Badra Dam: ಭದ್ರಾ ಡ್ಯಾಂನಿಂದ ಕಳೆದ ಒಂದು ವಾರದಲ್ಲಿ ಎಷ್ಟು ಸಾವಿರ ಕ್ಯೂಸೆಕ್ ನೀರು ಪೊಲು?-ಕಾರಣ ಏನು?
ದಾವಣಗೆರೆ, ಜುಲೈ, 07: ಭದ್ರಾ ಡ್ಯಾಂನಿಂದ ಕಳೆದ ಒಂದು ವಾರದಿಂದ 5,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಹೋಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಹಾಗೂ ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ನೀರು ಸ್ಥಗಿತ ಕುರಿತಂತೆ ಶಾಶ್ವತ ಪರಿಹಾರದ ಭರವಸೆ ಸಿಗಬೇಕು. ಈಗ ನೀರು ಸೋರಿಕೆ ತಡೆ ಮಾಡಿರುವ ಕುರಿತಂತೆ ಅಧಿಕಾರಿಗಳ ಸಮರ್ಪಕ ಉತ್ತರ ಸಿಗದಿದ್ದರೆ ಅಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 8ಕ್ಕೆ ಬಿಜೆಪಿ ನಾಯಕರ ನಿಯೋಗವು ಭದ್ರಾ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಲಿದೆ. ಸ್ವಯಂಪ್ರೇರಿತರಾಗಿ ರೈತರು, ರೈತ ಮುಖಂಡರು ಬುತ್ತಿ, ರೊಟ್ಟಿ ಕಟ್ಟಿಕೊಂಡು ಬನ್ನಿ. ಭದ್ರಾ ಡ್ಯಾಂನಿಂದ 5,000 ಕ್ಯೂಸೆಕ್ ನೀರು ಹರಿದು ಹೋಗಿದ್ದು, ಇದರಿಂದ ಭದ್ರಾ ಅಚ್ಚುಕಟ್ಟುದಾರ ಪ್ರದೇಶದ ರೈತರು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಭದ್ರಾ ಡ್ಯಾಂ ನೀರಿನ ಪ್ರಮಾಣ ಕಡಿಮೆಯಾಗಿದೆ. ಇನ್ನೂ 7 ಅಡಿ ನೀರು ಬರಬೇಕು. ಜಲಾಶಯದ ನೀರಿನ ಮಟ್ಟ 131.10 ಅಡಿ ಮಾತ್ರ ಇದೆ. ಅಧಿಕಾರಿಗಳ ಯಡವಟ್ಟಿನಿಂದ ಮತ್ತೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಬಾರಿ ಮಳೆ ಕಡಿಮೆಯಾಗಿದೆ. ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಸಂಗ್ರಹವಾದರೆ ನೀರಿನ ಮಟ್ಟ ಏರಿಕೆಯಾಗುತಿತ್ತು. ಒಂದು ವಾರಗಳ ಕಾಲ ದಿನಕ್ಕೆ 5,000 ಕ್ಯೂಸೆಕ್ ನೀರು ಪೋಲಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಜಲಾಶಯ ಭರ್ತಿಯಾದ ಬಳಿಕ, ನದಿಗೆ ನೀರು ಬಿಡಲು ಕ್ರಸ್ಟ್ ಗೇಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಡ್ಯಾಂಗೆ ಸಂಬಂಧಿಸಿದ ರಿಪೇರಿ ಕೆಲಸ ಬೇಸಿಗೆ ಸಮಯದಲ್ಲಿ ಮಾಡದೇ ಮಳೆಗಾಲದಲ್ಲಿ ಕೈಗೆತ್ತಿಕೊಂಡಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ರೈತರ, ಜನರ ಬದುಕಿಗೆ ಸಂಬಂಧಿಸಿದ ಕಾರಣ ಚುನಾವಣಾ ನೀತಿ ಸಂಹಿತೆ ಪರಿಣಾಮ ಬೀರದು. ಚುನಾವಣೆ ಮುಗಿದು ಎಷ್ಟು ದಿನಗಳು ಆದವು. ಕೇವಲ ಹತ್ತು ದಿನಗಳಲ್ಲಿ ಮುಗಿಸುವ ಕೆಲಸಕ್ಕೆ ಇಷ್ಟೊಂದು ತಡವಾಗಿ ಕೈಗೆತ್ತಿಕೊಂಡಿರುವುದು ಯಾಕೆ? ಜಲಾಶಯಕ್ಕೆ ನೀರು ಹರಿದು ಬರುವ ಮೊದಲೇ ಯಾಕೆ ಕಾಮಗಾರಿ ಪೂರ್ಣಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.
ಡ್ಯಾಂನ ರಿವರ್ ಗೇಟ್ ಅನ್ನ ಎತ್ತಿಕೊಂಡು ಗೇಟಿನ ರಿಪೇರಿ ಕೈಗೊಳ್ಳಲಾಗಿದೆ. ಆದರೆ ರಿಪೇರಿ ಮುಗಿದ ಮೇಲೆ ಒಂದು ಡ್ಯಾಂ ರಿವರ್ ಗೇಟ್ ಇಳಿಯುತ್ತಿಲ್ಲ. ಇದರಿಂದ ಡ್ಯಾಂಗೆ ಬರುತ್ತಿರುವ ನೀರು ಸರಾಗವಾಗಿ ಹೊರಕ್ಕೆ ಹೋಗುತ್ತಿದೆ ಎಂಬ ಮಾಹಿತಿ ನಮಗೂ ಸಿಕ್ಕಿದೆ. ಬರೋಬ್ಬರಿ 4-5 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಅಲ್ಲದೆ, ಡ್ಯಾಂನಲ್ಲಿ ನೀರು ಸಂಗ್ರಹ ಹೆಚ್ಚುತ್ತಿಲ್ಲ. ನದಿಯಲ್ಲಿ ಸರಾಗವಾಗಿ ಹರಿಯುತ್ತಿರುವ ನೀರನ್ನು ಗಮನಿಸಿರುವ ರೈತರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ದೂರಿದರು.
ಭದ್ರಾ ಜಲಾಶಯ ದೊಡ್ಡದು. ನೀರು ಸಂಗ್ರಹವಾಗುವುದು ನಿಧಾನಗತಿಯಲ್ಲಿಯೇ. ಬೇಸಿಗೆಯಲ್ಲಿ ರೈತರಿಗೆ ವೇಳಾಪಟ್ಟಿ ನಿಗದಿ ಮಾಡಿ ನೀರು ಹೊರ ಬಿಡಲಾಗುತ್ತದೆ. ಮಳೆಗಾಲದಲ್ಲಿ ಜಲಾಶಯದಲ್ಲಿನ ಸಂಗ್ರಹವಾದ ನೀರು ಅಧಿಕಾರಿಗಳ ಯಡವಟ್ಟಿನಿಂದ ಹೋದರೆ ಯಾರು ಹೊಣೆ ಎಂಬುದು ರೈತ ಮುಖಂಡರ ಪ್ರಶ್ನೆಯಾಗಿದೆ.
ಈ ವೇಳೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ್ ಕೊಳೇನಹಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications