ದಾವಣಗೆರೆ: ಪುನೀತ್ ಆನಂದಗೂಡಿನಲ್ಲಿ ಅಪ್ಪು ಸ್ಮರಣೆ, ಅನ್ನಸಂತರ್ಪಣೆ
ದಾವಣಗೆರೆ, ಅಕ್ಟೋಬರ್, 29: ನಗರದ ಎಂಸಿಸಿಬಿ ಬ್ಲಾಕ್ ಈಜುಕೊಳದ ಬಳಿ ಇರುವ ಉದ್ಯಾನವನದಲ್ಲಿ "ಪುನೀತ್ ಆನಂದಗೂಡು'' ಹೆಸರಿನ ಪುನೀತ್ ರಾಜ್ಕುಮಾರ್ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಪುನೀತ್ ಅವರನ್ನು ಸ್ಮರಿಸಿಕೊಳ್ಳಲಾಯಿತು. ಇದೇ ವೇಳೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಆದರೂ ಕೂಡ ಅಭಿಮಾನಿಗಳ ಮನಸಿನಿಂದ ಅವರು ದೂರವಾಗಿಲ್ಲ. ಪ್ರತಿಯೊಬ್ಬರ ಹೃದಯದಲ್ಲಿಯೂ ಸಾಮ್ರಾಟರಾಗಿ ಶಾಶ್ವತವಾಗಿ ನೆಲೆಸಿದ್ದಾರೆ.
ವಿಜಯನಗರ; ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ರಾಜ್ಕುಮಾರ್ ಹೆಸರು
ಪುನೀತ್ ನೆನಪುಗಳನ್ನು ಶಾಶ್ವತಗೊಳಿಸಬೇಕು ಎನ್ನುವ ಉದ್ದೇಶದಿಂದ ಪುನೀತ್ ಆನಂದಗೂಡು ಹೆಸರಿಟ್ಟು ಪ್ರತಿಮೆ ಮಾಡಿಸಲಾಗಿತ್ತು. ಈ ಪ್ರತಿಮೆ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಲೇ ಇದೆ. ಪುನೀತ್ ರಾಜ್ಕುಮಾರ್ ಅವರ ನೆನಪು ಮಾಡಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿಮೆ ಅಲಂಕರಿಸಿ ಪೂಜಿಸುವ ಮೂಲಕ ನಮನ ಸಲ್ಲಿಸಲಾಯಿತು. ಈ ವೇಳೆ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಪವರ್ ಸ್ಟಾರ್, ಕರುನಾಡ ರತ್ನ ಪುನೀತ್ ರಾಜ್ಕುಮಾರ್ ರಾಜ್ಯ ಮಾತ್ರವಲ್ಲ ದೇಶ, ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಮಹಾನ್ ನಟ. ಸಾಮಾಜಿಕ ಸೇವೆಯ ಮೂಲಕ ಪ್ರತಿಯೊಬ್ಬರನ್ನೂ ತಲುಪಿದ ಸಾಧಕರಾಗಿದ್ದಾರೆ. ಗಂಧದಗುಡಿ ಮೂಲಕ ಕಾನನದ ಸೊಬಗು ತೋರಿಸುವ ಪುಣ್ಯದ ಕೆಲಸವನ್ನು ಮಾಡಿದ್ದಾರೆ. ಅಪ್ಪು ಅಂದರೆ ಆದರ್ಶ, ಸಾರ್ಥಕ ಬದುಕು, ಜನಪ್ರಿಯತೆ, ಸರಳ ವ್ಯಕ್ತಿತ್ವ ಎಂದು ಬಣ್ಣಿಸಿದರು.
ಅಪ್ಪು ಅಭಿಮಾನಿಗಳು ಹೇಳಿದ್ದೇನು?
ಪುನೀತ್ ರಾಜ್ಕುಮಾರ್ ದೈಹಿಕವಾಗಿ ನಮ್ಮ ಮಧ್ಯೆ ಇಲ್ಲದಿದ್ದರೂ ಸಿನಿಮಾ, ಗಾಯನ, ಆದರ್ಶ, ಸಾಮಾಜಿಕ ಸೇವೆ ಮೂಲಕ ಮನಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕೋಟ್ಯಂತರ ಜನರು ಈಗಲೂ ಅಪ್ಪು ಇಲ್ಲ ಎಂಬುದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅಷ್ಟರ ಮಟ್ಟಿಗೆ ಅವರು ನಮ್ಮೊಳಗೆ ನೆಲೆಸಿದ್ದಾರೆ. ಗಂಧದ ಗುಡಿ ಸಿನಿಮಾ ನೋಡಿದ ಪ್ರತಿಯೊಬ್ಬರೂ ಭಾವುಕರಾಗಿದ್ದೇ ಇದಕ್ಕೆ ಸಾಕ್ಷಿ. ಎಲ್ಲೇ ಹೋದರೂ ಅಪ್ಪು ಅಪ್ಪು ಎಂಬ ಘೋಷಣೆಗಳು ಕೇಳಿಬರುತ್ತಿದೆ.
ಅಪ್ಪು ಇಲ್ಲದ ಕರುನಾಡಿಗೆ ದೊಡ್ಡ ನಷ್ಟ
ಅಪ್ಪು ಎಂದಾಕ್ಷಣ ಮನಸ್ಸಿಗೆ ಬೇಸರ ಆಗುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ಎಲ್ಲರನ್ನು ಬಿಟ್ಟು ಹೋಗಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲ, ಕರುನಾಡಿಗೆ ದೊಡ್ಡ ನಷ್ಟ ಆಗಿದೆ. ಅಪ್ಪು ಅವರಿಗೆ ಅಭಿಮಾನಿಗಳು ದೇವರ ಸ್ಥಾನವನ್ನು ನೀಡಿದ್ದಾರೆ. ಈ ಮೂಲಕ ಆನಂದಗೂಡಿನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮುಖಂಡರಾದ ಕೆ. ಜಿ. ಶಿವಕುಮಾರ್, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ. ಶೆಟ್ಟಿ, ಮಲ್ಲಿಕಾರ್ಜುನ್, ಅಲೆಕ್ಸಾಂಡರ್, ಯುವರಾಜ್, ವಾರ್ಡ್ನ ಮುಖಂಡರು, ಸಾರ್ವಜನಿಕರು ಸೇರಿದಂತೆ ಮತ್ತಿತರರು ಹಾಜರಿದ್ದರು.
ಅಪ್ಪು.. ಅಪ್ಪು ಎಂದು ಮೊಳಗಿದ ಘೋಷವಾಕ್ಯ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ "ಗಂಧದ ಗುಡಿ'' ಚಿತ್ರಕ್ಕೆ ಬೆಣ್ಣೆನಗರಿಯಲ್ಲಿ ಅಭಿಮಾನಿಗಳಿಂದ ಭಾರಿ ಸ್ವಾಗತ ಸಿಕ್ಕಿತ್ತು. ನೆಚ್ಚಿನ ನಟನ ಕೊನೆಯ ಸಿನಿಮಾಕ್ಕೆ ಭಾವಪೂರ್ಣವಾಗಿ ಬರಮಾಡಿಕೊಂಡಿದ್ದರು. ಅಲ್ಲದೇ ಪರದೆ ಮೇಲೆ ಪರಮಾತ್ಮನನ್ನು ನೋಡಿ ಕಣ್ತುಂಬಿಕೊಂಡು ಭಾವುಕರಾದರು. ನಗರದ ವಸಂತ ಚಿತ್ರಮಂದಿರಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಟಿಕೆಟ್ಗಾಗಿ ಮುಗಿಬಿದ್ದರು. ಮೊದಲ ಶೋ ವೀಕ್ಷಿಸಲು ಜನರು ಸರದಿ ಸಾಲಿನಲ್ಲಿ ಕಿಕ್ಕಿರಿದು ನಿಂತಿದ್ದರು. ಚಿತ್ರಮಂದಿರದ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಬೃಹತ್ ಕಟೌಟ್ ಹಾಕಲಾಗಿತ್ತು. ನಗರದೆಲ್ಲೆಡೆ ಅಪ್ಪು ಫೋಟೋಗಳು, ಗಂಧದ ಗುಡಿ ಸಿನಿಮಾದ ಭಾವಚಿತ್ರಗಳು ರಾರಾಜಿಸುತ್ತಿವೆ.
ಅದ್ಭುತವಾಗಿ ಮೂಡಿಬಂದ ಅಪ್ಪು ದೃಶ್ಯಗಳು
ಅಪ್ಪು ಅಗಲಿ ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಅವರು ಅಭಿಮಾನಿಗಳ ಹೃದಯದಲ್ಲಿ ಶಾಶ್ಚತವಾಗಿ ನೆಲೆಸಿದ್ದಾರೆ. ಪವರ್ ಸ್ಟಾರ್ ಪರದೆ ಮೇಲೆ ಬರುತ್ತಿದ್ದಂತೆ ಅಪ್ಪು.. ಅಪ್ಪು.. ಮತ್ತೆ ಹುಟ್ಟಿಬನ್ನಿ. ಅಪ್ಪು ಅಮರ ಸೇರಿದಂತೆ ಹಲವು ಘೋಷಣೆಗಳು ಮೊಳಗಿದ್ದವು. ಕಾಡಿನ ಸಂಪೂರ್ಣ ವೈಭವ ನೋಡಿದ ಅಭಿಮಾನಿಗಳು ಪುಳಕಗೊಂಡರು. ಕೊನೆಯ ಸಿನಿಮಾದಲ್ಲಿ ಪರಿಸರ, ಪ್ರಾಣಿ, ಬುಡಕಟ್ಟು ಜನರ ಸಂಪ್ರದಾಯ, ನೃತ್ಯ, ಸಮುದ್ರ, ನೀರಿನಲ್ಲಿ ಅಪ್ಪು ಹೋಗುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಯಿತು. ಅಪ್ಪು ತೆರೆ ಮೇಲೆ ಬಂದಾಗಲಂತೂ ಅಭಿಮಾನಿಗಳ ಅಭಿಮಾನ ಎಲ್ಲೆ ಮೀರಿತ್ತು.
ಪುನೀತ್ ರಾಜ್ಕುಮಾರ್ ಪ್ರೇರಣೆಯಿಂದ ದೇಹದಾನಕ್ಕೆ ಮುಂದಾದ ಕಾಫಿನಾಡ ದಂಪತಿ