ಚಂದ್ರು ಪಾರ್ಥಿವ ಶರೀರದ ಎದುರು ರೇಣುಕಾಚಾರ್ಯ ಗೋಳಾಟ
ದಾವಣಗೆರೆ ನವೆಂಬರ್4: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಪಾರ್ಥೀವ ಶರೀರದ ದರ್ಶನಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು. ಬಂದ ಎಲ್ಲರೂ ನೋವಿನ ಮಡುವಿನಲ್ಲಿದ್ದರು.
ಮಗನನ್ನು ನೆನೆದು ಕಣ್ಣೀರು ಹಾಕುತ್ತಲೇ ಇದ್ದ ಶಾಸಕ ರೇಣುಕಾಚಾರ್ಯರು ಚಂದ್ರುವಿನ ಭಾವಚಿತ್ರ ಹಿಡಿದು ಬಿಕ್ಕಿ ಬಿಕ್ಕಿ ಅತ್ತರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಾಸಕ ರೇಣುಕಾಚಾರ್ಯರ ರಾಜಕೀಯ ಬೆನ್ನೆಲುಬಾಗಿದ್ದ ಚಂದ್ರಶೇಖರ್
ಹೊನ್ನಾಳಿ ಪಟ್ಟಣದ ಶಾಸಕ ರೇಣುಕಾಚಾರ್ಯರ ಮನೆಯಲ್ಲಿ ಚಂದ್ರಶೇಖರ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಿರೇಕಲ್ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಪೂಜೆ ನೆರವೇರಿಸಿದರು. ಈ ವೇಳೆ ಚಂದ್ರು ಚಂದ್ರು ಅಂತಾ ರೇಣುಕಾಚಾರ್ಯರು ಬಿಕ್ಕಿ ಬಿಕ್ಕಿ ಅತ್ತರು. ನನ್ನ ಮುಖ ನೋಡಪ್ಪಾ ಅಂತಾ ಕಣ್ಣೀರಿಟ್ಟರು. ಇನ್ನು ಎಂ.ಪಿ ರಮೇಶ್, ಚಂದ್ರುವಿನ ತಾಯಿ, ಸಂಬಂಧಿಕರು, ಯುವಕರು, ಮಹಿಳೆಯರು ಕಣ್ಣೀರು ಸುರಿಸಿದರು.
ಚಂದ್ರು ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು
ಚಂದ್ರಶೇಖರ್ ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿದ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಾವುಕ ಮನಸ್ಸಿನಿಂದಲೇ ಸಾವಿರಾರು ಜನರು ದರ್ಶನ ಪಡೆದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ಬಿ. ವೈ. ರಾಘವೇಂದ್ರ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಅವರ ಪುತ್ರ ಕಾಂತೇಶ್, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಕಾಂಗ್ರೆಸ್ ನ ಮಾಜಿ ಶಾಸಕ ಡಿ. ಬಿ. ಶಾಂತನಗೌಡ, ಸಂಸದ ಜಿ. ಎಂ. ಸಿದ್ದೇಶ್ವರ್, ಗಾಯತ್ರಿ, ಪ್ರೊ. ಲಿಂಗಣ್ಣ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಮಂದಿ ಅಂತಿಮ ದರ್ಶನ ಪಡೆದರು.
ಮುಗಿಲು ಮುಟ್ಟಿದ ಚಂದ್ರು ಪರ ಘೋಷಣೆಗಳು
ಹೊನ್ನಾಳಿ ಹಿರೇಮಠ ವೃತ್ತದಿಂದ ಹೊರಟ ಮೆರವಣಿಗೆಯು ಸುಮಾರು 20 ಕಿಲೋಮೀಟರ್ ದೂರದ ಕುಂದೂರುವರೆಗೆ ಇತ್ತು. ಮರಳೋಣಿ ರಸ್ತೆ, ದುರ್ಗಿಗುಡಿ ಸರ್ಕಲ್ ನಿಂದ ಪೇಟೆ ಹಳದಮ್ಮ ದೇಸ್ಥಾನದಿಂದ ಕೆನರಾಬ್ಯಾಂಕ್ ರಸ್ತೆ,
ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ದೇವನಾಯ್ಕನಹಳ್ಳಿ ಸರ್ಕಲ್, ನಂತರ ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ ಸಿಂಟಟಗೆರೆ, ಹನುಮನಹಳ್ಳಿಗೆ ಪಾರ್ಥೀವ ಶರೀರ ತಲುಪಿತು. ಕುಂದೂರಿನ ಪ್ರಮುಖ ರಸ್ತೆಯಲ್ಲಿ
ಅಂತಿಮ ಯಾತ್ರೆ ಸಾಗಿತು. ಈ ವೇಳೆ ಚಂದ್ರು ಪರ ಘೋಷಣೆಗಳು ಮುಗಿಲು ಮುಟ್ಟಿದವು. ಇನ್ನು ಚಂದ್ರಶೇಖರ್ ಸಾವಿನ ಬಳಿಕ ಹೊನ್ನಾಳಿ ಪಟ್ಟಣದಲ್ಲಿ ನೀರವ ಮೌನ ಆವರಿಸಿತ್ತು. ಕುಂದೂರಿನಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಜನರು ಮುಚ್ಚಿದ್ದರು.
ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ
ಕಳೆದ ಭಾನುವಾರ ನಿಗೂಢವಾಗಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಗುರುವಾರ ಸಂಜೆ ಹೊನ್ನಾಳಿ ಸಮೀಪದ ಹೆಚ್. ಕಡದಕಟ್ಟೆ ಬಳಿ ಕಾರು ಪತ್ತೆಯಾಗಿತ್ತು. ಕಾರು ಮೇಲಕ್ಕೆತ್ತಿದ್ದಾಗ ಚಂದ್ರಶೇಖರ್ ಮೃತದೇಹ ಸಿಕ್ಕಿತ್ತು. ಇನ್ನು ಚಂದ್ರಶೇಖರ್ ನದ್ದು ಕೊಲೆ. ಇದು ವ್ಯವಸ್ಥಿತವಾಗಿ ಮಾಡಿರುವ ಹತ್ಯೆ. ರಾಜಕೀಯ ಷಡ್ಯಂತ್ರದಿಂದ ಈ ಕೃತ್ಯ ಎಸಗಲಾಗಿದೆ. ಚಂದ್ರುವಿನ ಕುತ್ತಿಗೆ, ಬೆನ್ನ ಹಿಂದೆ ಗುರುತುಗಳು ಪತ್ತೆಯಾಗಿದ್ದು, ಕಾಲು ಕಟ್ಟಿ ಹಾಕಿ ಕೊಂದು ಹಾಕಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರೇಣುಕಾಚಾರ್ಯ ಆರೋಪಿಸಿದ್ದರು. ಈ ಮೂಲಕ ಚಂದ್ರಶೇಖರ್ ಕೊಲೆ ಆಗಿದ್ದಾನೆ ಎಂದು ಕುಟುಂಬಸ್ಥರು ಒತ್ತಾಯಿಸತೊಡಗಿದ್ದಾರೆ.
ಕಣ್ಣೀರು ಹಾಕಿದ ಶಾಸಕ ರೇಣುಕಾಚಾರ್ಯ
ಚಂದ್ರಶೇಖರ್ ನನ್ನ ಜೊತೆ ಓಡಾಡಿಕೊಂಡು ಇದ್ದಿದ್ದೇ ತಪ್ಪಾಯ್ತಾ? ರಾಜಕೀಯ ದ್ವೇಷಕ್ಕೆ ಬಲಿಯಾದಾ? ನನ್ನ ಜೊತೆ ಇಲ್ಲದಿದ್ದರೆ ಇರುತ್ತಿದ್ಯಾ ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ಗೋಳಾಡಿದರು. ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮಗೆ ದೇಶ ಮುಖ್ಯ. ಜಾತಿ ಮುಖ್ಯ ಅಲ್ಲ. ಭಾರತ ಮಾತೆ ಪೂಜಿಸಿದ್ದ, ಹಿಂದುತ್ವಕ್ಕಾಗಿ ನನ್ನ ಮಗ ಹೋರಾಟ ಮಾಡಿದ್ದ. ಹಿಂದುತ್ವವೇ ನಮ್ಮ ಪರಂಪರೆ ಎಂದು ಹೇಳಿದರು. ಅವನಿಗೋಸ್ಕರ ಕನಸು ಕಂಡಿದ್ದೆ. ಬೆಂಗಳೂರಿನಿಂದ ನಾನು ಬರುವುದನ್ನೇ ಕಾಯುತ್ತಿದ್ದ. ಚಂದ್ರುವಿನ ಸಲಹೆ ಪಡೆಯುತ್ತಿದ್ದೆ. ಯುವಕರ ಜೊತೆ ಚೆನ್ನಾಗಿ ಇರುತ್ತಿದ್ದ. ಇವತ್ತು ಅವನು ಇಲ್ಲವಲ್ಲಾ ಎಂಬ ಕೊರಗು ಕಾಡುತ್ತಲೇ ಇದೆ ಎಂದು ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ.
ಕಾರು ಪತ್ತೆಯಾಗಿದ್ದ ಸ್ಥಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದರು. ಈ ವೇಳೆ ಎಫ್ ಎಸ್ ಎಲ್ ತಜ್ಞರು ಸ್ಯಾಂಪಲ್ ಗಳನ್ನು ಸಂಗ್ರಹಿಸಿದೆ. ಇನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ರೇಣುಕಾಚಾರ್ಯ ಅವರಂತೂ ನೇರವಾಗಿ ಇದೊಂದು ಕೊಲೆ ಎಂದಿದ್ದಾರೆ. ಒಟ್ಟಾರೆ ಚಂದ್ರಶೇಖರ್ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದಿದೆ.