ಪ್ರೇಮಿಗಳಿಗೆ ಜೀವ ಬೆದರಿಕೆ: ರಕ್ಷಣೆ ಕೋರುತ್ತಿರುವ ಜೋಡಿಗಳು
ದಾವಣಗೆರೆ, ಜನವರಿ 03: ಪ್ರೀತಿಯ ಬಲೆಯಲ್ಲಿ ಬಿದ್ದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಜೋಡಿಗಳು ಈಗ ಜೀವಭಯದಲ್ಲಿ ಬದುಕುವಂತಾಗಿದೆ. ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು, ಈಗ ಮನೆ ಬಿಟ್ಟು ಬಂದು ಮದುವೆ ಮಾಡಿಕೊಂಡಿದ್ದಾರೆ.
ಪ್ರೀತಿ ಅಂದ್ರೆನೇ ಹಾಗೆ. ಅದಕ್ಕೆ ಜಾತಿ, ಬೇಧ, ಭಾವ ಅನ್ನೋದೆ ಇರೋಲ್ಲ. ಹೀಗೆ ಪ್ರೀತಿಯ ಬಲೆಯಲ್ಲಿ ಬಿದ್ದ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿಯಾದ ಪವಿತ್ರ ಹಾಗೂ ಹರಪ್ಪನಹಳ್ಳಿ ತಾಲ್ಲೂಕಿನ ಖಂಡೇಕೆರೆ ಗ್ರಾಮದ ಯುವಕ ಕೊಟ್ರೇಶ್ ಜೋಡಿಗಳು ಈಗ ಜೀವ ಭಯದಲ್ಲಿ ಬದುಕುವಂತಾಗಿದೆ.
ಹರಿಹರ ಪಟ್ಟಣದಲ್ಲಿರುವ ಪವಿತ್ರ ಮನೆ ಎದುರು ಜೆಸಿಬಿ ಚಾಲಕನಾಗಿದ್ದ ಕೊಟ್ರೇಶ್ ರೂಮ್ ಬಾಡಿಗೆ ಮಾಡಿಕೊಂಡಿದ್ದು, ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮಗಳಾದ ಪವಿತ್ರ ಹಾಗೂ ಕೊಟ್ರೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಹಚ್ಚಿಕೊಂಡಿದ್ದರು. ಆದರೆ ಪವಿತ್ರ ಅವರ ಮನೆಯಲ್ಲಿ ವಿರೋಧ ವ್ಯಕ್ತವಾಗಿ, ಇವರ ಪ್ರೀತಿಗೆ ಮನೆಯವರೇ ಖಳನಾಯಕರಾಗಿದ್ದರು.

ಇದರಿಂದ ಜೋಡಿ ಹಕ್ಕಿಗಳು ಮನೆ ಬಿಟ್ಟು ಬೆಂಗಳೂರಿಗೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಇಬ್ಬರು ಬೆಂಗಳೂರಿನಲ್ಲಿರುವ ಮಾಹಿತಿ ಗೊತ್ತಾದ ಪವಿತ್ರ ಪೋಷಕರು, ಇಬ್ಬರು ಪ್ರೇಮಿಗಳನ್ನು ದೂರ ಮಾಡಿದ್ದಾರೆ. ಆದರೆ ಪ್ರೇಮಿಗಳು ಈಗ ಮತ್ತೆ ಮನೆ ಬಿಟ್ಟು ಬಂದಿದ್ದಾರೆ.
ಯುವತಿ ಪವಿತ್ರ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪದೇ ಪದೇ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಿಮ್ಮನ್ನು ಜೀವಂತವಾಗಿ ಇರಲು ಬಿಡೋದಿಲ್ಲ ಎನ್ನುವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ಆರೋಪಿಸಿದ್ದಾರೆ.

ನನ್ನ ಸ್ವ ಇಚ್ಛೆಯಿಂದ ನಾನು ಬಂದಿದ್ದೇನೆ, ಅಲ್ಲದೆ ನಾವು ಮದುವೆಯಾಗಿದ್ದೇವೆ. ಇದು ನಮ್ಮ ಜೀವನ. ನಾವು ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಯುವತಿ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಅಲ್ಲದೆ ಯುವಕ ಕೊಟ್ರೇಶ್ ತಾಯಿ ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ದು, ತಂದೆ ಇಲ್ಲದ ಮಗನನ್ನು ಕಷ್ಟ ಪಟ್ಟು ಬೆಳೆಸಿ ದೊಡ್ಡವವನ್ನಾಗಿ ಮಾಡಿದ್ದೇನೆ, ಪವಿತ್ರಳನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.
ಸದ್ಯಕ್ಕೆ ಈ ಪ್ರೇಮಿಗಳು, ನಾವಿಬ್ಬರೂ ಜೀವನ ಪರ್ಯಂತ ಪ್ರೀತಿಯಿಂದ ಜೀವನ ನಡೆಸಬೇಕು, ನಮ್ಮ ಕುಟುಂಬದಿಂದ ರಕ್ಷಣೆ ಬೇಕು ಎಂದು ಪೊಲೀಸರಿಗೆ ಮನವಿ ಮಾಡಲು ಸಿದ್ದರಾಗಿದ್ದಾರೆ.












Click it and Unblock the Notifications