ದಾವಣಗೆರೆ : 'ದುಗ್ಗಮ್ಮ ದೇಗುಲದ ಹತ್ತಿರ ಇಂದಿರಾ ಕ್ಯಾಂಟೀನ್ ಬೇಡ'
ದಾವಣಗೆರೆ, ಡಿಸೆಂಬರ್ 20: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದು, ಈಗ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುತ್ತಿರುವುದು ಒಳ್ಳೆಯ ಸುದ್ದಿ. ಆದರೆ, ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳ ಆಯ್ಕೆ ಬಗ್ಗೆ ಸ್ಥಳೀಯ ಬಿಜೆಪಿ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.
ನಗರ ದೇವತೆ ದುಗ್ಗಮ್ಮನ ದೇವಸ್ಥಾನದ ಹತ್ತಿರ 50x50 ಅಳತೆಯ ನಿವೇಶನವನ್ನು ಬಾಡಿಗೆ ರಹಿತವಾಗಿ ಇಂದಿರಾ ಕ್ಯಾಂಟೀನ್ ನೆಡೆಸಲು ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಈಚೆಗೆ ನಡೆದ ದೇವಸ್ಥಾನ ಸಮಿತಿ ಸಭೆಯ ಅಜೆಂಡಾದಲ್ಲಿ ಕಾಣಿಸಲಾಗಿದೆ.
ಸರ್ಕಾರದ ಉಚಿತ ಕ್ಯಾಂಟೀನ್ ನಡೆಸಲು ನಮ್ಮ ಅಭ್ಯಂತರವಿಲ್ಲ. ಆದರೆ, ದುಗ್ಗಮ್ಮ ದೇವಸ್ಥಾನ ಭಕ್ತರ ಆಸ್ತಿಯಾಗಿದ್ದು, ಇಲ್ಲಿ ಯಾವುದೇ ರಾಜಕೀಯ ವ್ಯಕ್ತಿಯ ಹೆಸರಿನಲ್ಲಿ ಕ್ಯಾಂಟೀನ್ ತೆರೆಯಲು ನಮ್ಮ ವಿರೋಧವಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದ್ದಾರೆ.

ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸಿ ದುಗ್ಗಮ್ಮ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಭಗತ್ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದವರ ಹೆಸರಿಡಲಿ ಎಂದು ಸಲಹೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಬಗ್ಗೆ ದೇವಸ್ಥಾನದ ಸಮಿತಿ ಅಧ್ಯಕ್ಷರೂ, ಶಾಸಕರಾದ ಡಾ. ಶಾಮನೂರು
ಶಿವಶಂಕರಪ್ಪನವರಿಗೆ ಅಷ್ಟೊಂದು ಪ್ರೀತಿಯಿದ್ದರೆ, ನಗರದ ಅಶೋಕ ರಸ್ತೆ ಗೇಟ್ ಬಳಿಯಿರುವ ಅವರ ಸ್ವಂತ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ, ಇದರಿಂದ ಸುತ್ತಮುತ್ತಲ ಬಡವರಿಗೆ
ಅನುಕೂಲವಾಗುತ್ತದೆ ಎಂದರು.
ದುಗ್ಗಮ್ಮ ದೇವಸ್ಥಾನದ ಆಧೀನದಲ್ಲಿ ನಡೆಯುವ ಹೊಂಡದ ಸರ್ಕಲ್ ಬಳಿಯಿರುವ ಸುಮಾರು 50 ಕ್ಕೂ ಹೆಚ್ಚು ಕೊಠಡಿಗಳಿರುವ ಶಾಲೆಯ ಸ್ಥಿತಿ ಏನಾಗಿದೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಕೇವಲ 50 ಮಕ್ಕಳು ಇಂತಹ ದೊಡ್ಡ ಶಾಲೆಯಲ್ಲಿ ಓದುತ್ತಿದ್ದಾರೆ. ತಮ್ಮ ಸಂಸ್ಥೆಯ ಶಾಲಾ-ಕಾಲೇಜುಗಳನ್ನು ಸಮರ್ಥವಾಗಿ ನೋಡಿಕೊಳ್ಳುವ ಶಾಮನೂರು ಕುಟುಂಬ, ದುಗ್ಗಮ್ಮ ಶಾಲೆಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಮುಜರಾಯಿ ಇಲಾಖೆಗೆ ದೇವಸ್ಥಾನವನ್ನು ಸೇರಿಸಲಿ ಮತ್ತು ಟ್ರಸ್ಟ್ ವಜಾ ಮಾಡಿ, ಹೊಸ
ಟ್ರಸ್ಟ್ ರಚನೆ ಮಾಡಲಿ ಎಂದು ಆಗ್ರಹಪಡಿಸಿದರು.












Click it and Unblock the Notifications