ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ: ಚಂದ್ರುಗೆ ಕರೆ ಮಾಡಿದ್ದು ಯಾರು
ದಾವಣಗೆರೆ, ನವೆಂಬರ್2: ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರ ನಾಪತ್ತೆ ಪ್ರಕರಣ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ಚಂದ್ರಶೇಖರ್ ಬಳಸುತ್ತಿದ್ದ ಕಾರು ನ್ಯಾಮತಿ ಮಾರ್ಗವಾಗಿ ಹೊನ್ನಾಳಿ ಕಡೆಗೆ ಬಂದದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸತೊಡಗಿದ್ದಾರೆ.
ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ಕಾಣೆಯಾಗುವ ಮುನ್ನಾ ದಿನದ ರಾತ್ರಿ 11.30ಕ್ಕೆ ಶಿವಮೊಗ್ಗದ ಜವಾಹಾರ್ ಲಾಲ್ ಇಂಜಿನಿಯರಿಂಗ್ ಕಾಲೇಜು ಬಳಿ ತನ್ನ ಸ್ನೇಹಿತನ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಆತನ ಹೆಸರು ಕಿರಣ್ಎನ್ನಲಾಗುತ್ತಿದ್ದು, ಮೊಬೈಲ್ ಕರೆ ಆಧರಿಸಿ ಮಾಹಿತಿ ಕಲೆ ಹಾಕಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಗನೇ ಸುರಕ್ಷಿತವಾಗಿ ಬಾ: ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಕಣ್ಣೀರು
ಈವರೆಗೂ ಪತ್ತೆಯಾಗದ ಎಂ.ಪಿ. ರಮೇಶ್ ಪುತ್ರನ ಸುಳಿವು
ಕಪ್ಪು ಬಣ್ಣದ ಪ್ಯಾಂಟ್, ಶರ್ಟ್, ಕೇಸರಿ ಟವೆಲ್ ಧರಿಸಿದ್ದ ಚಂದ್ರಶೇಖರ್, ಕ್ರೇಟಾ ಕಾರಿನಲ್ಲಿ ಬಂದಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದ ಕಾರಣ ಕುಟುಂಬದವರು ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಚಂದ್ರಶೇಖರ್ ಕರೆ ಸ್ವೀಕರಿಸಿಲ್ಲ. ಬೆಳಗ್ಗೆ ಮತ್ತೆ ಕಾಲ್ ಮಾಡಿದರೂ ರಿಸೀವ್ ಆಗಿಲ್ಲ. ಆಮೇಲೆ ಸ್ವಿಚ್ ಆಫ್ ಆಗಿದೆ. ಸ್ನೇಹಿತರಿಗೂ ಕರೆ ಮಾಡಿ ಬಂದಿದ್ದಾನೆಯೇ ಎಂಬ ಬಗ್ಗೆ ವಿಚಾರಿಸಲಾಗಿದೆ. ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ, ಈವರೆಗೂ ಯಾವುದೇ ಮಾಹಿತಿಯೂ ಸಿಕ್ಕಿಲ್ಲ. ನಾಪತ್ತೆಯಾದ ಚಂದ್ರಶೇಖರ್ಗಾಗಿ ಎಲ್ಲಾ ಕಡೆಗಳಲ್ಲಿಯೂ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ರೇಣುಕಾಚಾರ್ಯಗೆ ಧೈರ್ಯ ತುಂಬಿದ ಯಡಿಯೂರಪ್ಪ
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೂ ಈ ವಿಚಾರ ತಿಳಿಸಲಾಗಿದೆ. ಮನಸ್ಸು ಭಾರವಾಗಿದ್ದರು, ರೇಣುಕಾಚಾರ್ಯ ಅವರು ಹೊನ್ನಾಳಿ, ನ್ಯಾಮತಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ರೇಣುಕಾಚಾರ್ಯ ಅವರು ಪೊಲೀಸರ ನಿರಂತರ ಸಂಪರ್ಕದಲ್ಲಿದ್ದು, ಸಹೋದರನ ಮನಗ ಪತ್ತೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೂ ಸಹ ರೇಣುಕಾಚಾರ್ಯರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರೂ ಸಹ ಶಾಸಕರು ಮತ್ತು ಕುಟುಂಬದವರಿಗೆ ಆತ್ಮವಿಶ್ವಾಸದ ಮಾತು ಹೇಳುತ್ತಿದ್ದಾರೆ.
ಚಂದ್ರು ಸೌಮ್ಯ ಸ್ವಭಾವದವ ಎಂದು ಶಾಸಕರು ಭಾವುಕ
ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ದುಃಖ ಇದ್ದರೂ ಪಾಲ್ಗೊಂಡಿದ್ದೆ. ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಬ್ಬರೂ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಸೋತಾಗಲೂ ಕಣ್ಣೀರು ಹಾಕಿರಲಿಲ್ಲ. ಕ್ಷೇತ್ರದ ಜನರೇ ದೇವರು ಕೇಳಿಸುವ ಕೆಲಸ ಮಾಡುತ್ತಿದ್ದಾರೆ. ಆತ ನಮ್ಮ ಕುಟುಂಬದಲ್ಲಿ ತದ್ವಿರುದ್ಧ. ಒಂದು ಕೆಟ್ಟ ಶಬ್ಧ ಆತನ ಬಾಯಲ್ಲಿ ಬರುತ್ತಿರಲ್ಲ. ಅಷ್ಟು ಲವಲವಿಕೆಯಿಂದ ಓಡಾಡುತ್ತಿದ್ದ. ಚಂದ್ರು ಎಲ್ಲರನ್ನೂ ಬಹಳ ಚೆನ್ನಾಗಿ ಮಾತನಾಡಿಸುತ್ತಾನೆ. ಎರಡು ಕೈ ಎತ್ತಿ ಅಜ್ಜಿಯರು, ತಾಯಂದಿರಿಗೆ ನಮಸ್ಕಾರ ಮಾಡುತ್ತಾನೆ. ಯುವ ನಾಯಕನಂತೆ ಸೌಮ್ಯ ಸ್ವಭಾವದವನಾಗಿದ್ದ. ಗಣೇಶೋತ್ಸವದ ಮೆರವಣಿಗೆಯಲ್ಲಿ ಖುಷಿ ಖುಷಿಯಿಂದಲೇ ಪಾಲ್ಗೊಂಡಿದ್ದ. ಆತ ಪತ್ತೆಯಾಗದಿರುವುದು ಎಲ್ಲರಲ್ಲಿಯೂ ನೋವು ತಂದಿದೆ ಎಂದು ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ.
ಮನೆಗೆ ವಾಪಾಸ್ ಬಾ ಮಗನೇ ಎಂದ ರೇಣುಕಾಚಾರ್ಯ
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ರೇಣುಕಾಚಾರ್ಯ ಭಾವುಕರಾಗಿ ಸಂದೇಶ ಕಳುಹಿಸಿದ್ದಾರೆ. ಬೇಗ ಮನೆಗೆ ವಾಪಾಸ್ ಬಾ ಮಗನೇ, ಚಂದ್ರು ಎಲ್ಲಿದ್ದರೂ ಬೇಗ ಬಾ ಎಂದು ಮೆಸೇಜ್ ಹಾಕಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ವ್ಯಾಟ್ಸಪ್ ಗ್ರೂಪ್ ಗಳಲ್ಲಿಯೂ ಚಂದ್ರು ಎಲ್ಲಿದ್ದರೂ ಬೇಗನೇ ಬಾ. ಎಲ್ಲರೂ ಕಾಯುತ್ತಿದ್ದೇವೆ ಎಂದು ಸಂದೇಶ ಕಳುಹಿಸಿದ್ದಾರೆ. ದಯವಿಟ್ಟು ಯಾರಿಗಾದರೂ ಮಾಹಿತಿ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ.