ಸಿದ್ದರಾಮಯ್ಯ ಅಮೃತಮಹೋತ್ಸವದಿಂದ ಬೆಣ್ಣೆನಗರಿಗೆ ಬಂತು ಕಳೆ; ಹೊಟೇಲ್, ರೆಸ್ಟೋರೆಂಟ್ ಫುಲ್..!
ದಾವಣಗೆರೆ, ಆಗಸ್ಟ್ 2: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವಕ್ಕೆ ಬೆಣ್ಣೆನಗರಿ ಸಜ್ಜಾಗಿದ್ದು, ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು, ಮಾಜಿ ಸಚಿವರು, ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯ ಮಾರ್ಗಮಧ್ಯೆ ಬರುವ ಶಾಮನೂರು ಶಿವಶಂಕರಪ್ಪರ ಒಡೆತನದ ಸುಮಾರು 53 ಎಕರೆ ವಿಶಾಲ ಪ್ರದೇಶದಲ್ಲಿ ಈಗಾಗಲೇ ಮೂರು ಲಕ್ಷ ಖುರ್ಚಿಗಳನ್ನು ಹಾಕುವ ಮೂಲಕ ವ್ಯವಸ್ಥೆ ಮಾಡಲಾಗಿದೆ. ಆರು ಲಕ್ಷ ಜನರು ನಾಡಿನ ಮೂಲೆಮೂಲೆಗಳಿಂದ ಬರಲಿದ್ದಾರೆ. ಆದರೆ ಕಾರ್ಯಕ್ರಮದ ಸಂಘಟಕರು ಸುಮಾರು ಹತ್ತು ಲಕ್ಷ ಮಂದಿ ಆಗಮಿಸಬಹುದೆಂದು ನಿರೀಕ್ಷಿಸಿದ್ದಾರೆ.
ದಾವಣಗೆರೆಯ ಹೊರವಲಯದ ಕುಂದವಾಡದ ಬಳಿ ಇರುವ ಶಾಮನೂರು ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು ಸಮಾರಂಭಕ್ಕೆ ಕ್ಷಣಕಣನೆ ಆರಂಭವಾಗಿದೆ. ಹೆದ್ದಾರಿಯುದ್ದಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಕಾಂಗ್ರೆಸ್ ಚಿಹ್ನೆಯ ಬಂಟಿಂಗ್ಸ್ ಗಳು ಹಾರಾಡುತ್ತಿವೆ.
ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಕ್ರಮಕ್ಕೆ ಬರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಆವರಗೆರೆಯಿಂದ ರಸ್ತೆಯಲ್ಲಿ ಹೋಗಲು ಬೇರೆ ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಮೂರು ಲಕ್ಷ ಖುರ್ಚಿಗಳನ್ನು ಹಾಕಿದ್ದು, ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಳೆ ಬಂದರೆ ಕಾರ್ಯಕರ್ತರು ನೆನೆಯಬಾರದು ಎಂಬ ಕಾರಣಕ್ಕೆ ಬೃಹತ್ ಪೆಂಡಾಲ್ ಹಾಕಲಾಗಿದೆ.

ಲಾಡ್ಜ್-ಹೋಟೆಲ್ಗಳು ಸಂಪೂರ್ಣ ಬುಕಿಂಗ್
ಒಂದೆಡೆ ಸಿದ್ದರಾಮಯ್ಯರ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಜನರು ಬಸ್, ಕಾರು, ಟಾಟಾಸುಮೋ ಮೂಲಕ ಬರುತ್ತಿದ್ದಾರೆ. ಈಗಾಗಲೇ ಆಗಸ್ಟ್ 4ರವರೆಗೆ ದಾವಣಗೆರೆ, ಚಿತ್ರದುರ್ಗ, ರಾಣೆಬೆನ್ನೂರಿನವರೆಗೆ ಹೊಟೇಲ್, ರೆಸ್ಟೋರೆಂಟ್ ಹಾಗೂ ಲಾಡ್ಜ್ ಗಳಲ್ಲಿನ ರೂಂ ಬುಕ್ ಆಗಿವೆ. ಯಾರೇ ಬಂದರೂ ನೋ ರೂಂ ಎಂಬ ಸಂದೇಶ ಸಿಗುತ್ತಿದೆ. ಮತ್ತೊಂದೆಡೆ ಹಾಸ್ಟೆಲ್, ರಂಗಮಂದಿರ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.

ಸಿದ್ದರಾಮಯ್ಯರ 75 ಅಡಿ ಕಟೌಟ್
ರಾಜಕೀಯ ಪಕ್ಷಗಳಿಗೆ ಅದೃಷ್ಟದ ನೆಲವೆಂದೇ ಹೆಸರಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಆಗಸ್ಟ್ 3ರಂದು ಸಿದ್ದರಾಮಯ್ಯ ಅವರ 75ನೇ ಜನದಿನದ ಪ್ರಯುಕ್ತ ಅಮೃತಮಹೋತ್ಸವ ಕಳೆಗಟ್ಟಿದ್ದು, ಎಲ್ಲೆಲ್ಲೂ ಕಟೌಟ್ ಗಳು ರಾರಾಜಿಸುತ್ತಿವೆ. ವೇದಿಕೆ ಮುಂಭಾಗದಲ್ಲಿ 75 ಅಡಿ ಉದ್ದದ ಕಟೌಟ್ ನಿಲ್ಲಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಸಿದ್ದರಾಮಯ್ಯ ಅವರ 75 ಅಡಿ ಎತ್ತರದ ಕಟೌಟ್ ನಿರ್ಮಾಣ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಬೃಹತ್ ಕಟೌಟ್ ಗಮನಸೆಳೆಯುವಂತಿದ್ದು ಸಮಾರಂಭಕ್ಕೆ ಆಗಮಿಸುವವರನ್ನು ಸ್ವಾಗತಿಸುವಂತಿದೆ.

ಕಾಂಗ್ರೆಸ್ ಬಲವರ್ಧನಾ ಕಾರ್ಯಕ್ರಮ
ಕಳೆದ ಒಂದು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ ನಾಯಕರು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಸಿದ್ದತೆ ನಡೆಸಿ ಈ ಮೂಲಕ ಕೈ ಬಲಪಡಿಸಲು ಸಜ್ಜುಗೊಂಡಿದ್ದಾರೆ. ಶತಾಯಗತಾಯ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪತಾಕೆ ಹಾರಿಸಲು ದಾವಣಗೆರೆಯಿಂದ ಮುನ್ನುಡಿ ಹಾಕುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಶಿಸಲಾಗುತ್ತಿದೆ. ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ.

ಭೋಜನ ವ್ಯವಸ್ಥೆ
ರಾಜ್ಯದೆಲ್ಲೆಡೆಯಿಂದ ಸುಮಾರು 6 ರಿಂದ 7ಲಕ್ಷ ಜನರು ಆಗಮಿಸುವ ನಿರೀಕ್ಷೆ ಕಾಂಗ್ರೆಸ್ ನವರದ್ದಾಗಿದೆ. ಆರು ಲಕ್ಷ ಜನರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದೆ. ಕಳೆದೊಂದು ವಾರದಿಂದ ಸಿಹಿತಿಂಡಿಗಳ ತಯಾರಿ ನಡೆದಿದ್ದು ಜನರಿಗೆ ಹಂಚಲು 6 ಲಕ್ಷ ಮೈಸೂರು ಪಾಕು ಸಿದ್ದಗೊಂಡಿದೆ. ದಾವಣಗೆರೆ ನಗರದಲ್ಲಿಯೂ ಪ್ರಮುಖ ರಸ್ತೆಗಳು ವೃತ್ತಗಳಲ್ಲಿ ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಶುಭಕೋರುವ ಫ್ಲೆಕ್ಸ್ ಹಾಗೂ ಬ್ಯಾನರ್ ಗಳದ್ದೇ ಆರ್ಭಟ.
ಒಟ್ಟಾರೆ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ನಡೆಯಲಿದ್ದು ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ಧಾಗ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮೂಲಕ ಗಮನ ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದುಕೊಟ್ಟಿದ್ದರು. ಇದೀಗ ಸಿದ್ದರಾಮಯ್ಯರ ಹೆಸರಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಮಣಿಸಿ ಸರಕಾರ ರಚನೆ ಮಾಡಲಿದಿಯಾ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications