ವಿರೋಧ ಪಕ್ಷಗಳ ಮಾತು ಮತದಾರರಿಗೆ ಅವಮಾನ; ಗೃಹ ಸಚಿವ
ದಾವಣಗೆರೆ, ಡಿಸೆಂಬರ್ 10: "ಬಿಜೆಪಿಯವರು ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರೆ, ಅವರು ಮತದಾರರಿಗೆ ಅವಮಾನ ಮಾಡಿದಂತೆ" ಎಂದು ವಿರೋಧ ಪಕ್ಷಗಳ ಟೀಕೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತ್ಯುತ್ತರ ನೀಡಿದರು.
ದಾವಣಗೆರೆಯ ಹರಿಹರ ತಾಲೂಕಿನ ಬಳಿ ಇರುವ ಪಂಚಮಸಾಲಿ ಪೀಠಕ್ಕೆ ಆಗಮಿಸಿ ಶ್ರೀ ವಚನಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ವಿರೋಧ ಪಕ್ಷಗಳು ಬಿಜೆಪಿ ಹಣ ಬಲ, ತೋಳ್ಬಲದ ಮೇಲೆ ಉಪಚುನಾವಣೆ ಗೆದ್ದಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಯಾವುದೇ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ನವರು ಒಂದು ಸ್ಟ್ಯಾಂಡರ್ಡ್ ಉತ್ತರ ಸಿದ್ಧವಿಟ್ಟುಕೊಂಡಿರುತ್ತಾರೆ. ಸೋತಾಗ ಇಂತಹ ಉತ್ತರಗಳನ್ನು ನೀಡುವುದು ಸಹಜ. ಅವರು ಗೆದ್ದಿರುವ ಎಲ್ಲಾ ಚುನಾವಣೆಗಳನ್ನು ಹಣ ಬಲದ ಮೇಲೆ ಗೆದ್ದಿದ್ದಾರಾ? ಹಾಗಾದ್ರೆ ಕೋಳಿವಾಡ ಅವರು 5 ಸಾರಿ ಶಾಸಕರಾಗಿದ್ರು, ಅವರು ಕೂಡ ಹಣ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಾ" ಎಂದು ಪ್ರಶ್ನಿಸಿದರು.

ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, "ಮುಖ್ಯಮಂತ್ರಿಗಳು ರಾಷ್ಟ್ರೀಯ ಅಧ್ಯಕ್ಷರ ಸಂಪರ್ಕದಲ್ಲಿದ್ದಾರೆ. ಅವರ ಸೂಚನೆಯಂತೆ ಸಂಪುಟ ವಿಸ್ತರಣೆ ನಡೆಯಲಿದೆ. ಇದರಲ್ಲಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಹೇಳಿದಂತೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಅಲ್ಲದೆ ಎಂಟಿಬಿ ನಾಗರಾಜ್, ವಿಶ್ವನಾಥ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದು ಹಾಗೂ ಶರತ್ ಬಚ್ಚೇಗೌಡ ಪಕ್ಷಕ್ಕೆ ಸೇರುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು" ಎಂದು ಉತ್ತರಿಸಿದರು.












Click it and Unblock the Notifications