ರೈತರ ಕಷ್ಟಕ್ಕೆ ಸಿಗದ ಕೇಂದ್ರ, ರಾಜ್ಯ ಸರ್ಕಾರದ ಪ್ಯಾಕೇಜ್: ರೈತ ಸಂಘ
ದಾವಣಗೆರೆ, ಜೂನ್ 3: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಘೋಷಿಸಿದ ಪ್ಯಾಕೇಜ್ ಗಳು ರೈತರ ಸಂಕಷ್ಟದ ಸಮಯದಲ್ಲಿ ದೊರೆತಿಲ್ಲ. ಶಾಸಕರುಗಳು ಗ್ರಾಮೀಣ ಭಾಗದಲ್ಲಿ ಆಹಾರ ಕಿಟ್ ನೀಡಿ ರೈತರಿಗೆ ಸ್ಪಂದಿಸಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 4 ಸಾವಿರ ಹೆಕ್ಟೇರ್ ನಲ್ಲಿ ಮುಂಗಾರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಪ್ರತಿ ಎಕರೆಗೆ 20 ರಿಂದ 25 ಚೀಲ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ ಕೇಂದ್ರ ಸರ್ಕಾರ ಮೆಕ್ಕೆಜೋಳ ಫುಡ್ ಗ್ರೀನ್ಸ್ ಬೆಳೆಯಲ್ಲ ಎಂದು ಹೇಳಿದ್ದು, ಇದರಿಂದಾಗಿ ರೈತರಿಗೆ ನಷ್ಟವಾಗಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು, ತುಂಗಭದ್ರಾ ನದಿ ಹಾಗೂ ಸೂಳೆಕೆರೆ ಇತರೆ ಹಳ್ಳಗಳ ಮೂಲಕ ಪಂಪ್ ಸೆಟ್ ಗಳಿಂದ ಸುಮಾರು 2.50 ಲಕ್ಷ ಹೆಕ್ಟೇರ್ ಭತ್ತ ಬೆಳೆಯಲಾಗುತ್ತಿದೆ. ಆದರೆ ಸಮರ್ಪಕವಾಗಿ ಪ್ರೋತ್ಸಾಹ ಧನ ರೈತರಿಗೆ ಸಿಗುತ್ತಿಲ್ಲ. ತರಕಾರಿ ಬೆಳೆಗಾರರಿಗೂ ಸಹ ನೆರವು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ನಲ್ಲಿ ಅಡಿಕೆ ಬೆಳೆಯಲಾಗಿದ್ದು, ಮಳೆಗೆ ಬೆಳೆಯೆಲ್ಲಾ ನಷ್ಟವಾಗಿದೆ. ಸರ್ಕಾರ ಎಕರೆಗೆ ಐದು ಸಾವಿರ ಕೊಡುವುದಾಗಿ ಹೇಳಿದ್ದು, ಇದುವರೆಗೂ ರೈತರ ಖಾತೆಗೆ ಈ ಹಣ ಸಂದಾಯವಾಗಿಲ್ಲ. ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಪ್ರಬಲರಾಗಿಲ್ಲದ ಕಾರಣ ಬಂದ ಅನುದಾನಗಳು ಅಕ್ಕಪಕ್ಕದ ಜಿಲ್ಲೆಗಳ ಪಾಲಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಯಾವ ಶಾಸಕರೂ ಪಡಿತರ ಕಿಟ್ ವಿತರಣೆ ಮಾಡಿಲ್ಲ ಎಂದರು.
ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕರ್ಫ್ಯೂ ವಿಧಿಸಿ ತರಾತುರಿಯಲ್ಲಿ ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಬೇಸಾಯ ಪದ್ದತಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ದೇಶದಲ್ಲಿ ತಂದು ಕೂರಿಸಿ ರೈತರು ಮತ್ತು ಕೂಲಿ ಕಾರ್ಮಿಕರನ್ನು ಜೀತದಾಳು ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೊಪಿಸಿದರು. ಸುದ್ದಿಗೋಷ್ಠಿಯಲ್ಲಿ ರೇವಣಸಿದ್ದಪ್ಪ, ಭೀಮಣ್ಣ, ಸಿ.ಟಿ ನಿಂಗಪ್ಪ, ಎಂ ಪರಶುರಾಮ್ ಇದ್ದರು.












Click it and Unblock the Notifications