ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಡಿಎಸ್ಎಸ್ ಆಗ್ರಹ
ದಾವಣಗೆರೆ, ಸೆಪ್ಟೆಂಬರ್, 02: ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರ ಮೇಲೆ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಆದರೂ ಕೂಡ ಶ್ರೀಗಳ ಪರ ಕೆಲವರು ವಕಾಲತ್ತು ವಹಿಸುತ್ತಿರುವುದು ಖಂಡನೀಯ. ಆರೋಪ ಹೊತ್ತಿರುವ ಶ್ರೀಗಳು ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಟಿ. ರವಿಕುಮಾರ್ ದಾವಣಗೆರೆಯಲ್ಲಿ ಆಗ್ರಹಿಸಿದ್ದಾರೆ. ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ.
ಡಿಎಸ್ಎಸ್ ಜಿಲ್ಲಾ ಸಂಚಾಲಕ ರವಿಕುಮಾರ್ ಮಾತನಾಡಿ, ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವವರು ಪ್ರಭಾವಶಾಲಿಗಳಾಗಿದ್ದಾರೆ. ಅವರು ಆರೋಪ ಮುಕ್ತರಾಗುವವರೆಗೆ ತಾವು ಹೊಂದಿರುವ ಉನ್ನತ ಸ್ಥಾನಗಳನ್ನು ಬಿಟ್ಟು ತನಿಖೆಗೆ ಸಹಕರಿಸಬೇಕು. ಪ್ರಾಮಾಣಿಕ ನ್ಯಾಯ ಪರತೆಯ ವ್ಯಕ್ತಿತ್ವ ಉಳ್ಳವರ ನೇತೃತ್ವದಲ್ಲಿ ತನಿಖೆ ಆಗಬೇಕು. ಸಂಧಾನಕ್ಕೂ ರೆಡಿ, ಸಮರಕ್ಕೂ ರೆಡಿ ಎಂದು ಹೇಳುವ ಶ್ರೀಗಳ ಮಾತಿನಲ್ಲಿ ಬೆದರಿಕೆ ಇರುವುದು ಖಚಿತವಾಗಿದೆ ಎಂದು ಆರೋಪಿಸಿದರು.
ಸಂಧಾನ ಎಂದರೆ ಯಾರೊಡನೆ ಮತ್ತು ಯಾವ ಕಾರಣಕ್ಕೆ ಆಗಬೇಕಿದೆ. ಹಾಗೆಯೇ ಸಮರ ಎಂದರೆ ಯಾವ ಕಾರಣಕ್ಕೆ? ಯಾರ ವಿರುದ್ಧ ಅನ್ನುವುದನ್ನು ಬಹಿರಂಗಗೊಳಿಸಬೇಕು. ಆರೋಪದ ಗಂಭೀರತೆಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೇ ಕೆಲವರು ಸಂಧಾನಕ್ಕೆ ಬಹಿರಂಗವಾಗಿ ಓಡಾಡುತ್ತಿರುವುದು ಹಾಗೂ ಮುರುಘಾ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ ಎನ್ನುವ ಮೂಲಕ ನ್ಯಾಯಾಧೀಶರಂತೆ ವರ್ತಿಸುತ್ತಿರುವುದು ಅಪರಾಧವಲ್ಲವೇ ಎಂದು ಪ್ರಶ್ನಿಸಿದರು.

ಸಂತ್ರಸ್ತೆಯರಿಗೆ ಸೂಕ್ತ ರಕ್ಷಣೆ ನೀಡಬೇಕು
ಕೆಲವರು ಮುರುಘಾ ಶರಣರನ್ನು ಸಮರ್ಥಿಸಿಕೊಳ್ಳುವ ಮೂಲಕ ನೊಂದವರ ನೈತಿಕ ಸ್ಥೈರ್ಯ ಕಸಿಯುವಂತಹ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಬೆಂಬಲಿಸುವವರ ವಿರುದ್ಧ ಸಾಕ್ಷಿ ನಾಶ ಹಾಗೂ ಆರೋಪಿಗಳಿಗೆ ರಕ್ಷಣೆ ನೀಡುವ ಕುರಿತಂತೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತ ಬಾಲಕಿಯರಿಗೆ ಸೂಕ್ತವಾದ ರಕ್ಷಣೆ ನೀಡಬೇಕು. ಹಾಗೂ ಅವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಮಕ್ಕಳ ವಿದ್ಯಾಭ್ಯಾಸ, ಸರ್ಕಾರಿ ನೌಕರಿಯನ್ನು ಕೊಡಬೇಕು ಎಂದು ಪ್ರಗತಿಪರ ಸಂಘಟನೆಗ ಒಕ್ಕೂಟ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಮುರುಘಾ ಶ್ರೀಗಳು ವಿರುದ್ಧ ಗಂಭೀರ ಆರೋಪ
ಮುರುಘಾ ಶ್ರೀಗಳು ತಮ್ಮ ಮೇಲೆ ಬಂದಿರುವ ಆರೋಪವನ್ನು ಬುದ್ಧ, ಏಸು, ಸಾಕ್ರೆಟೀಸ್, ಬಸವಣ್ಣನವರ ಮೇಲೆ ಬಂದ ಆರೋಪಿಗಳನ್ನು ಸಮೀಕರಿಸಿಕೊಂಡು ತಾವೂ ಅಷ್ಟೇ ದೊಡ್ಡವರೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿತನ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಠಗಳು ರಾಜಕೀಯ ಪಕ್ಷಗಳ, ಅಧಿಕಾರಿಶಾಹಿ ಪೊಲೀಸ್ ವ್ಯವಸ್ಥೆ ನಡುವೆ ವ್ಯವಸ್ಥಿ ಕೂಟವಾಗಿ ಮಾರ್ಪಟ್ಟಿವೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ನ್ಯಾಯ ಸಮ್ಮತವಾದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತೆಯರಿಗೆ ಅನ್ಯಾಯ ಮಾಡುತ್ತಿದ್ದಾರೆ
ಪೋಕ್ಸೋ ಮತ್ತು ಅಸ್ಪೃಶ್ಯತಾ ನಿಷೇಧ ಕಾಯ್ದೆ ಅಡಿ ಆರೋಪಿ ಆಗಿರುವ ಮುರುಘಾ ಶರಣರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು. ಶಿವಮೂರ್ತಿ ಮುರುಘಾ ಶರಣರು ಪ್ರತಿಷ್ಠಿತ ಮಠದ ಮುಖ್ಯಸ್ಥರಾಗಿರುವುದರಿಂದ ಮತ್ತು ಆರೋಪಿಗಳೆಲ್ಲರೂ ಅತ್ಯಂತ ಪ್ರಭಾವಿಗಳಾಗಿರುವುದರಿಂದ ಪೊಲೀಸ್ ಇಲಾಖೆ ಇದುವರೆಗೆ ಆರೋಪಿತರರನ್ನು ಯಾವುದೇ ವಿಚಾರಣೆ ಮಾಡಿಲ್ಲ. ಬದಲಿಗೆ ಸಂತ್ರಸ್ತೆಯರ ಖಾಸಗಿತನ ಕಾಪಾಡದೇ ಅವರನ್ನು ಭಯಗೊಳಿಸುವ ರೀತಿಯಲ್ಲಿ ಮಠದ ಸಾವಿರಾರು ಭಕ್ತರ ನಡುವೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಇಂತಹ ಕ್ರಮಗಳಿಂದ ಸಂತ್ರಸ್ತೆಯರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ಮೂಡಿದೆ ಎಂದು ಅಸಮಾಧಾನ ಹೊರಹಾಕಿದರು.

ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ
ಚಿತ್ರದುರ್ಗದ ಮುರುಘಾ ಮಠರನ್ನು ಸೀಜ್ ಮಾಡಿ ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ರಾಜ್ಯದ ಎಲ್ಲಾ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಅಡಿ ನಡೆಯುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಮೈಸೂರಿನ ಒಡನಾಡಿ ಸಂಸ್ಥೆಯವರಿಗೆ ತೀವ್ರ ಬೆದರಿಕೆ ಇರುವುದರಿಂದ ಅವರಿಗೆ ರಕ್ಷಣೆ ನೀಡಬೇಕು. ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು, ಸಚಿವರು, ಶಾಸಕರಾದಿಯಾಗಿ ಅನೇಕರು ಶರಣರ ಪರ ಹೇಳಿಕೆ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಶ್ರೀಗಳ ಪರ ಹೇಳಿಕೆ ನೀಡಿದವರನ್ನು ವಿಚಾರಣೆಗೆ ಒಳಪಡಿಸಬೇಕು. ಪ್ರಕರಣದ ಇತರೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.












Click it and Unblock the Notifications