ಗರ್ಭಿಣಿ ಪತ್ನಿ ಕೊಂದು 30 ಕಿಮೀ ದೂರದಲ್ಲಿ ಹೂತಿದ್ದ ಪತಿ: ಸಿಸಿಟಿವಿಯಿಂದ ಕೃತ್ಯ ಬಯಲು
ದಾವಣಗೆರೆ, ನವೆಂಬರ್ 22: ಇನ್ನು ಮದುವೆಯಾಗಿ ಕೇವಲ ಏಳು ತಿಂಗಳು, ಬದುಕಿ ಬಾಳಬೇಕಿದ್ದ ಜೋಡಿ. ಜೊತೆಗೆ ಭೂಮಿಗೆ ಬರಬೇಕಿತ್ತು ಕಂದ. ಆಕೆಗೆ ಆರು ತಿಂಗಳು. ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಈ ಕುಟುಂಬದಲ್ಲಿ ಆಗಿದ್ದೇ ಬೇರೆ. ಪತ್ನಿಯ ಶೀಲ ಶಂಕಿಸಿ ಕೊಂದ ಪತಿ ಜೈಲು ಸೇರಿದ್ದರೆ, ಭೂಮಿಗೆ ಬಾರದೇ ತಾಯಿ ಜೊತೆಗೆ ಹೊಟ್ಟೆಯಲ್ಲಿ ಮಗು ಅಸುನೀಗಿದೆ.
ಅನುಮಾನಂ ಪೆದ್ದ ರೋಗಂ ಎಂಬಂತೆ ಹೆಂಡತಿ ನಡವಳಿಕೆ ಬಗ್ಗೆ ಅನುಮಾನ ಹೊಂದಿ ಕೊಂದು ಹಾಕಿದ್ದ ಆರೋಪಿ ರೂಪಿಸಿದ್ದ ಸಂಚು ಬೆಳಕಿಗೆ ಬಂದಿದೆ. ಪತ್ನಿ ಕೊಂದು ಮನೆಯಲ್ಲಿ ಒಂದು ಗಂಟೆ ಇಟ್ಟಿದ್ದ ಎಂಬುದು ತನಿಖೆ ವೇಳೆ ಬಟಾಬಯಲಾಗಿದೆ. ಕುಟುಂಬದ ನೆಮ್ಮದಿಯೇ ಸರ್ವನಾಶವಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗನಗೊಂಡನಹಳ್ಳಿಯಲ್ಲಿ ರಶ್ಮಿ ಅಲಿಯಾಸ್ ಚಂದ್ರಕಲಾ (20) ಹತ್ಯೆಯಾದ ನವವಿವಾಹಿತೆ. ಇನ್ನು ಮನು ಅಲಿಯಾಸ್ ಮನುಕುಮಾರ್ ಮಾಡಿದ ತಪ್ಪಿಗೆ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ. ಕಳೆದ ಏಳು ತಿಂಗಳ ಹಿಂದೆಯಷ್ಟೇ ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಎಂಬುವವರ ಪುತ್ರಿ ರಶ್ಮಿ ಖುಷಿ ಖುಷಿಯಾಗಿ ಬೆಳೆದಾಕೆ. ಕನಸು ಹೊತ್ತು ಮನು ಕೈಹಿಡಿದಿದ್ದಳು. ಮದುವೆಯಾದ 2 ತಿಂಗಳಲ್ಲಿಯೇ ಇಬ್ಬರಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೊಂದಾಣಿಕೆ ಇಲ್ಲವಾಗಿದೆ. ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಆದರೆ, ಇದು ಇಷ್ಟೊಂದು ವಿಕೋಪಕ್ಕೆ ಹೋಗುತ್ತೆ ಎಂದು ಯಾರೂ ಊಹಿಸಿರಲಿಲ್ಲ.

30 ಕಿಮೀ ದೂರದಲ್ಲಿ ಸಮಾದಿ
ಕಳೆದ ತಿಂಗಳು ಅಕ್ಟೋಬರ್ 10ರಂದು ರಶ್ಮಿಯನ್ನು ಮನೆಯಲ್ಲಿ ಕತ್ತು ಹಿಸುಕಿ ಮನು ಕೊಂದು ಹಾಕಿದ್ದ. ಬಳಿಕ ಮನೆಯಲ್ಲಿ ಒಂದು ಗಂಟೆ ಶವವಿಟ್ಟಿದ್ದಾನೆ. ಆ ಬಳಿಕ ದನದ ಕೊಟ್ಟಿಗೆ ಬಳಿ ಕಾರು ತಂದಿದ್ದಾನೆ. ಕಾರಿನ ಡಿಕ್ಕಿಯಲ್ಲಿ ಪತ್ನಿ ಶವ ಇಟ್ಟುಕೊಂಡು ಗಂಗನಗೊಂಡನಹಳ್ಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಅಜ್ಜಂಪುರದ ಕೆಂಚಾಪುರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದ.

ಮನೆಯವರನ್ನು ನೋಡಿಕೊಳ್ಳುತ್ತಿಲ್ಲ ಎಂದು ಹತ್ಯೆ
ಇನ್ನು ಪೊಲೀಸರ ವಿಚಾರಣೆ ವೇಳೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ. ಪತ್ನಿ ನನ್ನ ತಂದೆ ತಾಯಿ ಮಾತು ಕೇಳುತ್ತಿರಲಿಲ್ಲ, ಉತ್ತಮ ಒಡನಾಟ ಇರಲಿಲ್ಲ. ಯಾವಾಗಲೂ ಮೊಬೈಲ್ನಲ್ಲಿ ಬ್ಯುಸಿ ಆಗಿರುತ್ತಿದ್ದಳು. ಚಾಟ್ ಜಾಸ್ತಿ ಮಾಡುತ್ತಿದ್ದಳು. ಹಾಗಾಗಿ ಮೊಬೈಲ್ ಕೊಡುತ್ತಿರಲಿಲ್ಲ. ಅವರ ಮನೆಯವರೇ ಈ ವಿಷಯ ತಿಳಿಸಿದ್ದರು. ನನ್ನ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಕೊಂದು ಹಾಕಿದ್ದೇನೆ ಎಂದು ಆರೋಪಿ ಮನು ಒಪ್ಪಿಕೊಂಡಿದ್ದಾನೆ.
ತನ್ನ ಪತ್ನಿ ರಶ್ಮಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ. ಪತ್ನಿ ಹುಡುಕಿಕೊಡುವಂತೆ ಮನವಿ ಮಾಡಿದ್ದ. ಬೇರೆ ಯಾರಾದರ ಜೊತೆಗೆ ಹೋಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಮನೆಯಿದ್ದ ಬಳಿಯ ಎರಡು ರಸ್ತೆಗಳಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಆಗ ಮನು ಕಾರು ಮಾತ್ರ ಹೋಗಿದ ದೃಶ್ಯ ಸಿಕ್ಕಿದೆ. ಬೇರೆ ಯಾವುದೇ ವಾಹನಗಳು ಹೋಗಿರಲಿಲ್ಲ. ಪೊಲೀಸರು ಕೇಳಿದಾಗ ಪತ್ನಿ ಹುಡುಕಾಟ ನಡೆಸಲು ಹೋಗಿದ್ದೆ ಎಂಬ ಉತ್ತರ ನೀಡಿದ್ದ. ಬೇರೆ ಯಾವುದೇ ವಾಹನ ಆ ವೇಳೆ ಹೋಗಿರಲಿಲ್ಲ. ಆಗ ಈತನ ಮೇಲೆ ಅನುಮಾನ ಪೊಲೀಸರಿಗೆ ಮೂಡಿದೆ. ಪೊಲೀಸರ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರಹಾಕಿದ್ದಾನೆ.

ಮೊದಲೇ ಗುಂಡಿ ತೆಗೆದುಬಂದಿದ್ದ
ಇನ್ನು ರಶ್ಮಿ ಹತ್ಯೆ ಮಾಡುವ ಮುನ್ನ ಅಜ್ಜಂಪುರ ಸಮೀಪದ ಕೆಂಚಾಪುರ ಗ್ರಾಮದ ಕಾನನದಲ್ಲಿ ಆರೋಪಿ ಓಡಾಡಿದ್ದಾನೆ. ಸಾಯಿಸುವ ಮೊದಲೇ ಗುಂಡಿಯನ್ನು ತೆಗೆದೂ ಬಂದಿದ್ದಾನೆ. ಸುತ್ತಮುತ್ತ ಆದರೆ ಯಾರಿಗಾದರೂ ಅನುಮಾನ ಬರಬಹುದು ಎಂಬ ಕಾರಣಕ್ಕೆ ದೂರದ ಜಾಗ ಆಯ್ಕೆ ಮಾಡಿಕೊಂಡಿದ್ದಾನೆ. ಪೂರ್ವನಿರ್ಧಾರದಂತೆ ಪತ್ನಿ ಹತ್ಯೆ ಮಾಡಿದ ಬಳಿಕ ಕಾಡಿಗೆ ಹೋಗಿ ಮೃತದೇಹ ಹೂತು ಹಾಕಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಕೊಲೆ ವಿಚಾರವನ್ನು ತಂದೆಗೆ ತಿಳಿಸಿದ್ದ ಆರೋಪಿ
ಮನು ತನ್ನ ತಂದೆಗೆ ಪತ್ನಿ ಹತ್ಯೆ ಮಾಡಿದ ವಿಷಯ ತಿಳಿಸಿದ್ದಾನೆ. ಈ ವಿಚಾರ ಬೇರೆ ಯಾರಿಗೂ ಗೊತ್ತಿರಲಿಲ್ಲ. ತಂದೆಯ ಪಾತ್ರವಿದೆಯೋ ಇಲ್ಲವೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಫೊರೆನ್ಸಿಕ್ ತಜ್ಞರು ಸ್ಥಳಕ್ಕೆ ಬಂದು ಸಾಕ್ಷ್ಯಾಧ್ಯಾರ ಕಲೆ ಹಾಕಿದ್ದಾರೆ. ಉಳಿದಂತೆ ಬೇರೆ ಯಾರ ಪಾತ್ರವಿದೆಯೋ ಇಲ್ಲವೋ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ದಾವಣಗೆರೆ ಎಸ್ಪಿ ಸಿ. ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಇನ್ನು ರಶ್ಮಿ ಕಾಣೆಯಾದ ಬಳಿಕ ಆಕೆಯ ಪೋಷಕರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನು ಮತ್ತು ಕುಟುಂಬದವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಪುತ್ರಿ ನಾಪತ್ತೆಯಾಗಲು ಕುಟುಂಬದವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದರು. ಒಟ್ಟಿನಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದ ಹಂತಕ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ವಿಪರ್ಯಾಸ ಎಂದರೆ ಏನೂ ತಪ್ಪು ಮಾಡದ ಭ್ರೂಣ ಭೂಮಿಗೆ ಕಾಲಿಡುವ ಮುನ್ನವೇ ಮಾಸಿದ್ದು ದುರಂತವೇ ಸರಿ.












Click it and Unblock the Notifications