ದೇಶದಲ್ಲಿ ದಿನೇದಿನೇ ಕಾಂಗ್ರೆಸ್ ಅವಸಾನಕ್ಕೆ ಈ ನಾಲ್ಕು ಶಾಪಗಳು ಕಾರಣ
ದಾವಣಗೆರೆ, ಜ 11: ದೇಶದಲ್ಲಿ ದಿನೇದಿನೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅವಸಾನವಾಗುತ್ತಿರುವ ಹಿಂದೆ ನಾಲ್ಕು ಶಾಪಗಳೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡುತ್ತಿದ್ದ ಕಟೀಲ್, ಕಾಂಗ್ರೆಸ್ ಪಕ್ಷ ಮುಂದೊಂದು ದಿನ ಅರಬ್ಬಿ ಸಮುದ್ರದ ಪಾಲಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಹೊನ್ನಾಳಿ-ನ್ಯಾಮತಿಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಿ ಕಟೀಲ್ ಮಾತನಾಡುತ್ತಿದ್ದರು.
"ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ಜಿಲ್ಲಾ ಪಂಚಾಯತಿನಿಂದ ಅನುದಾನ ಪಡೆದು ಗ್ರಾಮ ಪಂಚಾಯಿತಿ ಕೆಲಸ ನಡೆಸಬೇಕಿತ್ತು. ಈ ವ್ಯವಸ್ಥೆ ಬದಲಾಗಲಿದೆ"ಎಂದು ಕಟೀಲ್ ಹೇಳಿದ್ದಾರೆ.
"ಇನ್ನು ಮುಂದೆ ಕೇಂದ್ರದಿಂದ ನೇರವಾಗಿ ಅನುದಾನ ಗ್ರಾಮ ಪಂಚಾಯಿತಿಗೆ ಬರುವ ವ್ಯವಸ್ಥೆ ಜಾರಿಯಾಗಲಿದೆ. ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ, ಏನೂ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಪಕ್ಷದ ಅವಸಾನ ಆರಂಭವಾಗಿದೆ, ಅದಕ್ಕೆ ನಾಲ್ಕು ಕಾರಣಗಳು"ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಆ ನಾಲ್ಕು ಶಾಪಗಳು..

ದೇಶದಲ್ಲಿ ಕಾಂಗ್ರೆಸ್ ಅವಸಾನಕ್ಕೆ ನಾಲ್ಕು ಶಾಪಗಳು - 1
"ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮಂಚೂಣಿಯಲ್ಲಿ ನಿಂತು ಹೋರಾಟದ ನೇತೃತ್ವ ವಹಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಿ ಎಂದು ಗಾಂಧೀಜಿ ಹೇಳಿದ್ದರೂ, ಕಾಂಗ್ರೆಸ್ ಅದೇ ಹೆಸರಿನಲ್ಲಿ ಅಧಿಕಾರ ನಡೆಸಿತು" ನಳಿನ್ ಕುಮಾರ್ ಕಟೀಲ್.

ದೇಶದಲ್ಲಿ ಕಾಂಗ್ರೆಸ್ ಅವಸಾನಕ್ಕೆ ನಾಲ್ಕು ಶಾಪಗಳು - 2
"ದೇಶದ ಸಂವಿಧಾನವನ್ನು ರಚಿಸಿದ ಡಾ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿತು. ಅವರು ಚುನಾವಣೆಯಲ್ಲಿ ನಿಂತಾಗ, ಸೋಲುವಂತಹ ರಾಜಕೀಯ ಷಡ್ಯಂತ್ರ ರೂಪಿಸಿತು. ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ನೀಡದೇ ಕಾಂಗ್ರೆಸ್ ಪಕ್ಷ ಅವಮಾನಿಸಿತು" ನಳಿನ್ ಕುಮಾರ್ ಕಟೀಲ್.

ದೇಶದಲ್ಲಿ ಕಾಂಗ್ರೆಸ್ ಅವಸಾನಕ್ಕೆ ನಾಲ್ಕು ಶಾಪಗಳು - 3
"ದಶಕಗಳ ಕಾಲ ಅಧಿಕಾರದಲ್ಲಿದ್ದರೂ, ಅಭಿವೃದ್ದಿಯ ಪರ ಯಾವ ಕೆಲಸವನ್ನೂ ಕಾಂಗ್ರೆಸ್ ಪಕ್ಷ ಮಾಡಲಿಲ್ಲ. ಹಲವು ದೇಶ ವಿರೋಧಿ ನೀತಿಗಳನ್ನು ಜಾರಿಗೆ ತಂದಿತು. ಅಂದು ಜಾರಿಗೆ ತಂದ ಅವಿವೇಕಿ ಕಾನೂನಿಗಳಿಂದಾಗಿ ದೇಶ ಈಗಲೂ ತೊಂದರೆ ಅನುಭವಿಸುವಂತಾಗಿದೆ" ನಳಿನ್ ಕುಮಾರ್ ಕಟೀಲ್.

ದೇಶದಲ್ಲಿ ಕಾಂಗ್ರೆಸ್ ಅವಸಾನಕ್ಕೆ ನಾಲ್ಕು ಶಾಪಗಳು - 4
ಅಂದು ಕಾಂಗ್ರೆಸ್ಸಿಗೆ ಆಕಳು ಮತ್ತು ಕರು ಪಕ್ಷದ ಚಿಹ್ನೆಯಾಗಿತ್ತು. ಆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಆನಂತರ ಗೋವಿರೋಧಿ ನೀತಿಗೆ ಮೊರೆಹೋಯಿತು. ಅಧಿಕಾರ ಮತ್ತು ಓಟಿಗಾಗಿ ಇಂದು ಗೋಹತ್ಯೆ ವಿರೋಧಿ ಕಾನೂನನ್ನು ವಿರೋಧಿಸಿದೆ. ಇದೆಲ್ಲವೂ ಕಾಂಗ್ರೆಸ್ಸಿಗೆ ಶಾಪವಾಗಿ ಪರಿಣಮಿಸಿದೆ" ನಳಿನ್ ಕುಮಾರ್ ಕಟೀಲ್.












Click it and Unblock the Notifications