ವಿಡಿಯೋ; ವ್ಯಾಕ್ಸಿನ್ ಹಾಕುವಾಗ ವೃದ್ಧೆ ಹೈಡ್ರಾಮ
ದಾವಣಗೆರೆ, ನವೆಂಬರ್ 29; ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದರೂ ಆತಂಕ ಮಾತ್ರ ದೂರವಾಗಿಲ್ಲ. ಇದರ ಜೊತೆಗೆ ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಸೋಂಕಿನ ಭೀತಿಯೂ ಶುರುವಾಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರವೂ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಕೋವಿಡ್ ವಿರುದ್ಧದ ಲಸಿಕೆ ನೀಡಿಕೆಯನ್ನು ಚುರುಕುಗೊಳಿಸಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ದಾವಣಗೆರೆಯ ಬಾಷಾ ನಗರ, ಆಜಾದ್ ನಗರ ಸೇರಿದಂತೆ ಕೆಲವೆಡೆ ಕೊರೊನಾ ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಬಾಗಿಲಿಗೆ ಹೋದರೂ ಜನರು ಹಿಂದೇಟು ಹಾಕಿದ್ದರು.
ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಮನೆಯ ಬಾಗಿಲನ್ನೇ ತೆರೆದಿರಲಿಲ್ಲ. ಇದು ಜಿಲ್ಲಾಡಳಿತದ ಲಸಿಕೆ ನೀಡುವ ಗುರಿಗೆ ಸ್ವಲ್ಪ ಹಿನ್ನೆಡೆ ತಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊದಲ ಹಾಗೂ ಎರಡನೇ ಡೋಸ್ ನೀಡಿಕೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಹಳ್ಳಿಗಳಲ್ಲಿ ವಯಸ್ಸಾದವರು ಲಸಿಕೆ ನೀಡಿದರೆ ಜ್ವರ ಬರುತ್ತೆ, ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ಭಯದಲ್ಲೇ ಇದ್ದಾರೆ. ಈ ಕಾರಣಕ್ಕೆ ಮನೆ ಬಾಗಿಲಿಗೆ ವ್ಯಾಕ್ಸಿನ್ ನೀಡಲು ಬರುವವರ ಜೊತೆ ವಾಗ್ವಾದಕ್ಕಿಳಿಯುತ್ತಿದ್ದಾರೆ.

ವೃದ್ಧೆ ಹೈಡ್ರಾಮಾ; ಕೊರೊನಾ ಲಸಿಕೆ ನೀಡಲು ಬಂದ ಸಿಬ್ಬಂದಿ ಮುಂದೆ ದೇವರು ಬಂದಂತೆ ವೃದ್ಧೆಯೊಬ್ಬರು ನಾಟಕವಾಡಿದ ಘಟನೆ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ನಡೆದಿದೆ. ಕೈದಾಳೆ ಗ್ರಾಮದಲ್ಲಿ ಲಸಿಕೆ ಹಾಕಿಸಿಕೊಳ್ಳದಿರುವವರಿಗೆ ವ್ಯಾಕ್ಸಿನ್ ಹಾಕಲಾಗುತ್ತಿತ್ತು.
ಈ ವೇಳೆ ವೃದ್ಧೆಯ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಬರುತ್ತಿದ್ದಂತೆ ವೃದ್ದೆ ಬಡಬಡಾಯಿಸಲು ಶುರು ಮಾಡಿದಳು. ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಎಷ್ಟೇ ಮನವಿ ಮಾಡಿದರೂ ಕೇಳಲೇ ಇಲ್ಲ. ಈ ವೇಳೆ ಮೈಮೇಲೆ ದೇವಿ ಬಂದಿದ್ದಾಳೆ ಎಂದು ಹೇಳುತ್ತಾ ಹೈಡ್ರಾಮಾವನ್ನೇ ಮಾಡಿದಳು.
"ನನಗೆ ಇಂಜೆಕ್ಷನ್ ಮಾಡ್ತೀರಾ ಮಾಡ್ರೋ, ದೇವಿಗೆ ಚುಚ್ಚುತ್ತಿರೇನೋ, ಚುಚ್ಚರೋ. ನಿಮಗೆ ನಾನು ದಾರಿ ಕೊಡಲ್ಲಾ ಹೋಗಿ ಹೋಗಿ" ಎನ್ನುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
"ನಾನೀದೀನಿ, ನಾದೀನಿ" ಎನ್ನುತ್ತ ಮೈಮೇಲೆ ದೇವರು ಬಂದಿದೆ ಎಂದು ಹೈ ಡ್ರಾಮಾ ಮಾಡಿದ್ದಾಳೆ. ಎಲ್ಲವನ್ನು ದೇವಿ ನೋಡುತ್ತಾಳೆ, ಮಲ್ಲಿಗೆ ಹೂವಿನಂತೆ ಕೂತಿದ್ಧಾಳೆ. ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ಧಾಳೆ.
ಆಗ ಸಿಬ್ಬಂದಿ ಏನೇ ಹೇಳಿದರೂ ಕೇಳದೆ ವೃದ್ಧೆ ಡ್ರಾಮಾ ಮಾಡಿದ್ದಾಳೆ. ಮಾತ್ರವಲ್ಲ, ಕೊರೊನಾ ಲಸಿಕೆ ಹಾಕಲು ಕೆಲವೆಡೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಕೆಲವೊಮ್ಮೆ ಭಾರೀ ವಿರೋಧ ವ್ಯಕ್ತವಾದ ಕಾರಣ ಲಸಿಕೆ ನೀಡದೇ ವಾಪಸ್ ಆದ ಘಟನೆಗಳೂ ನಡೆದಿವೆ.
ಮನೆಯೇರಿದ ವೃದ್ದ: ಇನ್ನು ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ವೃದ್ಧನೊಬ್ಬ ಲಸಿಕೆ ನೀಡಲು ಬಂದಾಗ ಮನೆ ಮೇಲೆ ಕುಳಿತುಕೊಂಡ ಘಟನೆ ನಡೆದಿದೆ. ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಕೊರೊನಾ ಲಸಿಕೆ ಹಾಕಲು ಹೋದಾಗ ಹನುಮಂತಪ್ಪ ಮನೆ ಮೇಲೆ ಕುಳಿತಿದ್ದಾರೆ. ಬಳಿಕ ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾಧಿಕಾರಿಗಳ ಮನವಿ: ಕೊರೊನಾ ಲಸಿಕೆ ಪಡೆಯದವರು ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬೇಡಿ. ವ್ಯಾಕ್ಸಿನ್ ನೀಡಲು ಬರುವವರಿಗೆ ವಿರೋಧ ವ್ಯಕ್ತಪಡಿಸದೇ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮನವಿ ಮಾಡಿದ್ದಾರೆ.












Click it and Unblock the Notifications