ದೀಪಾವಳಿ; ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ
ದಾವಣಗೆರೆ, ಅಕ್ಟೋಬರ್ 25; "ಸುಪ್ರೀಂಕೋರ್ಟ್ ಆದೇಶದಂತೆ ಈ ಬಾರಿಯೂ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಬಳಸುವಂತಿಲ್ಲ" ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೀಪಾವಳಿ ಹಬ್ಬದ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು, "ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ಸುಪ್ರಿಂಕೋರ್ಟ್ ಆದೇಶಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಬೆಳಕಿನ ಹಬ್ಬವಾಗಿರುವ ದೀಪಾವಳಿಯನ್ನು ಆಚರಿಸಬೇಕು" ಎಂದರು.
ದೆಹಲಿಯಲ್ಲಿ ಮುಂದಿನ 3 ತಿಂಗಳ ಕಾಲ ಪಟಾಕಿ ಸಿಡಿಸುವಂತಿಲ್ಲ
"ಸುಪ್ರೀಂಕೋರ್ಟ್ ಆದೇಶದಂತೆ ಈ ಬಾರಿಯೂ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಬಳಸುವಂತಿಲ್ಲ. ಕೇಂದ್ರ ಸರ್ಕಾರದ ಸ್ಫೋಟಕ ವಸ್ತುಗಳ ಉಪ ಮುಖ್ಯ ನಿಯಂತ್ರಕರು ಈ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದರನ್ವಯ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಪಟಾಕಿಯನ್ನು ಹೊರತುಪಡಿಸಿ ಬೇರೆ ಪಟಾಕಿಯನ್ನು ಮಾರಾಟ ಮಾಡುವಂತಿಲ್ಲ" ಎಂದು ತಿಳಿಸಿದರು.
ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ: ಅರವಿಂದ್ ಕೇಜ್ರಿವಾಲ್
"ದೀಪಾವಳಿ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರಾವಾನಿಗೆಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡಬೇಕು. ಪಟಾಕಿ ಮಾರಾಟದ ಮಳಿಗೆಗಳನ್ನು ನಿಗದಿತ ಸ್ಥಳದಲ್ಲಿ ಮಾತ್ರ ನವೆಂಬರ್ 2 ರಿಂದ 6 ರವರೆಗೆ ಮಾತ್ರ ತೆರೆದಿರಬೇಕು. ಪರವಾನಿಗೆದಾರರು ಸಂಬಂಧಪಟ್ಟ ಇಲಾಖೆಯ ಅಥವಾ ಪ್ರಾಧಿಕಾರದಿಂದ ನೀಡುವ ಪರವಾನಿಗೆಯಲ್ಲಿ ನಿಗದಿಪಡಿಸಿರುವ ದಿನಾಂಕ ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು" ಎಂದು ಎಚ್ಚರಿಸಿದರು.
ಬೆಲೆ ಏರಿಕೆ ಸ್ವಾಮಿ: ಭಾರತದಲ್ಲಿ ಮಧ್ಯಮ ವರ್ಗದ ಮಂದಿಗೆ ದುಬಾರಿ
"ಹಸಿರು ಪಟಾಕಿ ಹೊರತುಪಡಿಸಿ ಇನ್ಯಾವುದೇ ಬಗೆಯ ಪಟಾಕಿ ಮತ್ತು ಅನಧಿಕೃತವಾಗಿ ಪಟಾಕಿ ಮಾರಾಟ ಕಂಡುಬಂದಲ್ಲಿ ಅಂತಹವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು. ಅಂತಹ ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು. ಅಲ್ಲದೆ ಅನಧಿಕೃತವಾಗಿ ಮಾರಾಟ ಕಂಡುಬಂದಲ್ಲಿ, ಅಂತಹ ಪಟಾಕಿಗಳನ್ನು ಜಪ್ತಿ ಮಾಡಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಷ್ಟು ಅರ್ಜಿಗಳು; ದಾವಣಗೆರೆ ಜಿಲ್ಲೆಯಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗಾಗಿ ದಾವಣಗೆರೆ 70, ಹರಿಹರ 15, ಮಲೆಬೆನ್ನೂರು 7, ನ್ಯಾಮತಿ 4, ಚನ್ನಗಿರಿ 7, ಜಗಳೂರು 2 ಸೇರಿದಂತೆ ಒಟ್ಟು 105 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಇಡಲು ಅವಕಾಶ ಕಲ್ಪಿಸಲಾಗಿದೆ. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ ಕನಿಷ್ಟ 6 ಮೀಟರ್ ಅಂತರವಿರಬೇಕು ಎಂದು ಸೂಚನೆ ನೀಡಲಾಗಿದೆ.
ಪಟಾಕಿ ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು. ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು. ಒಬ್ಬರಿಂದ ಮತ್ತೊಬ್ಬರಿಗೆ 6 ಅಡಿ ಸಾಮಾಜಿಕ ಅಂತರ ಗುರುತಿಸಬೇಕು. ಪಟಾಕಿ ಮಾರುವ ವ್ಯಾಪಾರಸ್ಥರು ಹಾಗೂ ಖರೀದಿಗೆ ಬರುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಟಾಕಿ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕಸ ಸಂಗ್ರಹಣೆಗೆ ಹಣ; ಸಭೆಯಲ್ಲಿ ಮಾತನಾಡಿದ ಪಟಾಕಿ ಮಾರಾಟಗಾರರ ಸಂಘದ ಪ್ರತಿನಿಧಿಗಳು, "ಕಾನೂನಿಗೆ ಅನುಗುಣವಾಗಿ ಹಾಗೂ ಮಾರ್ಗಸೂಚಿ ಪಾಲಿಸುವ ಮೂಲಕ ನಾವು ಪಟಾಕಿ ಮಾರಾಟಕ್ಕೆ ಬದ್ಧರಿದ್ದೇವೆ. ಆದರೆ ಪಟಾಕಿ ಮಾರಾಟ ಮಳಿಗೆಗಳಿರುವ ಆವರಣದಲ್ಲಿ ಹೂವು, ಹಣ್ಣು, ಜ್ಯೂಸ್ ಮುಂತಾದ ಮಾರಾಟಗಾರರು ವ್ಯಾಪಾರ ಮಾಡಲು ಅಂಗಡಿ ಹಾಕುತ್ತಾರೆ, ಇದರಿಂದ ಸುರಕ್ಷತೆ ಹಾಗೂ ಜನಸಂದಣಿ ನಿಯಂತ್ರಣ ಕಾಯ್ದುಕೊಳ್ಳಲು ತೊಂದರೆಯಾಗುತ್ತದೆ" ಎಂದರು.
"ಕಸ ಸಂಗ್ರಹಣೆಗಾಗಿ ಪ್ರತಿ ಅಂಗಡಿಗೆ 4 ರಿಂದ 5 ಸಾವಿರ ರೂ. ಹಣಕ್ಕೆ ಕಸ ಸಂಗ್ರಹಕಾರರು ಬೇಡಿಕೆ ಇಡುತ್ತಾರೆ. ಪರವಾನಿಗೆ ಇಲ್ಲದವರೂ ಕೂಡ ತಳ್ಳು ಗಾಡಿಗಳಲ್ಲಿ, ಬೀದಿ ಬದಿಯಲ್ಲಿ ಪಟಾಕಿ ಮಾರಾಟ ಮಾಡುವುದು ನಡೆಯುತ್ತದೆ. ದಯವಿಟ್ಟು ಇದನ್ನು ತಡೆಗಟ್ಟಬೇಕು" ಎಂದು ಮನವಿ ಮಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, "ಕಸ ಸಂಗ್ರಹಕಾರರಿಗೆ ಯಾವುದೇ ಹಣ ನೀಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಲಸಿಕೆ; ಜಿಲ್ಲಾಧಿಕಾರಿಗಳು ಮಾತನಾಡಿ, "ಕೋವಿಡ್ ನಿಯಂತ್ರಣ ದೃಷ್ಟಿಯಿಂದ ಪಟಾಕಿ ಮಾರಾಟಗಾರರು, ಮಳಿಗೆಗಳ ಮಾಲೀಕರು ಹಾಗೂ ಕೆಲಸ ಮಾಡುವವರು ಆರ್. ಟಿ. ಪಿ. ಸಿ. ಆರ್ ಪರೀಕ್ಷೆ ಮಾಡಿಸಿ ಕನಿಷ್ಟ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರಬೇಕು" ಎಂದರು.
"ಪಟಾಕಿ ಅಂಗಡಿಗಳಲ್ಲಿ ಮಾರಾಟ ಮಾಡುವ ಪಟಾಕಿಗಳಲ್ಲಿ ನಮೂದಿತವಾಗಿರುವ ಎಂಆರ್ಪಿ ದರದ ಅರ್ಧದಷ್ಟು ದರಕ್ಕೆ ಮಾತ್ರ ಪಟಾಕಿಗಳನ್ನು ಮಾರಾಟ ಮಾಡಬೇಕು. ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಕೂಡ ಈ ಕುರಿತು ಗಮನಹರಿಸಬೇಕು. ಹೆಚ್ಚಿನ ದರದಲ್ಲಿ ಮಾರಾಟ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದು" ಎಂದು ಹೇಳಿದರು.
ಪೋಷಕರಿಗೆ ಮನವಿ; ದೀಪಾವಳಿ ಸಂದರ್ಭದಲ್ಲಿ ಪಾಲಕರು, ಪೋಷಕರು ಮಕ್ಕಳಿಂದ ಪಟಾಕಿಗಳನ್ನು ಆದಷ್ಟು ದೂರವಿಡಿಸಿ. ಈ ಹಿಂದೆ ಆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಮಕ್ಕಳ ಬಗೆಗೆ ವಿಷೇಶ ಕಾಳಜಿವಹಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಪಟಾಕಿ ಅಂಗಡಿಗಳ ಮುಂಭಾಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಹೆಚ್ಚಾಗಿ ಸುರಕ್ಷತಾ ನಾಮಫಲಕ ಹಾಕಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
Recommended Video
ಎಸ್ಪಿ ಸಿ. ಬಿ. ರಿಷ್ಯಂತ್ ಮಾತನಾಡಿ, "ಹಬ್ಬ ಆಚರಣೆ ಭರದಲ್ಲಿ ನಮ್ಮ ಸುರಕ್ಷತೆಯನ್ನು ಮರೆಯಬಾರದು. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಮಾರಾಟಗಾರರು ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಟಾಕಿ ಖರೀದಿಸಿದಕ್ಕೆ ಸಂಬಂಧಿಸಿದಂತೆ ಜಿ.ಎಸ್.ಟಿ. ಸಹಿತದ ಸೂಕ್ತ ಬಿಲ್ ಹೊಂದಿರಬೇಕು ಅಲ್ಲದೆ ಖರೀದಿ, ಮಾರಾಟ ಹಾಗೂ ಉಳಿಕೆ ದಾಸ್ತಾನು ವಿವರ ಸರಿಯಾಗಿರಬೇಕು. ಮಳಿಗೆಗಳಲ್ಲಿ ವಿದ್ಯುತ್ ವೈರಿಂಗ್ ಲೋಪದೋಷಗಳಿಲ್ಲದಂತೆ ಸಮರ್ಪಕವಾಗಿರಬೇಕು. ಅಲಂಕಾರಿಕ ವಿದ್ಯುತ್ ಸೀರಿಯಲ್ ಸೆಟ್ಗಳನ್ನು ಹಾಕಬಾರದು" ಎಂದು ಸೂಚಿಸಿದರು.