ಜೇನುಗೂಡಿಗೆ ಕೈ ಹಾಕಿ ನೊಂದವರಿಗೆ ಜೇನುತುಪ್ಪ ನೀಡಿದ್ದೇನೆ: ಬಸವರಾಜ ಬೊಮ್ಮಾಯಿ ಹೀಗೆ ಹೇಳಿದ್ದೇಕೆ?, ಇಲ್ಲಿದೆ ವಿವರ
ದಾವಣಗೆರೆ, ಮಾರ್ಚ್, 17: ಮೀಸಲಾತಿ ಹೆಚ್ಚಳ ವಿಚಾರ ಚರ್ಚೆಗೆ ಬಂದಾಗ ಜೇನುಗೂಡಿಗೆ ಕೈ ಹಾಕುತ್ತಿದ್ದೀರಾ ಹುಷಾರಾಗಿರಿ ಎಂಬ ಸಲಹೆ ಬಂತು. ಆಗ ನಾನು ಜೇನಿನ ಗೂಡಿಗೆ ಕೈ ಹಾಕಿದ್ದೇನೆ. ಜೇನುನೊಣ ಕಚ್ಚಿದರೂ ಕಚ್ಚಿಸಿಕೊಳ್ಳುತ್ತಿದ್ದೆ. ನೊಂದವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಮೂಲಕ ಜೇನುತುಪ್ಪ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ಹೇಳಿದರು.
ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭಾಷಣ ಮಾಡಿದವರು ಮುಂದೆ ಹೋದರು. ಮಾಡದವರು ಹಿಂದೆ ಇದ್ದೇವೆ. ಕೇವಲ ಭಾಷಣದಿಂದ ಎಲ್ಲವೂ ಆಗುವುದಿಲ್ಲ. ಈಗ ಬದಲಾವಣೆ ಆಗುತ್ತಿದ್ದು, ಈ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಆದ್ದರಿಂದ ನಾವು ಮಾಡಿರುವ ಕೆಲಸದ ಆಧಾರದ ಮೇಲೆ ಮತ ಕೊಡಿ ಎಂದು ಮನವಿ ಮಾಡಿದರು.

ಮೋದಿ ಮಹಾನ್ ನಾಯಕ ಆಗಿದ್ದಾರೆ
ಮೂರು ವರ್ಷಗಳ ಹಿಂದೆ ಕೆಂಪುಕೋಟೆಯಲ್ಲಿ ನಿಂತು ನರೇಂದ್ರ ಮೋದಿ ಅವರು ದೇಶದ ಪ್ರತಿ ಮನೆಯವರಿಗೂ ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ರಾಜ್ಯಗಳನ್ನೂ ವಿಶ್ವಾಸಕ್ಕೆ ಪಡೆದು ಶ್ರಮಿಸುತ್ತಿದ್ದಾರೆ. 130 ಕೋಟಿ ಜನಸಂಖ್ಯೆ ಇರುವ ಮನೆ ಮನೆಗೆ ನೀರು ಕೊಡುವುದು ಅಷ್ಟು ಸುಲಭವಲ್ಲ. 12 ಕೋಟಿ ಮನೆಗಳಿಗೆ ನೀರನ್ನು ಒದಗಿಸಿರುವ ಮಹಾನ್ ನಾಯಕ ಮೋದಿ ಆಗಿದ್ದಾರೆ ಎಂದರು.
25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
ರಾಜ್ಯದಲ್ಲಿ 75 ವರ್ಷದಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗುತಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ ಮೂರೇ ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಸರಬರಾಜಾಗುತ್ತಿದೆ. 1 ಕೋಟಿ 10 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಕೊಡುತ್ತಿದ್ದೇವೆ. ಇದು ನಮ್ಮ ಬದ್ಧತೆಯಾಗಿದೆ. ಆದ್ದರಿಂದ ನಾವು ಮಾಡಿರುವ ಕಾರ್ಯಕ್ರಮಗಳ ಆಧಾರದಲ್ಲಿ ಮತ ನೀಡಬೇಕು ಎಂದರು.
ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ ಬೊಮ್ಮಾಯಿ ಅವರು, ಎರಡು ವರ್ಷ ಭಾರಿ ಪ್ರವಾಹ ಬಂದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಮನೆ ಕಳೆದುಕೊಂಡಿದ್ದ ಜನರಿಗೆ ಪರಿಹಾರ ನೀಡಿದರು. ಪೂರ್ತಿ ಬಿದ್ದ ಮನೆಗಳಿಗೆ 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಪರಿಹಾರ ನೀಡಿದರು. ಅರ್ಧಂಬರ್ಧ ಮನೆಗಳಿಗೆ 3 ಲಕ್ಷ ರೂಪಾಯಿ ಘೋಷಿಸಿದರು. ವಿದ್ಯಾನಿಧಿ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು ಜನರಿಗೆ ತಲುಪಿವೆ. ನಮ್ಮ ಕೆಲಸ ನೋಡಿ ಮತ ನೀಡಿ ಎಂದರು.

ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ರೇಣುಕಾಚಾರ್ಯರಿಗೆ ಆಶೀರ್ವದಿಸಿ
ಹಾಗೆಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ-ನ್ಯಾಮತಿ ಕ್ಷೇತ್ರದಿಂದ ಎಂ. ಪಿ. ರೇಣುಕಾಚಾರ್ಯ ಅವರನ್ನು 20 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ರೇಣುಕಾಚಾರ್ಯರಿಗೆ ಈ ಬಾರಿ ಆಶೀರ್ವದಿಸಿ ಎಂದು ಹೇಳುವ ಮೂಲಕ ಅವರಿಗೆ ಟಿಕೆಟ್ ನೀಡುವುದು ಎಂಬ ಸಂದೇಶವನ್ನು ರವಾನಿಸಿದರು.
ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ಇಲ್ಲಿನ ಜನಸ್ತೋಮ ನೋಡಿದಾಗ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ರೇಣುಕಾಚಾರ್ಯ ಗೆಲ್ಲುವುದು ಅಷ್ಟೇ ಸತ್ಯ ಎಂದರು.
20 ರಿಂದ 25 ಸಾವಿರ ಮತಗಳ ಅಂತರದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂಬುದಕ್ಕೆ ನೀವೇ ಸಾಕ್ಷಿ. ದೊಡ್ಡ ಪ್ರಮಾಣದಲ್ಲಿ ಸೇರಿದ್ದೀರಾ. 50 ಸಭೆಗಳನ್ನು ಮಾಡಿ ಬಂದಿದ್ದೇನೆ. ಒಂದೂವರೆ ಎರಡು ಗಂಟೆ ತಡವಾದರೂ ಇಷ್ಟು ಜನರು ಸೇರಿರುವುದು ರೇಣುಕಾಚಾರ್ಯರ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಹೊನ್ನಾಳಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ರಾತ್ರಿಯಲ್ಲಾ ಓಡಾಡಿ ನಿಮ್ಮ ಕಷ್ಟಕ್ಕೆ ಸ್ಪಂದಿಸಿ ಅಭಿಮಾನ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಾ.
ನೀವು ಮನೆ ಮನೆಗೆ ಹೋಗಿ ವಿಚಾರಿಸಿ. ನಮ್ಮ ಸರ್ಕಾರ, ಬೊಮ್ಮಾಯಿ ಸರ್ಕಾರ ಒಂದಲ್ಲಾ ಒಂದು ಸೌಲಭ್ಯ ಕೊಟ್ಟಿದೆ. ರೇಣುಕಾಚಾರ್ಯರನ್ನು 20 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.












Click it and Unblock the Notifications