ವನ್ಯ ಜೀವಿ ಪತ್ತೆ ಪ್ರಕರಣದಲ್ಲಿ ಜಾಮೀನು ಪಡೆದಿದ್ಯಾಕೆ?: ಮಾಜಿ ಸಚಿವರ ವಿರುದ್ಧ ಬಿಜೆಪಿ ಕಿಡಿ
ದಾವಣಗೆರೆ, ಜನವರಿ 18: ಬಿಜೆಪಿಯವರ ತಲೆಯಲ್ಲಿ ಮೆದುಳಿಲ್ಲ ಎಂಬ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹಾಗೂ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ , ಕಲ್ಲೇಶ್ವರ ರೈಸ್ ಮಿಲ್ನಲ್ಲಿ ವನ್ಯಜೀವಿಗಳ ಪತ್ತೆ ಪ್ರಕರಣ ಸಂಬಂಧ ಎಸ್.ಎಸ್.ಮಲ್ಲಿಕಾರ್ಜುನ್, ತಪ್ಪು ಮಾಡದಿದ್ದರೆ ಜಾಮೀನು ಪಡೆದಿದ್ಯಾಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ತಕ್ಕ ಶಾಸ್ತಿಯನ್ನು ರಾಜ್ಯದ ಜನ ಮಾಡಲಿದ್ದಾರೆ: ಬಿಜೆಪಿ ವಾಗ್ದಾಳಿ
ಯಶವಂತರಾವ್ ಜಾಧವ್ ಮಾತನಾಡಿ, ಬಿಜೆಪಿಯವರು ಗುಟ್ಕಾ, ಕಳ್ಳಬಟ್ಟಿ, ಹೆಂಡ ಮಾರುತ್ತಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಅಕ್ರಮಗಳ ಪಿತಾಮಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಪ್ಪು ಮಾಡಿಲ್ಲ ಎಂದಾದರೆ ಜಾಮೀನು ಪಡೆದಿದ್ಯಾಕೆ..?
ಈ ಹಿಂದೆ ಸ್ಯಾಮ್ ಸನ್ ಡಿಸ್ಲರಿ ತೆಗೆದು ಸೆಕೆಂಡ್ಸ್ ಬ್ರಾಂಡಿ ತಯಾರು ಮಾಡಿ ಕೂಲಿ ಕಾರ್ಮಿಕ ಅದನ್ನು ಕುಡಿದು ಸಾವನ್ನಪ್ಪಿದ್ದನ್ನು ಶಾಮನೂರು ಶಿವಶಂಕರಪ್ಪರು ಮರೆತಿದ್ದಾರೆ. ಈ ದೇಶದ ಇತಿಹಾಸದಲ್ಲಿ ಕುರಿ ಮತ್ತು ಆಕಳು ಸಾಕಿದ ವ್ಯಕ್ತಿಯ ಮೇಲೆ ಕೇಸ್ ಹಾಕಲಾಗಿಲ್ಲ. ವನ್ಯಜೀವಿಗಳು ಸಿಕ್ಕ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿಲ್ಲ ಎಂದಾದರೆ ಜಾಮೀನು ಪಡೆದಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮಹಾಭಾರತದ ಕಾಲದಲ್ಲಿ ಧೃತರಾಷ್ಟ್ರ ತನ್ನ ಮಗನ ಮೇಲಿನ ಕುರುಡು ಪ್ರೇಮದಿಂದ ಕುರು ವಂಶ ನಾಶವಾಗಿದ್ದನ್ನು ಓದಿ ತಿಳಿದುಕೊಂಡಿದ್ದೇವೆ. ಶಾಮನೂರು ಶಿವಶಂಕರಪ್ಪರು ಕುರುಡು ಪ್ರೇಮ ಬಿಟ್ಟು ಮಗ ನಾಶ ಆಗುವುದನ್ನು ತಡೆಯಲಿ. ಶಿವಶಂಕರಪ್ಪ ಅವರು ಹಿರಿಯರು. ಅವರಿಗೆ ಗೌರವ ನೀಡುತ್ತೇವೆ. ಆದರೆ ಅವರು ಆಡುವ ಮಾತುಗಳಿಗೆ ಗೌರವ ಕೊಡುವುದಿಲ್ಲ. ಸತ್ಯ ಹೇಳಿ ಎಂದು ಹೇಳಿದರು.
ಅಕ್ರಮ ಮಾಡಿದ್ದರೆ ದಾಖಲಾತಿ ತೆಗೆಯಲಿ
ಮಲ್ಲಿಕಾರ್ಜುನ್, ಕಲ್ಲೇಶ್ವರ ರೈಸ್ ಮಿಲ್ನಲ್ಲಿ ಕೆಲಸ ಮಾಡುವ ಸಂಪಣ್ಣ ಮತ್ತು ಕರಿಬಸಯ್ಯರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ, ಬಂಧಿಸಲು ಅನುಮತಿ ಕೇಳಿದ್ದಾರೆ. ಹಾಗಾಗಿ, ಮಲ್ಲಿಕಾರ್ಜುನ್ ಜಾಮೀನು ಪಡೆದಿದ್ದಾರೆ. ಆಕಳು, ಕುರಿ ಸಾಕಿದವರ ವಿರುದ್ಧ ಕೇಸ್ ದಾಖಲಿಸಿದ್ದರೆ ಹೋರಾಟ ಮಾಡಬಹುದಿತ್ತಲ್ಲವೇ..? ಏಕೆ ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ನಾನು ದೂಡಾ ಹಾಗೂ ನಗರಸಭೆ ಅಧ್ಯಕ್ಷರಾಗಿದ್ದಾಗ ಅಕ್ರಮ ಮಾಡಿದ್ದ ಬಗ್ಗೆ ದಾಖಲಾತಿ ತೆಗೆಯಲಿ. ಮಲ್ಲಿಕಾರ್ಜುನ್ ಸಚಿವರಾಗಿದ್ದಾಗ ಮಾಡಿರುವ ಹಗರಣಗಳ ಕುರಿತು ಮಾಹಿತಿ ಹಕ್ಕು ಅಡಿ ನಾನು ಮಾಹಿತಿ ತೆಗೆದುಕೊಂಡು ಬರುತ್ತೇನೆ. ಅಕ್ರಮ, ಅವ್ಯವಹಾರ ತಪ್ಪು ಮಾಡಿದ್ದು ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಹಾಗೂ ನನ್ನ ಕುಟುಂಬ ಛಾಪಾ ಕಾಗದದಲ್ಲಿ ಆಸ್ತಿಯನ್ನು ವಾಪಸ್ ಬರೆದುಕೊಡುತ್ತೇವೆ. ಇಲ್ಲದಿದ್ದರೆ ನೀವು ಈ ಕೆಲಸ ಮಾಡುತ್ತೀರಾ. ನಾನು ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧನಿದ್ದೇನೆ. ನೀವು ಸಿದ್ಧರಿದ್ದೀರಾ ಎಂದು ಯಶವಂತರಾವ್ ಜಾಧವ್ ಸವಾಲು ಎಸೆದಿದ್ದಾರೆ.
ಕಾನೂನು ರೀತಿಯಲ್ಲಿ ಹೋರಾಟ ಮುಂದುವರಿಸಲಾಗುವುದು
ಸಿಂಧೆಲ್ ಎಂಬಾತ ಬೆಂಗಳೂರಿನಲ್ಲಿ ಜಿಂಕೆ ಕೊಂಬು ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಸಿಸಿಬಿ ಪೊಲೀಸರು ಆತನನ್ನು ಕಲ್ಲೇಶ್ವರ ರೈಸ್ ಮಿಲ್ ಗೆ ಕರೆದುಕೊಂಡು ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ವೈಯಕ್ತಿಕ ದ್ವೇಷದಿಂದ ಹೋರಾಟ ಮಾಡುತ್ತಿಲ್ಲ. ಬಿಜೆಪಿಯಿಂದ ನಡೆಯುತ್ತಿರುವ ಹೋರಾಟ. ಕಾನೂನು ರೀತಿಯಲ್ಲಿ ಹೋರಾಟ ಮುಂದುವರಿಸಲಾಗುವುದು. ಈ ಪ್ರಕರಣ ಇಲ್ಲಿಗೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಂಸದ ಜಿ. ಎಂ. ಸಿದ್ದೇಶ್ವರ್ ನಮ್ಮ ನಾಯಕರು. ಸ್ಪಷ್ಟವಾಗಿ ಅವರೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು ಎಂದು. ಹಾಗಾಗಿ ಎಲ್ಲರ ಹೋರಾಟ. ನಾನೊಬ್ಬನೇ ಮಾಡುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಕೇವಲ ಯಶವಂತರಾವ್ ಜಾಧವ್ ಮಾತ್ರ ಹೋರಾಟ ಮಾಡುತ್ತಿಲ್ಲ. ಇಡೀ ಪಕ್ಷವೇ ಹೋರಾಟದಲ್ಲಿ ಪಾಲ್ಗೊಂಡಿದೆ. ವನ್ಯಜೀವಿಗಳು ಪತ್ತೆಯಾಗಿದ್ದು, ಯಾಕೆ ಸಾಕಲಾಗುತ್ತಿತ್ತು..? ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ನಾವೆಲ್ಲರೂ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ, ಮುಂದುವರಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಕಿಡಿ
ಈ ವೇಳೆ ಉಪಸ್ಥಿತರಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಮೆದುಳು ಜಾಸ್ತಿ ಇರುವುದಕ್ಕೆ ಕೃಷ್ಮಮೃಗ, ಜಿಂಕೆ, ಮುಳ್ಳು ಹಂದಿ ಸೇರಿದಂತೆ ವನ್ಯಜೀವಿಗಳನ್ನು ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಇಟ್ಟಿದ್ದು. ದೊಡ್ಡ ದೊಡ್ಡ ಮಾತು ಆಡಿದರೆ ಸಾಲದು, ಸರಿಯಾದ ಭಾಷೆ ಬಳಸಬೇಕು. ಸರಿಯಾದ ದಾಖಲೆಗಳಿದ್ದರೆ ಲೋಕಾಯುಕ್ತ, ನ್ಯಾಯಾಲಯಕ್ಕೆ ನೀಡಲಿ. ನಾವು ರಾಜಕೀಯ ವಿರೋಧಿಗಳು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ವನ್ಯಜೀವಿಗಳ ಪ್ರಕರಣ ಬಿಜೆಪಿ ಬೆಳಕಿಗೆ ತಂದಿದ್ದಲ್ಲ. ಅದು ಸಿಂಧೆಲ್ ನಿಂದ ಹೊರ ಬಂದದ್ದು. ಅಮಾಯಕರಿಗೆ ಶಿಕ್ಷೆಯಾಗಬಾರದು. ತಪ್ಪಿತಸ್ಥರಿಗೆ ಆಗಬೇಕು ಎಂಬುದು ನಮ್ಮ ಹೋರಾಟ. ಕಲ್ಲೇಶ್ವರ ದೇವರ ಹೆಸರಿಟ್ಟುಕೊಂಡು ಪ್ರಾಣಿ ವಧೆ ಮಾಡಿದರೆ ಹೇಗೆ..? ತಪ್ಪು ಮಾಡಿಲ್ಲ ಎಂದಾದರೆ ಬೇಲ್ ಯಾಕೆ ಪಡೆದು ಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರು.