ಲಾಕ್ಡೌನ್ ಎಫೆಕ್ಟ್: ರೈತರು, ತರಕಾರಿ ವ್ಯಾಪಾರಿಗಳ ಬದುಕು ಬೀದಿಗೆ..
ದಾವಣಗೆರೆ, ಮೇ 12: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾಗಿದ್ದು, ಇದೇ ವೇಳೆ ತರಕಾರಿ ಬೆಳೆದಿದ್ದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಬಂದರೂ ದರ ಸಿಗದೆ ಕಂಗಾಲಾಗಿದ್ದಾರೆ.
ಎಲ್ಲಾ ತರಕಾರಿ ಖರೀದಿಯಾಗುವುದಿಲ್ಲ ಎಂಬ ಕಾರಣಕ್ಕೆ ವರ್ತಕರು ಉತ್ತಮ ಧಾರಣೆ ನೀಡುತ್ತಿಲ್ಲ. ಇದರಿಂದ ರೈತರು ಬಂದಷ್ಟು ಹಣ ಪಡೆದು ವಾಪಸ್ ಹೋಗುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಾರೆ. ಬೆಳೆದ ಬೆಳೆಗೆ ಅಸಲು ಸಹ ಸಿಗುತ್ತಿಲ್ಲ. ಇದರಿಂದ ನಷ್ಟವಾದರೂ ಬಂದಷ್ಟು ಹಣ ತೆಗೆದುಕೊಳ್ಳುವಂತಾಗಿದೆ. ಇದರಿಂದ ನಮ್ಮ ಬದುಕು ಬೀದಿಗೆ ಬೀಳುವಂತಾಗಿದೆ ಎನ್ನುತ್ತಾರೆ ತರಕಾರಿ ಬೆಳೆದ ರೈತರು.

ಮನೆ ಮನೆಗೆ ತೆರಳಿ ತರಕಾರಿ ವ್ಯಾಪಾರ ಮಾರಾಟ ಮಾಡುವ ತಳ್ಳು ಗಾಡಿ ವ್ಯಾಪಾರಿಗಳ ಬದುಕು ಇದಕ್ಕಿಂತ ಕಠಿಣ ಆಗಿದೆ. ತರಕಾರಿ ಮಾರಾಟಕ್ಕೆ ಅನುಮತಿ ನೀಡಿದರೂ, ವ್ಯಾಪಾರ ಪೂರ್ತಿ ಡಲ್ ಆಗಿದೆ. ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬಂದು ತರಕಾರಿ ಖರೀದಿ ಮಾಡದಿರುವುದು ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಮನೆ ಬಾಗಿಲಿಗೆ ಹೋದರೂ ಅಲ್ಲೊಬ್ಬರು, ಇಲ್ಲೊಬ್ಬರು ಎನ್ನುವಂತೆ ಹೊರಬಂದು ತರಕಾರಿ ತೆಗೆದುಕೊಂಡು ಹೋಗುತ್ತಾರೆ. ಟೊಮೆಟೊ, ಬೆಂಡೆಕಾಯಿ, ಜವಳಿಕಾಯಿ, ಬೀನ್ಸ್, ಕ್ಯಾರೆಟ್, ಮೆಣಸಿನಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಲೆ ಕಡಿಮೆ ಆಗಿದೆ. ಎಂದಿನಂತೆ ದರ ಇದ್ದರೂ ವ್ಯಾಪಾರ ಆಗುತ್ತಿಲ್ಲ.

ದಾವಣಗೆರೆ ನಗರವೊಂದರಲ್ಲಿ ಸಾವಿರಾರು ತಳ್ಳು ಗಾಡಿಗಳ ಮೂಲಕ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಅನುಮತಿ ನೀಡಿದ್ದರೂ ವ್ಯಾಪಾರ ಆಗುವುದು ಡೌಟ್ ಅನ್ನೋದು ತಳ್ಳುಗಾಡಿ ತರಕಾರಿ ಮಾರಾಟ ಮಾಡುವವರ ಮಾತು.
ಮಾರುಕಟ್ಟೆಗೆ ಹೋಗಿ ನಾಲ್ಕೈದು ದಿನಗಳಿಗೆ ಆಗುವಷ್ಟ ತರಕಾರಿ ತರುತ್ತಾರೆ. ನಮ್ಮಲ್ಲಿ ಖರೀದಿಸಲು ಹಿಂದೇಟು ಹಾಕ್ತಾರೆ. ಜನತಾ ಲಾಕ್ಡೌನ್ ಆದಾಗಿನಿಂದ ಇಲ್ಲಿಯವರೆಗೆ ನಿತ್ಯವೂ ತರಕಾರಿ ಉಳಿದು ನಷ್ಟವಾಗಿದೆ. ಮನೆ ಪರಿಸ್ಥಿತಿ ಹೇಳತೀರದ್ದಾಗಿದೆ. ಒಂದೆಡೆ ನಷ್ಟ, ಮತ್ತೊಂದೆಡೆ ಮಾಡಿರುವ ಸಾಲ ತೀರಿಸಲು ಆಗದೇ ಸಾಕಾಗಿ ಹೋಗಿದ್ದೇವೆ ಎಂದು ತಳ್ಳುಗಾಡಿ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications