ಚಂದ್ರಶೇಖರ್ ಹತ್ಯೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಬಿ.ಎಸ್.ಯಡಿಯೂರಪ್ಪ
ದಾವಣಗೆರೆ ನವೆಂಬರ್4: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಅವರ ಸಾವು ಅನುಮಾನಾಸ್ಪದವಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಚಂದ್ರಶೇಖರ್ ಸಾವಿನ ಬಗ್ಗೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮಾತನಾಡಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹೋದರ ಎಂ. ಪಿ. ರಮೇಶ್ ಅವರ ಪುತ್ರ ಚಂದ್ರಶೇಖರ್ ಹತ್ಯೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಜನರೊಂದಿಗೆ ಬೆರೆಯುತ್ತಿದ್ದ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ವಿಡಿಯೋಗಳು ವೈರಲ್
ಹೊನ್ನಾಳಿ ಪಟ್ಟಣದಲ್ಲಿ ಶಾಸಕ ರೇಣುಕಾಚಾರ್ಯರ ನಿವಾಸಕ್ಕೆ ಆಗಮಿಸಿ ಚಂದ್ರಶೇಖರ್ ಪಾರ್ಥೀವ ಶರೀರದ ದರ್ಶನದ ಬಳಿಕ ಮಾತನಾಡಿದ ಬಿ. ಎಸ್. ಯಡಿಯೂರಪ್ಪ, ಇಂತಹ ಸಾವು ಚಂದ್ರಶೇಖರ್ಗೆ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾರೇ ತಪ್ಪಿತಸ್ಥರಾದರೂ ಕ್ರಮ ಕೈಗೊಳ್ಳಲಾಗುತ್ತದೆ
ಆರಂಭದಲ್ಲಿಯೇ ರೇಣುಕಾಚಾರ್ಯ ಅವರು ಚಂದ್ರು ಹತ್ಯೆ ಆಗಿರಬಹುದು ಎಂದಿದ್ದರು. ಆಗ ನಂಬಿರಲಿಲ್ಲ. ಚಂದ್ರು ಶವ ನೋಡಿದಾಗ ಇದೊಂದು ಕೊಲೆ ಎಂಬ ಅನುಮಾನ ಮತ್ತಷ್ಟು ಹೆಚ್ಚಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ಹಾಗಾಗಿ ತನಿಖೆ ಸರಿಯಾಗಿ ನಡೆಯುತ್ತದೆ. ಯಾರೇ ತಪ್ಪಿತಸ್ಥರಾದರೂ ಕ್ರಮ ಕೈಗೊಳ್ಳಲಾಗುತ್ತದೆ. ರೇಣುಕಾಚಾರ್ಯ ಅವರಿಗೆ ಧೈರ್ಯ ತುಂಬಿದ್ದೇನೆ. ದೇವರು ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣ, ರಮೇಶ್ ಕೊಟ್ಟ ದೂರಿನಲ್ಲೇನಿದೆ?
ಯಡಿಯೂರಪ್ಪ ಬರುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ರೇಣುಕಾಚಾರ್ಯ
ಚಂದ್ರಶೇಖರ್ ನಾಪತ್ತೆಯಾಗಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪ, ರೇಣುಕಾಚಾರ್ಯ ಅವರಿಗೆ ಕರೆ ಮಾಡಿ ಸಮಾಧಾನ ಪಡಿಸಿದ್ದರು. ಇನ್ನು ಇಂದು ಚಂದ್ರಶೇಖರ್ ಅಂತಿಮ ದರ್ಶನಕ್ಕೆ ಬಿ. ಎಸ್. ಯಡಿಯೂರಪ್ಪ ಆಗಮಿಸುತ್ತಿದ್ದಂತೆ ರೇಣುಕಾಚಾರ್ಯ ಕುಟುಂಬಸ್ಥರು ತಮ್ಮ ನೋವು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಬರುತ್ತಿದ್ದಂತೆ ನಮಸ್ಕರಿಸಿದ ರೇಣುಕಾಚಾರ್ಯ, ಸಹೋದರ ರಮೇಶ್, ಚಂದ್ರಶೇಖರ್ ತಾಯಿ, ಕುಟುಂಬ ಸದಸ್ಯರು ಕೈಮುಗಿದು ಕಣ್ಣೀರಾದರು. ಚಂದ್ರಶೇಖರ್ ಮೃತದೇಹ ನೋಡುತ್ತಿದ್ದಂತೆ ಯಡಿಯೂರಪ್ಪ ಅವರಿಗೆ ದುಃಖ ಉಮ್ಮಳಿಸಿ ಬಂದಿದೆ. ಈ ವೇಳೆ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತಂದೆ ಅವರಿಗೆ ಚಂದ್ರಶೇಖರ್ ಅಂದರೆ ತುಂಬಾ ಇಷ್ಟ
ಚಂದ್ರಶೇಖರ್ ಅಗಲಿಕೆಯಿಂದ ರೇಣುಕಾಚಾರ್ಯ ಕುಟುಂಬದಲ್ಲಿ ಶೋಕ ಆವರಿಸಿದೆ. ತಮ್ಮ ನೋವಿನ ಮಧ್ಯೆಯೂ ರೇಣುಕಾಚಾರ್ಯ ಅವರ ಪುತ್ರಿ ಚೇತನಾ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್ ಜೊತೆಗಿನ ನೆನಪು ಹಂಚಿಕೊಂಡಿದ್ದಾರೆ. ಕೆಲವು ತಿಂಗಳಿನಿಂದ ಚಂದ್ರಶೇಖರ್ ನಮ್ಮ ಜೊತೆ ಇದ್ದ. ಎಲ್ಲರೊಟ್ಟಿಗೆ ಚೆನ್ನಾಗಿ ಮಾತನಾಡುತ್ತಿದ್ದ. ಎಲ್ಲರೂ ಒಂದೇ ರೀತಿಯಲ್ಲಿ ಇದ್ದೆವು. ತಂದೆ ಅವರಿಗೆ ಚಂದ್ರಶೇಖರ್ ಅಂದರೆ ತುಂಬಾ ಇಷ್ಟ. ತಮ್ಮನ ಮಗನಂತೆ ಇರಲಿಲ್ಲ. ಸ್ವಂತ ಮಗನಂತೆಯೇ ಇದ್ದ. ಅಪ್ಪಾಜಿ ಅವರಂತೂ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಿದ್ದರು ಎಂದು ಹೇಳಿದರು.
ರೇಣುಕಾಚಾರ್ಯ ಮನೆಯಲ್ಲಿ ಚಂದ್ರಶೇಖರ್ ಅಂತಿಮ ದರ್ಶನ
ಚಂದ್ರಶೇಖರ್ ಅಂತಿಮ ದರ್ಶನಕ್ಕೆ ಹೊನ್ನಾಳಿ ಪಟ್ಟಣದ ರೇಣುಕಾಚಾರ್ಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಮುಖಂಡರು, ಹಾಗೂ ಆಪ್ತರು ಚಂದ್ರಶೇಖರ್ ಅಂತಿಮ ದರ್ಶನ ಪಡೆದಿದ್ದಾರೆ. ಇನ್ನು ಕುಂದೂರಿನಲ್ಲಿರುವ ರೇಣುಕಾಚಾರ್ಯರ ತೆಂಗಿನತೋಟದಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆ ನೆರವೇರಲಿದೆ. ರೇಣುಕಾಚಾರ್ಯರ ತಂದೆ, ತಾಯಿ ಹಾಗೂ ಚಂದ್ರಶೇಖರ್ ಅಜ್ಜ ಅಜ್ಜಿಯ ಸಮಾಧಿ ಮಧ್ಯೆದಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆ ನಡೆಯಲಿದ್ದು ಸಾರ್ವಜನಿಕರು ಸಹಕರಿಸುವಂತೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.