ಸಿದ್ದರಾಮೋತ್ಸವಕ್ಕೆ ಎಲ್ಲಾ ಪಕ್ಷದವರೂ ಬಂದಿದ್ದಾರೆ: ಭೈರತಿ ಬಸವರಾಜ್
ದಾವಣಗೆರೆ, ಆಗಸ್ಟ್, 09: "ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಎಲ್ಲಾ ಪಕ್ಷದ ಅಭಿಮಾನಿಗಳು ಬಂದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನವರೂ ಹೋಗಿದ್ದರು ಎಂಬ ಮಾಹಿತಿ ಇದೆ. ಸಿದ್ದರಾಮೋತ್ಸವದಿಂದ ನಮಗೆ ಆತಂಕ ಇಲ್ಲ. ಮಹೋತ್ಸವಕ್ಕೆ ಬಂದವರೆಲ್ಲಾ ಮತ ಹಾಕುತ್ತಾರೆ ಎಂದುಕೊಳ್ಳಬಾರದು" ಎಂದು ನಗರಾಭಿವೃದ್ಧಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಮಂಗಳವಾರ ದಾವಣಗೆರೆಯಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಬಂದಾಗಲೂ ಲಕ್ಷಾಂತರ ಜನರು ಸೇರುತ್ತಾರೆ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಹಾಗೆಯೇ ಜನರು ಸೇರಿದ್ದಾರೆ. ಇದು ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ" ಎಂದು ಅಭಿಪ್ರಾಯಪಟ್ಟರು.
"ಬಿಜೆಪಿ ಪಕ್ಷದಲ್ಲಿ ಕೋಟ್ಯಾಂತರ ಕಾರ್ಯಕರ್ತರು ಇದ್ದು, ಅವರು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದರೆ ಪಕ್ಷ ಮುಳುಗಲ್ಲ ಎಂಬ ಹೇಳಿಕೆಯನ್ನು ಸಂಸದ ಜಿ. ಎಂ. ಸಿದ್ದೇಶ್ವರ್ ಯಾವ ರೀತಿಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದರೆ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ" ಎಂದು ಸಚಿವರು ಸ್ಪಷ್ಟಪಡಿಸಿದರು.

"ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಗಾರಿಕೆಗಳ ಕುರಿತಂತೆ ಚರ್ಚೆ ನಡೆಸಲು ಬೆಂಗಳೂರಿಗೆ ಬಂದಿದ್ದರು. ಯಾವುದೇ ಎಚ್ಚರಿಕೆಯನ್ನು ಅವರು ನೀಡಿಲ್ಲ. ಪಕ್ಷದ ಮುಖಂಡರು, ನಾಯಕರನ್ನು ಕರೆದು ಮಾತನಾಡಿಲ್ಲ. ಸರ್ಕಾರಿ ಕಾರ್ಯಕ್ರಮಕ್ಕೆ ಬಂದು ವಾಪಸ್ ಹೋಗಿದ್ದಾರೆ. ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ" ಎಂದರು.
ಹದಡಿ ಕೆರೆ ಏರಿ ದುರಸ್ತಿಗೆ 1.70 ಕೋಟಿ ಮಂಜೂರು: "ದಾವಣಗೆರೆ- ಚನ್ನಗಿರಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಕ್ಕದ ಹದಡಿ ಕೆರೆಯ ಏರಿ ಒಂದು ಭಾಗದಲ್ಲಿ ಸತತ ಕುಸಿತಕ್ಕೊಳಗಾಗುತ್ತಿದೆ. ಇದರ ಶಾಶ್ವತ ದುರಸ್ತಿಗೆ ಸರ್ಕಾರ 1.70 ಕೋಟಿ ರೂಪಾಯಿ ಮಂಜೂರು ಮಾಡಿದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
"ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸಿ ಶೀಘ್ರದಲ್ಲಿ ಕಾಮಗಾರಿ ಮುಗಿಸಲಾಗುವುದು ಹಾಗೂ ಕಾಮಗಾರಿ ಮುಗಿಯುವವರೆಗೆ ಭಾರೀ ವಾಹನಗಳು ಈ ರಸ್ತೆಯಲ್ಲಿ ಸಂಚರಿಸದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಸೂಚಿಸಲಾಗಿದೆ" ಎಂದರು.

"ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆ ಪಕ್ಕ ತಡೆಗೋಡೆ ನಿರ್ಮಿಸುವಂತೆ ಕೇಳುತಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳು ಇಂಜಿನಿಯರ್ಗಳ ಜೊತೆ ಸಭೆ ನಡೆಸಿ ಪರಿಶೀಲಿಸಲಾಗುವುದು ಮತ್ತು ಮಳೆ ಹಾನಿ ತುರ್ತು ಕಾರ್ಯಗಳಿಗೆ ಸರ್ಕಾರ ಜಿಲ್ಲೆಗೆ 15 ಕೋಟಿ ರೂಪಾಯಿ ನೀಡಿದೆ" ಎಂದು ಸಚಿವರು ಹೇಳಿದರು.












Click it and Unblock the Notifications