ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಆಹ್ವಾನಿಸಿದ ಸಚಿವರು!
ದಾವಣಗೆರೆ, ಜುಲೈ 13; "ನಾನು ಕರೆಯುತ್ತೇನೆ, ಕಾಂಗ್ರೆಸ್ನವರು ಯಾರೇ ಇದ್ದರೂ ಬಿಜೆಪಿಗೆ ಬರಬಹುದು" ಎಂದು ನಗರಾಭಿವೃದ್ಧಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಆಹ್ವಾನ ನೀಡಿದರು.
ದಾವಣಗೆರೆಯ ಜಗಳೂರಿನಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷಕ್ಕೆ ಬರುವವರು ಅರ್ಜಿ ಹಾಕಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
"ವಲಸೆ ಬಂದ ನಾಯಕರೆಲ್ಲರೂ ಕಮಲದ ಚಿಹ್ನೆಯಡಿ ನೆಮ್ಮದಿಯಾಗಿದ್ದೇವೆ. ಯಾವುದೇ ತೊಂದರೆ ಇಲ್ಲ. ಕೈ ನಾಯಕರು ಬೇಕಿದ್ದರೆ ಬಿಜೆಪಿಗೆ ಬರಲಿ" ಎಂದು ಸಚಿವರು ಆಹ್ವಾನ ಕೊಟ್ಟರು.

"ನಾನು ಇಡೀ ಜಿಲ್ಲೆ ಸಂಚಾರ ಮಾಡುತ್ತಿದ್ದೇನೆ. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಇದೆ. ನಾನು ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಗೆದ್ದು ಈಗ ಮಂತ್ರಿಯಾಗಿದ್ದೇನೆ" ಎಂದು ಸಚಿವರು ಹೇಳಿದರು.
ದಿನೇಶ್ ಗುಂಡೂರಾವ್ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಕುರಿತು ಮಾತನಾಡಿದ ಭೈರತಿ ಬಸವರಾಜ್, "ದಿನೇಶ್ ಗುಂಡೂರಾವ್ ಅವರದ್ದು ವಿಮಾನ ನಿಲ್ದಾಣ ರಸ್ತೆಯಲ್ಲಿ ಜಮೀನು ಹಗರಣವಾಗಿತ್ತು. ಸಾಧರಹಳ್ಳಿ ಗೇಟ್ನಲ್ಲಿ ಜಮೀನು ಹಗರಣವಾಗಿತ್ತು" ಎಂದರು.
"ಭೂ ಹಗರಣಗಳು ಆದಾಗ ಬಿಜೆಪಿ ಸರ್ಕಾರ ದಿನೇಶ್ ಗುಂಡೂರಾವ್ ರಾಜೀನಾಮೆ ಕೇಳಿದ್ದರು. ಅವರು ಕೊಟ್ಟಿದ್ದರಾ?. ಭ್ರಷ್ಟಾಚಾರ ಆಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ ಕೇಳಲಿ" ಎಂದು ಸಚಿವರು ತಿರುಗೇಟು ನೀಡಿದರು.












Click it and Unblock the Notifications