ವಿವಾದದ ನಡುವೆ ಕೊನೆಗೂ ಬಾಗಿಲು ತೆರೆದ ದಾವಣಗೆರೆ ಬೀರಲಿಂಗೇಶ್ವರ ದೇಗುಲ
ದಾವಣಗೆರೆ, ನವೆಂಬರ್ 7: ವಿವಾದದಿಂದಾಗಿ ಕಳೆದ ಆರು ತಿಂಗಳಿಂದಲೂ ಬೀಗ ಜಡಿಯಲಾಗಿದ್ದ ಇಲ್ಲಿನ ಪಿಬಿ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲನ್ನು ಶನಿವಾರ ತೆರೆಯಲಾಗಿದೆ. ಹಳೇ ಅರ್ಚಕ ಮತ್ತವರ ಸಂಬಂಧಿಕರನ್ನು ಬಂಧಿಸಿ, ದೇಗುಲದ ಬಾಗಿಲು ತೆರೆಸಿದ ಜಿಲ್ಲಾಡಳಿತ ಹೊಸ ಅರ್ಚಕರಿಂದ ಪೂಜೆ ಮಾಡಿಸಿದೆ.
ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನದ ಅರ್ಚಕನಾಗಿದ್ದ ಬಿ.ಜಿ.ಲಿಂಗೇಶ್ ವಿರುದ್ಧ ಕೆಲ ದೂರುಗಳು ಕೇಳಿ ಬಂದ ಕಾರಣ ಜಿಲ್ಲಾಧಿಕಾರಿಗಳು, ಅರ್ಚಕನನ್ನು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹಳೇ ಅರ್ಚಕ ಲಿಂಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರಣದಿಂದ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲಿಗೆ ಬೀಗ ಬಿದ್ದು, ಪೂಜೆ, ಪುನಸ್ಕಾರಗಳು ಸ್ಥಗಿತಗೊಂಡಿದ್ದವು.
ಶನಿವಾರ ಬೆಳಿಗ್ಗೆ ಕಂದಾಯ ನಿರೀಕ್ಷಕ ಮುಜರಾಯಿ ಇಲಾಖೆ ನೇಮಿಸಿರುವ ಹೊಸ ಅರ್ಚಕರೊಂದಿಗೆ ದೇವಸ್ಥಾನದ ಬೀಗ ತೆರೆಯಲು ಆಗಮಿಸಿದ್ದರು. ಆಗ ಅಲ್ಲಿಯೇ ವಾಸವಾಗಿರುವ ಹಳೇ ಅರ್ಚಕ ಲಿಂಗೇಶ್ ಮತ್ತವರ ಸಂಬಂಧಿಕರು, ಪ್ರಕರಣ ಇನ್ನೂ ಹೈಕೋರ್ಟ್ನಲ್ಲಿದೆ. ಹೀಗಾಗಿ ಬೀಗ ತೆರೆದು ಪೂಜೆ ನಡೆಸಲು ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನೂ ನಡೆಸಿದರು. ಇದರಿಂದ ಕೆಲ ಕಾಲ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಅಧಿಕಾರಿಗಳೊಂದಿಗೆ ಚರ್ಚಿಸಿ ದೇಗುಲದ ಬೀಗ ತೆರೆಸಲು ಮುಂದಾದರು. ಆಗಲೂ ಲಿಂಗೇಶ್ ಹಾಗೂ ಸಂಬಂಧಿಗಳು ತಡೆದಿದ್ದರು. ನವೆಂಬರ್ 9ಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಅಲ್ಲಿವರೆಗೂ ಬಾಗಿಲು ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ನಂತರ ಪೊಲೀಸರು ಲಿಂಗೇಶ್, ಅವರ ಸಹೋದರ ಶಿವಯೋಗಿ, ಲಿಂಗೇಶ್ ಪತ್ನಿ ಸುನೀತಾ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಿ, ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟರು.
ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಭಕ್ತರ ಸಮ್ಮುಖದಲ್ಲಿ ಪೂಜೆ ನಡೆಸಲಾಗಿದೆ.











Click it and Unblock the Notifications