ನಾಳೆ ದಾವಣಗೆರೆ ರೈಲ್ವೆ ನಿಲ್ದಾಣ ಸೌಲಭ್ಯಗಳ ಉದ್ಘಾಟನಾ ಸಮಾರಂಭ
ದಾವಣಗೆರೆ, ಫೆಬ್ರವರಿ 20: ಮೈಸೂರು ವಿಭಾಗದ ಪ್ರಮುಖ ನಿಲ್ದಾಣಗಳಲ್ಲಿ ದಾವಣಗೆರೆ ರೈಲ್ವೆ ನಿಲ್ದಾಣವೂ ಸಹ ಒಂದಾಗಿದ್ದು, ದಿನಕ್ಕೆ ಸರಾಸರಿ 6,500 ಪ್ರಯಾಣಿಕರನ್ನು ನಿಭಾಯಿಸುತ್ತಿದೆ.
ಒಟ್ಟು 27 ಜೋಡಿ ಎಕ್ಸ್ ಪ್ರೆಸ್ ಮತ್ತು 6 ಜೋಡಿ ಪ್ರಯಾಣಿಕರ ರೈಲುಗಳನ್ನು (ದೈನಂದಿನವಲ್ಲದ ರೈಲುಗಳೂ ಸೇರಿದಂತೆ) ನಿಲ್ದಾಣದಲ್ಲಿ ನಿರ್ವಹಿಸಲಾಗುತ್ತಿದ್ದು, ದಿನಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದೆ.
ದಾವಣಗೆರೆಯ ದುಗ್ಗಮ್ಮನ ಹೆಸರಲ್ಲಿ ನಕಲಿ ಬಿಲ್ ದಂಧೆಕೋರರ ಕಾಟ
ಸುಮಾರು 10.85 ಕೋಟಿ ರುಪಾಯಿಗಳ ವೆಚ್ಚದಲ್ಲಿ ದಾವಣಗೆರೆಯ ಮುಖ್ಯ ನಿಲ್ದಾಣದ ಕಟ್ಟಡದ ಪುನರ್ ನಿರ್ಮಾಣವು ಪ್ರಗತಿಯಲ್ಲಿದೆ. ಈ ವರ್ಷದ ಜುಲೈ ತಿಂಗಳ ವೇಳೆಗೆ ಆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿಲ್ದಾಣದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆಯೊಂದಿಗೆ ಎಸ್ಕಲೇಟರ್ ಅಳವಡಿಸುವ ಕೆಲಸವೂ ಸಹ ನಡೆಯುತ್ತಿದೆ.
ಭವಿಷ್ಯದ ಪ್ರಯಾಣಿಕ ದಟ್ಟಣೆಯ ಅಸಾಧಾರಣ ಬೆಳವಣಿಗೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ವಲಯವು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ನೇರ ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸುವ ಕೆಲಸದ ಉಳಿದ ಭಾಗವನ್ನು ಮಾರ್ಚ್ 2021 ರೊಳಗೆ ಸಂಪೂರ್ಣಗೊಳಿಸಲು ನಿಯೋಜಿಸಿದೆ.
ಇದರ ಪರಿಣಾಮವಾಗಿ ಮೈಸೂರು ವಿಭಾಗವು ದಾವಣಗೆರೆ ನಿಲ್ದಾಣದಲ್ಲಿ ರೈಲು ಬಳಕೆದಾರರು ದೂರದ ತುದಿಯಿಂದ ನಿಲ್ದಾಣವನ್ನು ತಲುಪುವುದನ್ನು ತಪ್ಪಿಸಲು ಹಾಗೂ ಅವರ ಅನುಕೂಲಕ್ಕಾಗಿ ನಿಲ್ದಾಣದ ಈಶಾನ್ಯ ಭಾಗವನ್ನು ವಿಸ್ತರಿಸುವ ಕೆಲಸವನ್ನು ಸಮಯ ವ್ಯರ್ಥಮಾಡದೆ ಪೂರ್ಣಗೊಳಿಸಿದೆ.
ಒದಗಿಸಿರುವ ಹೆಚ್ಚುವರಿ ಸೌಲಭ್ಯಗಳು ಮುಖ್ಯ ಪ್ರವೇಶದ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ನಿಲ್ದಾಣದ ಪರಿಚಲನಾ ಪ್ರದೇಶದಲ್ಲಿ ರಸ್ತೆ ವಾಹನಗಳ ತೊಂದರೆಯಿಲ್ಲದ ಸಂಚಾರಕ್ಕೆ ಅನುವು ಮಾಡಿಕೊಡಲು ಸಹಕಾರಿಯಾಗುತ್ತವೆ.
ನಿಲ್ದಾಣದ ಎರಡನೇ ಪ್ರವೇಶದಲ್ಲಿ ರಚಿಸಲಾದ ಹೊಸ ಸೌಲಭ್ಯಗಳು ಈ ಕೆಳಗಿನಂತಿವೆ:
1. ಸರದಿಯಲ್ಲಿರುವ ಜನರ ಕ್ರಮಬದ್ಧ ಚಲನೆಗಾಗಿ "ಕ್ಯೂ' ಪಟ್ಟಿಯೊಂದಿಗಿನ ಟಿಕೆಟ್ ಕಿಟಕಿಗಳು.
2. ಸಾಕಷ್ಟು ಆಸನಗಳ ವ್ಯವಸ್ಥೆಯೊಂದಿಗಿನ ವಿಸ್ತರಿಸಿದ ಬುಕಿಂಗ್ ಕಚೇರಿ ಹೊರಾಂಗಣ.
3. ಭೂ ದೃಶ್ಯಗಳನ್ನೊಳಗೊಂಡ 300 ಚದರ ಮೀ. ಪರಿಚಲನಾ ಪ್ರದೇಶ.
4. ಬುಕಿಂಗ್ ಕಚೇರಿ ಹೊರಾಂಗಣದಲ್ಲಿ ತಂಪಾದ ನೀರಿನ ಯಂತ್ರ.
5. ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯಗಳು.
6. ದಿವ್ಯಾಂಗ (ಅಂಗವಿಕಲ) ಪ್ರಯಾಣಿಕರಿಗೆ ತಡೆ ರಹಿತ ಇಳಿಜಾರು.
7. ರಸ್ತೆ ವಾಹನಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು.
8. ಸುಮಾರು 1200 ಚದರ ಮೀಟರ್ ವ್ಯಾಪ್ತಿಯಲ್ಲಿ 2/4 ಚಕ್ರಗಳ ವಾಹನಗಳು, ಟ್ಯಾಕ್ಸಿ ಮತ್ತು ಆಟೋಗಳಿಗೆ ನಿಲುಗಡೆ ಸ್ಥಳ.
9. ಪರಿಚಲನಾ ಪ್ರದೇಶದಲ್ಲಿ ಹಣ ಪಾವತಿಸಿ ಬಳಸುವ ಶೌಚಾಲಯ. (ನಿರ್ಮಾಣ ಹಂತದಲ್ಲಿದೆ)
10. ನಿಲ್ದಾಣಕ್ಕೆ ತಲುಪಿಸುವ ರಸ್ತೆಯ ಹೊಸ್ತಿಲಿನಿಂದ 160 ಮೀಟರ್ ಉದ್ದದ ಪಾದಚಾರಿ ಮಾರ್ಗ
11. ನಿಲ್ದಾಣದ ಸುತ್ತಲಿನ ಸೌಂದರ್ಯವನ್ನು ಹೆಚ್ಚಿಸಲು ಹಸಿರು ಪಟ್ಟಿಯೊಂದಿಗಿನ ಉದ್ಯಾನವನ.
ದಾವಣಗೆರೆಯ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರ್, ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪರವರು ಮತ್ತು ದಾವಣಗೆರೆ ಜಿಲ್ಲೆಯ ಇತರ ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ದಾವಣಗೆರೆ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ.