ದಾವಣಗೆರೆ ಮೇಯರ್ ಚುನಾವಣೆ: ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಶಿಫ್ಟ್
ದಾವಣಗೆರೆ, ಫೆಬ್ರವರಿ 17: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ರೆಸಾರ್ಟ್ ರಾಜಕೀಯದ ಟಚ್ ಪಡೆದುಕೊಂಡಿದೆ. ಇದೇ ತಿಂಗಳು 19 ರಂದು ನಡೆಯುತ್ತಿರುವ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಎರಡು ರಾಷ್ಟೀಯ ಪಕ್ಷಗಳು ಗದ್ದಿಗೆ ಹಿಡಿಯಲು ಜಿದ್ದಿಗೆ ಬಿದ್ದವರಂತೆ ಕಸರತ್ತು ನಡೆಸುತ್ತಿದ್ದಾರೆ.
ಈಗ ಕಾಂಗ್ರೆಸ್ ಆಪರೇಷನ್ ಮಾಡುವ ಭಯದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರನ್ನು ಮೇಯರ್ ಅಭ್ಯರ್ಥಿ ಅಜಯ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿಯ ರೆಸಾರ್ಟ್ ನಲ್ಲಿ ಇಟ್ಟಿದ್ದಾರೆ.
ಒಟ್ಟು 45 ಸದಸ್ಯ ಬಲ ಹೊಂದಿರುವ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 17 ಬಿಜೆಪಿ, 21 ಕಾಂಗ್ರೆಸ್, 1 ಜೆಡಿಎಸ್, 5 ಪಕ್ಷೇತರ ಸ್ಥಾನಗಳನ್ನು ಗೆದ್ದಿದ್ದರು. ಇದರಲ್ಲಿ 4 ಜನ ಪಕ್ಷೇತರರು ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಅಧಿಕಾರದ ಗದ್ದುಗೆ ಹಿಡಿಯಲು ಮ್ಯಾಜಿಕ್ ನಂಬರ್ 23 ಆಗಿದ್ದು, ಪಾಲಿಕೆ ಗದ್ದುಗೆಯನ್ನು ಕಾಂಗ್ರೆಸ್ ಪಕ್ಷ ಹಿಡಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಬಿಜೆಪಿ ರೆಸಾರ್ಟ್ ರಾಜಕಾರಣ ಮೂಲಕ ತಮ್ಮ ಸದಸ್ಯರನ್ನು ಭದ್ರವಾಗಿಟ್ಟು, ಎಂಎಲ್ಎ, ಎಂಎಲ್ಸಿಗಳನ್ನು ಸೇರಿಸಿಕೊಂಡು 31 ಮತಗಳ ಬಲಾಬಲದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿದೆ.
ಇನ್ನು ಫೆ.19 ಕ್ಕೆ ಮೇಯರ್ ಚುನಾವಣೆಯ ಮತದಾನ ಮಾಡುವ ಸಮಯಕ್ಕೆ ಮಡಿಕೇರಿ ರೆಸಾರ್ಟ್ ನಿಂದ ಕಾರ್ಪೋರೇಟರ್ ಗಳು ದಾವಣಗೆರೆಗೆ ಬಂದಿಳಿಯಲಿದ್ದಾರೆ.

ಮೇಯರ್ ಚುನಾವಣೆಗೆ ಮತ ಹಾಕಲು ಕಾಂಗ್ರೆಸ್ ಪಕ್ಷದಿಂದ ಶಾಸಕ ಶಾಮನೂರು ಶಿವಶಂಕರಪ್ಪ, ಎಂಎಲ್ಸಿಗಳಾದ ಅಬ್ದುಲ್ ಜಬ್ಬಾರ್, ಕೆಸಿ ಕೊಂಡಯ್ಯ, ಮೋಹನ್ ಕೊಂಡಜ್ಜಿ, ಯು.ಬಿ.ವೆಂಕಟೇಶ್, ರಘು ಆಚಾರ್, ಹೆಚ್.ಎಂ.ರೇವಣ್ಣ ಇದ್ದರೆ..
ಬಿಜೆಪಿಯಿಂದ ಮೇಯರ್ ಚುನಾವಣೆಗೆ ಮತ ಹಾಕಲು, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್, ಎಂಎಲ್ಸಿಗಳಾದ ಕೆ.ಪಿ.ನಂಜುಂಡಿ ವಿಶ್ವಕರ್ಮ, ಲೆಹೆನ್ ಸಿಂಗ್ ಸಿರಾಯ್, ವೈ.ಎ.ನಾರಾಯಣಸ್ವಾಮಿ, ಎನ್.ರವಿ ಕುಮಾರ್, ಡಾ.ತೇಜಸ್ವಿನಿಗೌಡ, ಎಸ್ ರುದ್ರೇಗೌಡ, ಡಿ.ಯು.ಮಲ್ಲಿಕಾರ್ಜುನ್, ಹನುಮಂತ ನಿರಾಣಿ ಇದ್ದಾರೆ.

ಒಟ್ಟು ಕಾಂಗ್ರೆಸ್ ನ ಬಲಾಬಲ, ಸದಸ್ಯರು-23, ಎಂಎಲ್ಸಿ, ಎಂಎಲ್ಎಗಳು-7, ಒಟ್ಟು= 30.
ಬಿಜೆಪಿಯ ಬಲಾ ಬಲ ಸದಸ್ಯರು(ಪಕ್ಷೇತರರನ್ನು ಸೇರಿ)-21, ಎಂಎಲ್ಎ, ಎಂಎಲ್ಸಿಗಳು-10, ಒಟ್ಟು=31.
ಹೀಗೆ ಬಲಾಬಲವನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ದಾವಣಗೆರೆ ಪಾಲಿಕೆ ಮೇಯರ್ ಗದ್ದುಗೆ ಹಿಡಿಯಲು ಕಸರತ್ತು ನಡೆಸುತ್ತಿವೆ.












Click it and Unblock the Notifications