತೊಳೆದುಕೊಳ್ಳಬೇಕಾಗುತ್ತದೆ. ಕೆಸರೇ ಅಂಟದ ಹಾಗೆ ನೋಡಿಕೊಂಡರೆ ತೊಳೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ. ರೋಗ ಬಾರದ ಹಾಗೆ ನೋಡಿಕೊಳ್ಳಬೇಕಾದರೆ ಆಯುರ್ವೇದ ಪದ್ಧತಿ ಅನುಸರಿಸಬೇಕು ಎಂದು ತಿಳಿಸಿದರು.
ತಪೋವನದ ಮುಖ್ಯಸ್ಥರಾದ ಡಾ. ಶಶಿಕುಮಾರ್ ಮಾತನಾಡಿ, ಪೇಜಾವರ ಶ್ರೀಗಳು ತಪೋವನ ವೈದ್ಯಕೀಯ ಕಾಲೇಜು ಮತ್ತು ಯೋಗಾಸ್ಪತ್ರೆ, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದು ತುಂಬಾ ಖುಷಿ ತಂದಿದೆ. ತಪೋವನದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. ಪುರಾತನ ಕಾಲದ ವೈದ್ಯ ಪರಂಪರೆ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ತಪೋವನದಿಂದ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಸಿಕ್ಕಿದೆ. ಶ್ರೀಗಳ ಆಶೀರ್ವಾದ ನಮ್ಮ ಮೇಲಿರಲಿ. ಅವರ ಅನುಗ್ರಹ ಇದ್ದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಮಮಂದಿರ ನಿರ್ಮಾಣಕ್ಕೆ ದಾವಣಗೆರೆಯಿಂದ ಬೆಳ್ಳಿ ಇಟ್ಟಿಗೆ
ನಗರದ ಪಿಜೆ ಬಡಾವಣೆಯಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ಪೇಜಾವರ ಶ್ರೀಗಳು ರಾಯರ ದರ್ಶನ ಪಡೆದರು. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಬಳಕೆ ಮಾಡಲಾಗುತ್ತಿದೆ. ಬರೋಬ್ಬರಿ 15ಕೆಜಿ ಗಾತ್ರದ ಬೆಳ್ಳಿ ಇಟ್ಟಿಗೆ ಸಮರ್ಪಣೆ ಮಾಡಲಾಯಿತು. ಶೀಘ್ರದಲ್ಲೇ ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ರವಾನೆ ಮಾಡಲಾಗುತ್ತದೆ. ಯಶವಂತರಾವ್ ಜಾಧವ್ ಅಭಿಮಾನಿಗಳು ತಯಾರಿಸಿರುವ ಇಟ್ಟಿಗೆ ಇದಾಗಿದೆ.
ಶ್ರೀರಾಮ ಚಿತ್ರ ಇರುವ ಬೆಳ್ಳಿ ಇಟ್ಟಿಗೆ ರೂಪಿಸಲಾಗಿದ್ದು, 1991ರಲ್ಲಿ ದಾವಣಗೆರೆಗೆ ರಾಮರಥ ಯಾತ್ರೆ ಆಗಮಿಸಿತ್ತು. ಈ ವೇಳೆ ಗಲಭೆಯಲ್ಲಿ 9 ಮಂದಿ ಮೃತರಾಗಿದ್ದರು. ಬಲಿಯಾದ ಆ ಒಂಬತ್ತು ಹೆಸರುಗಳು ಬೆಳ್ಳಿ ಇಟ್ಟಿಗೆಯಲ್ಲಿ ಉಲ್ಲೇಖ ಮಾಡಲಾಗಿರುವುದು ವಿಶೇಷವಾಗಿದೆ.