ದಾವಣಗೆರೆ; ಬ್ಯಾಂಕ್ ಸಾಲ ಮನ್ನಾ ಆಗಲೆಂದು ಹೆಂಡತಿಯನ್ನೇ ಕೊಂದ ಗಂಡ
ದಾವಣಗೆರೆ, ಸೆಪ್ಟೆಂಬರ್ 22: ಹೆಂಡತಿ ಹೆಸರಲ್ಲಿ ತೆಗೆದುಕೊಂಡಿದ್ದ ಬ್ಯಾಂಕ್ ಸಾಲ ಮನ್ನಾ ಆಗಲೆಂದು ಹೆಂಡತಿಯನ್ನೇ ಸಾಯಿಸಿ, ಹಾವು ಕಚ್ಚಿದೆ ಎಂದು ನಾಟಕವಾಡಿದ್ದ ಗಂಡ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಅಶೋಕ್ ಆರು ವರ್ಷಗಳ ಹಿಂದೆ ಶಿವಮೊಗ್ಗ ತಾಲ್ಲೂಕು ರಾಮನಗರ ಗ್ರಾಮದ ರೋಜಾ ಎನ್ನುವರನ್ನು ಮದುವೆಯಾಗಿದ್ದ. ರೋಜಾ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಐದು ಲಕ್ಷ ಸಾಲವನ್ನೂ ತೆಗೆದುಕೊಂಡಿದ್ದ. ಆ ಸಾಲ ತೆಗೆದುಕೊಂಡು ಖರ್ಚು ಮಾಡಿದ್ದ ಅಶೋಕ್ ಗೆ ಸಾಲ ತೀರಿಸುವುದೇ ಚಿಂತೆಯಾಗಿತ್ತು. ಈ ನಡುವೆ ಆತನಿಗೆ ಹೆಂಡತಿಯನ್ನೇ ಕೊಲೆ ಮಾಡುವ ದುರಾಲೋಚನೆ ಹೊಳೆದಿದೆ.


ಲೋನ್ ಕ್ಲಿಯರ್ ಮಾಡಲು ಕೊಲೆ ಹುನ್ನಾರ
ರೋಜಾಳನ್ನು ಸಾಯಿಸಿದರೆ ಲೋನ್ ಸಂಪೂರ್ಣ ಕ್ಲಿಯರ್ ಆಗುತ್ತೆ, ಮುಂದೆ ಕಟ್ಟುವ ಅವಶ್ಯಕತೆ ಇರೋದಿಲ್ಲ ಎಂದು ಯೋಚಿಸಿ ಹೆಂಡತಿಯನ್ನೇ ಸಾಯಿಸುವ ಹುನ್ನಾರ ಮಾಡಿದ್ದಾನೆ. ಆಗಸ್ಟ್ 28ರಂದು ಹೊಲಕ್ಕೆ ಕರೆದುಕೊಂಡು ಹೋಗಿ ಆಕೆಗೆ ಹೊಡೆದು, ಕತ್ತು ಹಿಸುಕಿ ಉಸಿರುಗಟ್ಟಿಸಿದ್ದಾನೆ. ನಂತರ, ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ, ಪ್ರಜ್ಞೆ ತಪ್ಪಿದ್ದಾಳೆ ಎಂದು ಮನೆಯವರಿಗೆ ವಿಷಯ ಮುಟ್ಟಿಸಿದ್ದಾನೆ.

ಸಹಜ ಸಾವು ಎಂದು ದಾಖಲಿಸಿಕೊಂಡಿದ್ದ ಪೊಲೀಸರು
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಜಾಳನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಸೆ.3ರಂದು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ರೋಜಾ ಸಾವನ್ನಪ್ಪಿದ್ದಾರೆ. ಹೊನ್ನಾಳಿ ಪೊಲೀಸರು ಸಹಜ ಸಾವು ಎಂದು ಪ್ರಕರಣ ದಾಖಲಿಸಿ, ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಅಂತ್ಯ ಸಂಸ್ಕಾರವೂ ನಡೆಯಿತು.

ರೋಜಾ ತಂದೆಗೆ ಕಾಡಿದ ಅನುಮಾನ
ಆದರೆ ಅಂತ್ಯಸಂಸ್ಕಾರವಾದ ನಂತರ ರೋಜಾ ತಂದೆ ಹಾಲೇಶಪ್ಪ ಅವರಿಗೆ ಅನುಮಾನ ಕಾಡಲು ಶುರುವಾಗಿದೆ. ಹೀಗಾಗಿ ಸೆ.14 ರಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತನ್ನ ಮಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದಾರೆ.
Recommended Video

ತನಿಖೆಯಲ್ಲಿ ಸಿಕ್ಕಿಬಿದ್ದ ಅಶೋಕ್
ದೂರು ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ಸಿಪಿಐ ದೇವರಾಜ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ. ಅಶೋಕನನ್ನು ಇಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಲೋನ್ ಹಣವನ್ನು ಬಳಕೆ ಮಾಡಿಕೊಂಡು ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಿದ್ದು, ರೋಜಾಳನ್ನು ಸಾಯಿಸಿದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿದು ಕತ್ತು ಹಿಸುಕಿ ಸಾಯಿಸಿದ್ದಾನೆ ಎನ್ನುವುದು ತಿಳಿದುಬಂದಿದೆ. ಆತನಿಗೆ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಕೂಡ ಇದ್ದು, ಅದರ ಸಲುವಾಗಿ ರೋಜಾ ಜೊತೆ ಮನೆಯಲ್ಲಿ ಸಾಕಷ್ಟು ಬಾರಿ ಜಗಳವಾಗಿತ್ತು ಎಂದೂ ಬಾಯಿ ಬಿಟ್ಟಿದ್ದಾನೆ.












Click it and Unblock the Notifications