ಭೋವಿ ನಿಗಮಕ್ಕೆ ಶೀಘ್ರವೇ ಹೊಸ ಅಧ್ಯಕ್ಷರ ನೇಮಕ: ಸಿಎಂ ಭರವಸೆ
ದಾವಣಗೆರೆ, ಆಗಸ್ಟ್, 01: ಸ್ವಾಮೀಜಿಗಳ ಮಾರ್ಗದರ್ಶನವನ್ನು ಆದೇಶದಂತೆ ಪಾಲಿಸುತ್ತೇನೆ. ಹಿಂದುಳಿದ ಸಮಾಜ ಅಭಿವೃದ್ಧಿ ಹೊಂದಿದರೆ ರಾಜ್ಯ ಅಭಿವೃದ್ಧಿ ಆದಂತೆ. ಇಂತಹ ಸಮಾಜ ಅಭಿವೃದ್ಧಿ ಕೆಲಸವನ್ನ ಗುರುಗಳು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ಹೇಳಿದರು.
ನಗರದ ಶಿವಯೋಗಾಶ್ರಮದಲ್ಲಿ ಬೋವಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ದೇವರ ರಥದ ವಜ್ರ ಮಹೋತ್ಸವಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಅಧಿಕಾರದ ಪೀಠ ಚಲನ ಶೀಲವಾಗಿರಬೇಕು. ಅಧಿಕಾರ ಇದ್ದಲ್ಲಿ ಶ್ರೀಮಂತಿಕೆ ಇರಲ್ಲ. ಭೋವಿ ಸಮಾಜದ ಕುಲಕಸುಬು ಕಲ್ಲು ಒಡೆಯುವುದು. ಅವರ ಕುಲ ಕಸುಬಿಗೆ ಕಾನೂನು ಅಡ್ಡಿಯಾಗಿದ್ದು, ಹಾಗೂ ಅಧಿಕಾರಿಗಳ ಕಿರುಕುಳವೂ ಹೆಚ್ಚಾಗಿದೆ ಎಂದರು.
ಮುಂಬರುವ ಅಧಿವೇಶನದಲ್ಲಿ ಇದಕ್ಕೆ ತಿದ್ದುಪಡಿ ತಂದು ತಮ್ಮ ಕೆಲಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಭೋವಿ ಸಮಾಜದ ಮೊದಲಿನ ರೀತಿ ಇಲ್ಲ. ಈಗ ಜನ ಸಾಕಷ್ಟು ಬುದ್ದಿವಂತರಾಗಿದ್ದಾರೆ. ನಾನು ನೋಡಿದ ಹಾಗೆ ಅವರು ಓದಿಕೊಂಡು ರ್ಯಾಂಕ್ ಬರ್ತಾ ಇದ್ದಾರೆ. ಭೋವಿ ಸಮಾಜದವರು ಕೂಡ ಐಎಎಸ್ ಅಧಿಕಾರಿಗಳು ಆಗಿದ್ದಾರೆ. ಹಿಂದುಳಿದವರ ಕಷ್ಟ ಅರಿಯುವವರು ರಾಜ್ಯದ ಕಾರ್ಯದರ್ಶಿ ಆಗಲಿ ಅಂತ ಮಂಜುನಾಥ್ ಪ್ರಸಾದ್ ಅವರನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು.
ಹಿಂದೆ ಒಂದು ಕಾಲವಿತ್ತು. ಅತಿ ಹೆಚ್ಚು ಜಮೀನು ಉಳ್ಳವರು ದೇಶವನ್ನ ಆಳುತ್ತಿದ್ದರು. ನಂತರ ಕಾಲದಲ್ಲಿ ಹಣ ಇದ್ದವರು ದೇಶವನ್ನ ಆಳುವಂತ ಪರಿಸ್ಥಿತಿ ಇತ್ತು. ಹೀಗಾಗಿ ಚಿಕ್ಕದೇಶದ ಬ್ರಿಟೀಷರು ನಮ್ಮನ್ನ ಆಳಿದರು. ಆದರೆ 21ನೇ ಶತಮಾನದ ಜ್ಞಾನ ಇದ್ದವರು ದೇಶವನ್ನ ಆಳುತ್ತಾರೆ. ಹಿಂದುಳಿದ ಸಮುದಾಯಗಳು ಚಲನಶೀಲವಾದಾಗ ರಾಜ್ಯ ಶ್ರೀಮಂತವಾಗಿರಲು ಸಾಧ್ಯ ಎಂದು ಪ್ರತಿಪಾದಿಸಿದರು.

ಸಮುದಾಯದ ಶ್ರಮದ ಬಗ್ಗೆ ಸಿಎಂ ಹೇಳಿದ್ದೇನು?
ತಳ ಸಮುದಾಯಕ್ಕೆ ವಿಶೇಷ ಕಾರ್ಯಕ್ರಮ ನೀಡಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ಸಮುದಾಯಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿದೆ. ಭೋವಿ ಜನಾಂಗದ ಕಸುಬಿಗೆ ವಿಶೇಷ ರಿಯಾಯಿತಿ ನೀಡಿ ಯಾರೂ ತೊಂದರೆ ನೀಡದ ವ್ಯವಸ್ಥೆ ಮಾಡಲಾಗುವುದು. ಕುಲಕಸುಬಿನಿಂದ ಭೋವಿ ಸಮಾಜ ದೇಶ ಕಟ್ಟುವ ಕೆಲಸ ಮಾಡಿದೆ. ಬಂಡೆ ಹೊಡೆಯದಿದ್ದರೆ ಮನೆ ಮಂದಿರ, ದೇವರ ಮೂರ್ತಿ, ರಸ್ತೆ, ಡ್ಯಾಂ ಕಟ್ಟಲು ಸಾಧ್ಯವಿಲ್ಲ ಎಂಬ ಅರಿವು ಇರಬೇಕು. ಯಾವುದೇ ಕಾನೂನು ಮಾಡುವಾಗ ಸಮುದಾಯಗಳಿಗೆ ತೊಂದರೆಯಾಗದ ರೀತಿ ಜಾರಿಗೊಳಿಸಬೇಕು. ಸಮಸ್ಯೆ ಅರಿತು ಕಾನೂನು ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಅನುದಾನ ದುರ್ಬಳಕೆ ಬಗ್ಗೆ ಸಿಎಂ ಅಸಮಾಧಾನ
ಸಮುದಾಯ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ, ಜ್ಞಾನ ಬೇಕು. ಇದನ್ನು ಮನಗಂಡು ಎಸ್ಸಿ, ಎಸ್ಟಿ ಸಮುದಾಯಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲಾಗಿದೆ. ಈಗಾಗಲೇ 107 ಕೊಟಿ ರೂಪಾಯಿ ಅನುದಾನವನ್ನು ಭೋವಿ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಅನುದಾನ ನೀಡುವಲ್ಲಿ ಕೆಲ ಅಧಿಕಾರಿಗಳು ವಂಚನೆ ಮಾಡಿದ್ದಾರೆ. ಶೀಘ್ರವಾಗಿ ಭೋವಿ ನಿಗಮದ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು ಎಂದರು.

ದೇಶದ ಶ್ರಮ ಜೀವಿಗಳ ಬದುಕಿನ ಬಗ್ಗೆ ವರ್ಣನೆ
ಇಂದಿನ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಯಾರು ಮಾತನಾಡಿದಂತೆ ನಡೆಯುತ್ತಾರೋ ಅವರನ್ನು ಜನ ಕೈಬಿಡುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ದೇವರು ಕೂಲಿಕಾರನ ಶ್ರಮ, ರೈತರ ಬೆವರಿನಲ್ಲಿದ್ದಾನೆ. ಯಾರು ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ನಿಮ್ಮ ಬೆಂಬಲ ಇರಲಿ. ಕಾಯಕ ಶ್ರಮದ ಸಮುದಾಯದಕ್ಕೆ ಸಕಲ ಬೆಂಬಲ ನೀಡಲಾಗುವುದು ಎಂದರು.

ಸಿದ್ದರಾಮೋತ್ಸವದ ಬಗ್ಗೆ ಸಿಎಂ ಹೇಳಿದ್ದೇನು?
ಮುಂದುವರೆದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಆಗಸ್ಟ್ 3ರಂದು ನಡೆಯುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವ ಕುರಿತಂತೆ ಪರೋಕ್ಷವಾಗಿ ಟಾಂಗ್ ನೀಡಿದರು. ಸಿದ್ದರಾಮೋತ್ಸವ ಯಾರದ್ದೋ ಮಾಡುವುದಲ್ಲ. ಬದಲಿಗೆ ಸಿದ್ದರಾಮೇಶ್ವರ ದೇವರಿಗೆ ಸಲ್ಲಿಸಲಿ ಎಂದು ಹೇಳುವ ಮೂಲಕ ಸಿದ್ಧರಾಮೋತ್ಸವಕ್ಕೆ ಟಾಂಗ್ ನೀಡಿದರು. ಶ್ರೀ ಸಿದ್ಧರಾಮೇಶ್ವರ ಶ್ರೀಗಳಿಗೆ ಜ್ಞಾನ ಹಾಗೂ ಶ್ರಮದ ಅರಿವಿತ್ತು. ಇವೆರಡರ ಸಂಗಮ ಇರುವವರು ಸಿದ್ಧರಾಮೇಶ್ವರರಾಗಿದ್ದಾರೆ. ಸಿದ್ಧರಾಮೇಶ್ವರರ ಸ್ಮರಣೆ ನಿರಂತರವಾಗಿರಲಿ. ಈ ಹಿಂದೆ ಬಂದ ಹಲವಾರು ಸರ್ಕಾರಗಳು ಗರೀಬಿ ಹಟಾವೋ ಎಂದು ಹೇಳಿದರು. ನಮ್ಮ ಸರ್ಕಾರ ಎಲ್ಲಾ ಸಮಾಜಗಳಿಗೆ ಸೌಲಭ್ಯ ನೀಡಿದೆ. ಅದರಲ್ಲೂ ಶ್ರಮವಹಿಸಿದ ಸಮಾಜಗಳಿಗೆ ಅನುದಾನ ನೀಡಿದ್ದೇವೆ ನಮಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ನಿರಂಜನಾನಂದ ಪುರಿ ಶ್ರೀ, ವಚನಾನಂದ ಶ್ರೀ, ಅಭಿನವ ಹಾಲಸ್ವಾಮಿಗಳು, ಬಸವಪ್ರಭು ಶ್ರೀ, ಶಾಂತವೀರ ಶ್ರೀ, ಪುರುಷೋತ್ತಮಾನಂದ ಪುರಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಸಾನಿಧ್ಯ ವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಸಚಿವರಾದ ಡಾ. ಸುಧಾಕರ್, ಶಿವರಾಜ್ ತಂಗಡಗಿ, ಭೈರತಿ ಬಸವರಾಜ್, ಶಾಸಕರಾದ ಎಸ್.ಎ. ರವೀಂದ್ರನಾಥ್, ರೇಣುಕಾಚಾರ್ಯ, ಎಸ್.ವಿ ರಾಮಚಂದ್ರ, ಗೂಳಿಹಟ್ಟಿ ಶೇಖರ್, ಸಾಲುಮರದ ತಿಮ್ಮಕ್ಕ, ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ್, ರವಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications