ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು, ಆ ಸ್ಥಾನಕ್ಕೆ ನಾನು ಸಿದ್ಧ-ರೇಣುಕಾಚಾರ್ಯ
ದಾವಣಗೆರೆ, ಜೂನ್ 27: ಕರ್ನಾಟಕದಲ್ಲಿ ಬಿಜೆಪಿಗೆ ಸೋಲಾಗಿಲ್ಲ. ಕೆಲವು ವ್ಯಕ್ತಿಗಳ ನಿರ್ಧಾರದಿಂದ ಹೀನಾಯವಾಗಿ ಸೋಲು ಕಂಡೆವು. ಪಕ್ಷದೊಳಗಿನ ಒಳ ಹೊಡೆತದಿಂದ ಕಾಂಗ್ರೆಸ್ಗೆ ಲಾಭ ಆಯಿತು. ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು. ಎಲ್ಲಾ ಸಮಾಜದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕನನ್ನು ನೇಮಿಸಿ. ಅವಕಾಶ ಸಿಕ್ಕರೆ ನಾನು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪರ ಹಲವು ಬಾರಿ ಮಾತನಾಡಿದ್ದೇನೆ. ಸೈಕಲ್ ತುಳಿದು ಪಕ್ಷ ಕಟ್ಟಿದ್ದರು ಬಿಎಸ್ ವೈ. ಆದರೆ ಈಗ ಕೆಲವರು ಹೈಫೈ ಕಾರಿನಲ್ಲಿ ಓಡಾಡುತ್ತಾರೆ. ಇಂಥವರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಗುಡುಗಿದರು.

ಶಿಕಾರಿಪುರದಲ್ಲಿ ಯಡಿಯೂರಪ್ಪರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಆದರೂ ಹೆದರಲಿಲ್ಲ. ಪಕ್ಷ ಕಟ್ಟಿದ್ದರು. ಇಬ್ಬರು ಶಾಸಕರಾಗಿದ್ದಾಗ ಒಬ್ಬರು ರಾಜೀನಾಮೆ ಕೊಟ್ಟು ಹೋದರು. ಆಗಲೂ ಯಡಿಯೂರಪ್ಪ ಅವರೂ ಪಕ್ಷ ಕಟ್ಟಿ ಸೈ ಎನಿಸಿಕೊಂಡ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದಿತ್ತು. ನಾವು ಹಲವು ಬಾರಿ ಹೇಳಿದೆವು. ಆದರೂ ನಮ್ಮ ಮಾತು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪರ ಬಿಟ್ಟು ಬಿಜೆಪಿ ಕಟ್ಟುತ್ತೇವೆಂದು ಕೆಲವರು ಹೋದರು. ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಕರ್ನಾಟಕದಲ್ಲಿ ಯಡಿಯೂರಪ್ಪರ ಕಣ್ಣೀರಲ್ಲಿ ಬಿಜೆಪಿ ತೊಳೆದು ಹೋಗುತ್ತದೆ ಎಂದು. ಚುನಾವಣೆಯಲ್ಲಿ ಇದು ಸತ್ಯವಾಗಿದೆ. ನಮ್ಮ ಪಕ್ಷದವರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಪಕ್ಷ ಕಟ್ಟಿದ್ದರು. ಜಗದೀಶ್ ಶೆಟ್ಟರ್ ಕೈಕಾಲು ಗಟ್ಟಿ ಇರಲಿಲ್ವಾ. ಜಗದೀಶ್ ಶೆಟ್ಟರ್ಗೆ ಟಿಕೆಟ್ ಯಾಕೆ ಕೊಡಲಿಲ್ಲ. ಕೆ.ಎಸ್. ಈಶ್ವರಪ್ಪರಿಗೆ ಯಾಕೆ ಟಿಕೆಟ್ ಕೊಡಲಿಲ್ಲ. ಅವರಿಬ್ಬರೂ ಸಮರ್ಥರಿದ್ದರೂ ಕಡೆಗಣಿಸಿದರು. ಪತ್ನಿಗೆ ಟಿಕೆಟ್ ಕೊಡ್ತೇವೆ ಅಂದ್ರು. ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಟ್ಟಿದ್ದರೆ ಏನಾಗುತಿತ್ತು ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಜನವರಿ ತಿಂಗಳಿನಿಂದಲೇ ಕಾಂಗ್ರೆಸ್ ಐದು ಗ್ಯಾರಂಟಿ ಘೋಷಣೆ ಮಾಡಿ ಪ್ರಚಾರ ಮಾಡಿತು. ಸುಧಾಕರ್ ಕೈಗೆ ಪ್ರಣಾಳಿಕೆ ಕೊಟ್ಟರು. ಹಿರಿಯ ನಾಯಕರು ಯಾರೂ ಇರಲಿಲ್ವಾ. ಅರ್ಧ ಲೀಟರ್ ಹಾಲು ಕೊಡುತ್ತೇವೆ ಎಂಬ ಭರವಸೆ ಕೊಟ್ಟರು. ಅಧಿಕಾರದಲ್ಲಿದ್ದಾಗ ಮೂರು ಸಿಲಿಂಡರ್ ಕೊಡಲಿಲ್ಲ, 10 ಕೆಜಿ ಅಕ್ಕಿ ಕೊಡಲಿಲ್ಲ. ಅರ್ಧ ಲೀಟರ್ ಹಾಲು ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ವೀರಶೈವ ಲಿಂಗಾಯತ, ಹಾಲುಮತ ಸಮಾಜ, ಒಕ್ಕಲಿಗ ಸಮಾಜವೇ ರಾಜ್ಯದಲ್ಲಿ ಪ್ರಾಬಲ್ಯ. ಈ ಮೂರು ಸಮಾಜ ಬಿಟ್ಟು ಯಾರು ಏನೂ ಮಾಡಲು ಆಗದು. ಎಸ್ಸಿ, ಎಸ್ಟಿ, ಮುಸ್ಲಿಂ ಸಮುದಾಯದ ಮತಗಳೂ ಇವೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಅವರೆಲ್ಲರೂ ಒಟ್ಟುಗೂಡಿದರು. ಬಿಜೆಪಿಗೆ ಒಳ ಹೊಡೆತ ಕೊಟ್ಟಿತು. ಆರು ಸಚಿವ ಸ್ಥಾನ ಇದ್ದರೂ ಕೊಡಲಿಲ್ಲ. ಶಾಸಕರಿಗೆ ಅವಮಾನ ಮಾಡಿದರು ಎಂದು ಸ್ವಪಕ್ಷೀಯರ ವಿರುದ್ಧವೇ ಕೆಂಡಕಾರಿದರು.
ಶಾಸಕಾಂಗ ಸಭೆಯಲ್ಲಿ ರೇಣುಕಾಚಾರ್ಯ ನೋಡಿ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ನಾನು ಬೆಳೆಯೋದು ನಮ್ಮವರಿಗೆ ಇಷ್ಟವಿರಲಿಲ್ಲ. ರಾಜ್ಯ ಸುತ್ತುವುದು ಮುಖ್ಯವಲ್ಲ. ಸ್ಕೂಟರ್ನಲ್ಲಿ ದೇಶ ಸುತ್ತುತ್ತಾರೆ. ಮತಗಳಾಗಿ ಪರಿವರ್ತನೆಯಾಗಬೇಕು. ಪಟ್ಟಿ ಮಾಡಿದರೆ ನೂರಾರು ಲೋಪದೋಷಗಳಿವೆ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು. ವರ್ಚಸ್ವಿ ನಾಯಕನನ್ನು ನೇಮಕ ಮಾಡಬೇಕು. ಮಾಧ್ಯಮದ ಮುಂದೆ ಮಾತನಾಡಿದರೆ ಹೀರೋ ಆಗಲ್ಲ. ನಾವು ಬಹಿರಂಗವಾಗಿ ಮಾತನಾಡಬಾರದು. ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕು. ಈ ಅವಕಾಶ ನಮಗೆ ಸಿಗಲಿಲ್ಲ ಎಂದು ಹೇಳಿದರು.












Click it and Unblock the Notifications