ಚಂದ್ರು ಸಾವು: ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಅ.9ರಂದು ಸಿಎಂ ಬೊಮ್ಮಾಯಿ ಭೇಟಿ
ದಾವಣಗೆರೆ ನವೆಂಬರ್8: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ರಮೇಶ್ ಅವರ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ನಾಳೆ (ನವೆಂಬರ್ 9)ರಂದು ಭೇಟಿ ನೀಡಲಿದ್ದಾರೆ.
ನವೆಂಬರ್ 8ರ ರಾತ್ರಿ ಹೊಸದುರ್ಗ ತಾಲೂಕು ಸಾಣೇಹಳ್ಳಿಯಿಂದ ಹೊರಟು ದಾವಣಗೆರೆಗೆ ಆಗಮಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ, ಜಿಎಂಐಟಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಹೊನ್ನಾಳಿ: ಹೆಚ್ಚುತ್ತಲೇ ಇದೆ ಚಂದ್ರಶೇಖರ್ ಸಾವಿನ ನಿಗೂಢತೆ, ಹಲವು ಶಂಕೆ ವ್ಯಕ್ತ
ನವೆಂಬರ್ 9ರಂದು ಬೆಳಗ್ಗೆ 9.45ಕ್ಕೆ ಜಿಎಂಐಟಿ ಹೆಲಿಪ್ಯಾಡ್ನಿಂದ ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆಗೆ ಪ್ರಯಾಣ ಬೆಳೆಸಲಿರುವ ಸಿಎಂ, ಬೆಳಗ್ಗೆ 10.10ಕ್ಕೆ ಹೊನ್ನಾಳಿ ಪಟ್ಟಣದ ಶಾಸಕ ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಬಳಿಕ 11 ಗಂಟೆಗೆ ಮತ್ತೆ ಎಚ್. ಕಡದಕಟ್ಟೆ ಹೆಲಿಪ್ಯಾಡ್ನಿಂದ ಬೆಳಗಾವಿ ಜಿಲ್ಲೆಯ ರಾಯಬಾಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸ್ವಾಮೀಜಿಗಳು
ರಮೇಶ್ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಇಂದು(ನವೆಂಬರ್8) ವಿವಿಧ ಮಠಗಳ ಮಠಾಧೀಶರು ಶಾಸಕ ರೇಣುಕಾಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗದ ಶ್ರೀಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಜಗದ್ಗುರು ಶ್ರೀ ವಚನನಾಂದ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಬಸವಮಾಚಿದೇವ ಸ್ವಾಮೀಜಿ, ಜಗದ್ಗುರು ಶ್ರೀ ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ, ಶ್ರೀ ಬಸವಪ್ರಸಾದ ಮಹಾಸ್ವಾಮೀಜಿ ರೇಣುಕಾರ್ಯ ನಿವಾಸಕ್ಕೆ ಭೇಟಿ ನೀಡಿದರು.
ಸಿಬಿಐ ಅಥವಾ ಎನ್ಐಎಗೆ ಪ್ರಕರಣ ಒಪ್ಪಿಸಿದರೆ ಸತ್ಯ ಹೊರಬರಲಿದೆ
ಹೊನ್ನಾಳಿ ಶಾಸಕ ಎಂ. ಪಿ. ಶಾಸಕ ರೇಣುಕಾಚಾರ್ಯ ಅವರ ಸಹೋದರ ಪುತ್ರ ಎಂ. ಪಿ. ರಮೇಶ್ ಅವರ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣವನ್ನು ಎನ್ಐಎ ಇಲ್ಲವೆ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಮ್ ಆದ್ಮಿ ಪಕ್ಷದ ಹೊನ್ನಾಳಿ ಘಟಕದ ಕಾರ್ಯಕರ್ಯರು ಒತ್ತಾಯಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ಗುರುಪಾದಯ್ಯ ಮಠದ್, ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ಪೊಲೀಸ್ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಶಾಸಕರು, ಸರ್ಕಾರದ ಅಂಗ. ಸಿಎಂ, ಗೃಹ ಸಚಿವರಿಗೆ ಆಗ್ರಹಿಸುವಷ್ಟು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾವಿನ ನಿಖರತೆ ಇದುವರೆಗೆ ಗೊತ್ತಾಗಿಲ್ಲ. ಸ್ಪಷ್ಟತೆಯೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ಅಥವಾ ಎನ್ಐಎಗೆ ಪ್ರಕರಣ ಒಪ್ಪಿಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದರು.
ಇದೊಂದು ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ
ಚಂದ್ರಶೇಖರ್ ಸಾವಿನ ವಿಷಯದಲ್ಲಿ ಹೊನ್ನಾಳಿ ಕ್ಷೇತ್ರದ ಎಲ್ಲಾ ಪಕ್ಷಗಳು, ಸಂಘಟನೆಗಳು ಮತ್ತು ಜನತೆ ಪಕ್ಷಾತೀತವಾಗಿ ಶಾಸಕರು, ಅವರ ಕುಟುಂಬದ ಜೊತೆಗೆ ನಿಂತಿದ್ದೇವೆ. ಚಂದ್ರಶೇಖರ್ ಪಕ್ಷ, ಜಾತಿ, ರಾಜಕೀಯ ಭಿನ್ನಾಭಿಪ್ರಾಯ ಎಲ್ಲವುಗಳನ್ನೂ ಮೀರಿ ಎಲ್ಲರ ಸ್ನೇಹ ಗಳಿಸಿದ್ದರು. ಶಾಸಕರ ಕುಟುಂಬ ಮತ್ತು ನಮ್ಮ ಕ್ಷೇತ್ರದ ಜನತೆಗೆ ನ್ಯಾಯ ಕೊಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಚಂದ್ರಶೇಖರ್ ಅವರ ಸಾವು ಅಪಘಾತವೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬ ಗೊಂದಲದಲ್ಲಿ ನಾವಿದ್ದೇವೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಶಾಸಕರು ಮತ್ತು ಅವರ ಕುಟುಂಬ ಬಲವಾಗಿ ಪ್ರತಿಪಾದಿಸುತ್ತಿದೆ. ಈ ವಿಷಯದಲ್ಲಿ ರಾಜ್ಯ ಪೊಲೀಸರು ಸರಿಯಾದ ತನಿಖೆಯನ್ನು ಕೈಗೊಂಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ ಎಂದು ಗುರುಪಾದಯ್ಯ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು, ಹರ್ಷ ಪ್ರಕರಣದಂತೆ ಚಂದ್ರು ಕೇಸ್ ಎನ್ಐಎಗೆ ನೀಡಿ
ಇನ್ನು ತನಿಖೆ ಪೂರ್ಣಗೊಳ್ಳುವ ಮೊದಲೇ ಇದೊಂದು ಅಪಘಾತ ಎಂಬಂತೆ ಬಿಂಬಿಸಿ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಶಾಸಕರು ಮತ್ತು ಅವರ ಕುಟುಂಬದ ಆಪಾದನೆಯಾಗಿದೆ. ಶಾಸಕರು ಪೊಲೀಸರ ತನಿಖಾ ವೈಫಲ್ಯದಿಂದ ರೋಸಿ ಹೋಗಿ ಪದೇ-ಪದೇ ಪೊಲೀಸರ ವಿರುದ್ಧ ಹರಿಹಾಯುತ್ತಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ರಾಜ್ಯದಲ್ಲಿ ಮತ್ತು ನಮ್ಮ ಕ್ಷೇತ್ರದಲ್ಲಿ ದಿನಕ್ಕೊಂದು ಊಹಾಪೋಹಗಳು ಸೃಷ್ಟಿಯಾಗುತ್ತಿವೆ.
ಈ ಹಿಂದೆ ನಡೆದಿರುವ ಪ್ರವೀಣ್ ನೆಟ್ಟಾರು ಮತ್ತು ಶಿವಮೊಗ್ಗದ ಹರ್ಷ ಕೊಲೆ ಪ್ರಕರಣಗಳನ್ನು ಎನ್ಐಎಗೆ ವಹಿಸಿರುವುದರಿಂದ ತನಿಖೆ ಸರಿಯಾದ ದಿಕ್ಕಿನಲ್ಲಿ ಶೀಘ್ರವಾಗಿ ನಡೆದು, ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಆ ಮೂಲಕ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಲಾಗಿದೆ. ಆದ್ದರಿಂದ ಈ ಪ್ರಕರಣವನ್ನು ಸಹ ಗಂಭೀರವಾಗಿ ಪರಿಗಣಿಸಿ ಶಾಸಕ ಎಂ.ಪಿ. ರೇಣುಕಾಚಾರ್ಯರು ಮತ್ತು ಅವರ ಕುಟುಂಬದ ಅಭಿಪ್ರಾಯ ಪಡೆದು ಶೀಘ್ರವಾಗಿ ಚಂದ್ರಶೇಖರ್ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.
ಚಂದ್ರಶೇಖರ್ ಸಾವು: ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡರಾ ರೇಣುಕಾಚಾರ್ಯ?