ಅಜ್ಜ, ಅಜ್ಜಿ ಸಮಾಧಿ ಮಧ್ಯೆ ಚಂದ್ರು ಅಂತ್ಯಕ್ರಿಯೆ: ಶೋಕಸಾಗರದಲ್ಲಿ ರೇಣುಕಾಚಾರ್ಯ ಕುಟುಂಬ
ದಾವಣಗೆರೆ, ನವೆಂಬರ್4: ಕಳೆದ ಭಾನುವಾರ ನಾಪತ್ತೆಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ.
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಎಸ್ಎಫ್ಎಲ್ಗೆ ವರದಿ ಕಳುಹಿಸಿಕೊಡಲಾಗಿದೆ. ಇನ್ನು ಮೃತದೇಹದ ಅಂತಿಮ ದರ್ಶನಕ್ಕೆ ರೇಣುಕಾಚಾರ್ಯ ಅವರ ಹೊನ್ನಾಳಿ ಪಟ್ಟಣದ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ರೇಣುಕಾಚಾರ್ಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚಂದ್ರು ಸಾವಿನ ಹಿಂದೆ ಕಾಣದ ಕೈಗಳ ಕೈವಾಡ: ರೇಣುಕಾಚಾರ್ಯ ಆರೋಪ
ಹೊನ್ನಾಳಿ, ನ್ಯಾಮತಿ ಸೇರಿದಂತೆ ಹಳ್ಳಿಗಳಿಂದಲೂ ಜನರು ಜಮಾಯಿಸಿದ್ದು, ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಾಜಿ ಸಚಿವ ಹಾಗೂ ಶಾಸಕ ಕೆ. ಎಸ್. ಈಶ್ವರಪ್ಪರ ಪುತ್ರ ಕಾಂತೇಶ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಎಲ್ಲೆಡೆ ನೀರವ ಮೌನ ಆವರಿಸಿದೆ.
ಹೊನ್ನಾಳಿಯಲ್ಲಿ ಚಂದ್ರಶೇಖರ್ ಅಂತಿಮಯಾತ್ರೆ
ಹೊನ್ನಾಳಿಯ ಹಿರೇಮಠದಲ್ಲಿರುವ ರೇಣುಕಾಚಾರ್ಯ ನಿವಾಸಕ್ಕೆ ಆಗಮಿಸುತ್ತಿರುವ ಜನರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಬೆಳಗ್ಗೆಯೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಹೊನ್ನಾಳಿಯ ಹಿರೇಮಠದ ವೃತ್ತದಿಂದ, ಮರಳೋಣಿ ರಸ್ತೆ, ದುರ್ಗಿಗುಡಿ ಸರ್ಕಲ್ ನಿಂದ ಪೇಟೆ ಹಳದಮ್ಮ ದೇಸ್ಥಾನದಿಂದ ಕೆನರಾಬ್ಯಾಂಕ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ದೇವನಾಯ್ಕನಹಳ್ಳಿ ವೃತ್ತ ತಲುಪಿ ನಂತರ ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ, ಸಿಂಟಟಗೆರೆ, ಹನುಮನಹಳ್ಳಿಗೆ ಪಾರ್ಥೀವ ಶರೀರ ತಲುಪಿದೆ. ಬಳಿಕ ರೇಣುಕಾಚಾರ್ಯರ ಹುಟ್ಟೂರು ಕುಂದೂರು ತಲುಪಿ, ಕುಂದೂರಿನ ಪ್ರಮುಖ ರಸ್ತೆಯಲ್ಲಿ ಅಂತಿಮ ಯಾತ್ರೆ ಸಾಗಲಿದೆ.
Chandrashekar Death Timeline; ಚಂದ್ರಶೇಖರ್ ಶವ ಪತ್ತೆ, 5 ದಿನದ ಘಟನಾವಳಿಗಳು
ಹೊನ್ನಾಳಿ ಪಟ್ಟಣದಲ್ಲಿ ನೀರವ ಮೌನ
ಆ ಬಳಿಕ ಕುಂದೂರಿನಲ್ಲಿರುವ ರೇಣುಕಾಚಾರ್ಯರ ತೆಂಗಿನತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ರೇಣುಕಾಚಾರ್ಯರ ತಂದೆ, ತಾಯಿ ಹಾಗೂ ಚಂದ್ರಶೇಖರ್ ಅಜ್ಜ ಅಜ್ಜಿಯ ಸಮಾಧಿ ಮಧ್ಯೆದಲ್ಲಿ ವಿಧಿವಿಧಾನದ ಮೂಲಕ 2 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದ್ದು ಸಾರ್ವಜನಿಕರು ಸಹಕರಿಸುವಂತೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ. ಚಂದ್ರಶೇಖರ್ ಸಾವಿನ ಬಳಿಕ ಹೊನ್ನಾಳಿ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ. ಕುಂದೂರಿನಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಜನರು ಮುಚ್ಚಿದ್ದಾರೆ. ಬಂದ್ ವಾತಾವರಣ ನಿರ್ಮಾಣ ಆಗಿದೆ.
ಚಂದ್ರಶೇಖರ್ ಕೊಲೆ: ಕುಟುಂಬಸ್ಥರ ಆರೋಪ
ಕಳೆದ ಭಾನುವಾರ ನಿಗೂಢವಾಗಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ ಹೊನ್ನಾಳಿ ಸಮೀಪದ ಹೆಚ್ ಕಡದಕಟ್ಟೆ ಬಳಿ ಕಾರು ಪತ್ತೆಯಾಗಿತ್ತು. ಕಾರು ಮೇಲಕ್ಕೆತ್ತಿದ್ದಾಗ ಚಂದ್ರಶೇಖರ್ ಶವ ಸಿಕ್ಕಿತ್ತು. ಇನ್ನು ರೇಣುಕಾಚಾರ್ಯರು ಚಂದ್ರಶೇಖರ್ ನದ್ದು ಕೊಲೆ. ಇದು ವ್ಯವಸ್ಥಿತವಾಗಿ ಮಾಡಿರುವ ಹತ್ಯೆ. ರಾಜಕೀಯ ಷಡ್ಯಂತ್ರದಿಂದ ಈ ಕೃತ್ಯ ಎಸಗಲಾಗಿದೆ. ಚಂದ್ರಶೇಖರ್ ಕುತ್ತಿಗೆ, ಬೆನ್ನ ಹಿಂದೆ ಗುರುತುಗಳು ಪತ್ತೆಯಾಗಿದ್ದು, ಕಾಲು ಕಟ್ಟಿ ಹಾಕಿ ಕೊಂದು ಹಾಕಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಚಂದ್ರಶೇಖರ್ ಕೊಲೆ ಆಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೊಲೆ ಎಂದು ನೇರವಾಗಿ ಆರೋಪಿಸಿದ ರೇಣುಕಾಚಾರ್ಯ
ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾರು ಪತ್ತೆಯಾಗಿದ್ದ ಸ್ಥಳಕ್ಕೆ ಆಗಮಿಸಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಎಫ್ಎಸ್ಎಲ್ ತಜ್ಞರು ಸ್ಯಾಂಪಲ್ಗಳನ್ನು ಸಂಗ್ರಹಿಸಿದೆ. ಇನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ರೇಣುಕಾಚಾರ್ಯ ನೇರವಾಗಿ ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಚಂದ್ರಶೇಖರ್ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದಿದೆ.