ದಾವಣಗೆರೆ In ಡೇಂಜರ್; ಒಂದೇ ದಿನ 6 ಮಂದಿಗೆ ಕೊರೊನಾ ಸೋಂಕು!
ದಾವಣಗೆರೆ, ಮೇ.01: ನೊವೆಲ್ ಕೊರೊನಾ ವೈರಸ್ ಸೋಂಕಿತರೇ ಇಲ್ಲದ ದಾವಣಗೆರೆ ಜಿಲ್ಲೆಯಲ್ಲಿ ಸಾಲು ಸಾಲು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮೂವರು ಸೋಂಕಿತರು ಗುಣಮುಖರಾಗಿ ಹಸಿರು ವಲಯಕ್ಕೆ ಸೇರ್ಪಡೆಯಾಗಿದ್ದ ನಗರದಲ್ಲಿ ಇದೀಗ ಮತ್ತಷ್ಟು ಆತಂಕ ಹೆಚ್ಚಿದೆ.
ಶುಕ್ರವಾರ ಅಂಕಿ-ಅಂಶಗಳ ಪ್ರಕಾರ ಒಂದೇ ದಿನ ದಾವಣಗೆರೆಯಲ್ಲಿ ಆರು ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿರುವುದರ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದಾವಣಗೆರೆ ನಗರದಲ್ಲಿಯೇ ಆರು ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲ ಸೋಂಕಿತರು ಪೇಶೆಂಟ್ ನಂಬರ್.533 ಹಾಗೂ ಪೇಶೆಂಟ್ ನಂಬರ್.556ರ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

ಪೇಶೆಂಟ್ ನಂಬರ್.533ರಿಂದ ದಾವಣಗೆರೆಗೆ ತಲೆನೋವು
ಕಳೆದ ಏಪ್ರಿಲ್.29ರಂದು ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬರಲ್ಲಿ ಕೊವಿಡ್-19 ಸೋಂಕು ಪತ್ತೆಯಾಗಿತ್ತು. ವೈದ್ಯಗೆ ಮಹಾಮಾರಿ ಅಂಟಿಕೊಂಡಿದ್ದು ಹೇಗೆ ಎನ್ನುವುದನ್ನು ಇಂದಿಗೂ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ವೈದ್ಯರು ತಮ್ಮ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ಇದರ ಮಧ್ಯೆ ವೈದ್ಧೆಯ 16 ವರ್ಷದ ಪುತ್ರನಿಗೆ ಶುಕ್ರವಾರ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಸೋಂಕಿತ ಬಾಲಕನನ್ನು ಪ್ರತ್ಯೇಕವಾಗಿರಿ ಚಿಕಿತ್ಸೆ ನೀಡಲಾಗುತ್ತಿದೆ.

69 ವರ್ಷದ ಸೋಂಕಿತನ ಮನೆಯವರಿಗೆಲ್ಲ ಕೊರೊನಾ!
ಕಳೆದ ಏಪ್ರಿಲ್.27ರಂದು ಉಸಿರಾಟ ತೊಂದರೆ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಾದ ವೃದ್ಧನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ವೃದ್ಧ ಜೊತೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದ ಮನೆಯ ಐವರೂ ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸೋಂಕಿತರ ಅಕ್ಕಪಕ್ಕದ ಮನೆಯರಿಗೂ ವೈದ್ಯಕೀಯ ತಪಾಸಣೆ
ದಾವಣಗೆರೆಯ ಜಾಲಿನಗರ ಹಾಗೂ ಬಾಷಾನಗರದಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆ ಸೋಂಕಿತರ ಅಕ್ಕಪಕ್ಕದ ಮನೆಯವರನ್ನು ದ್ವಿತೀಯ ಸಂಪರ್ಕಿತರು ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆ 87 ಜನರ ರಕ್ತ ಮತ್ತು ಗಂಟಲು ಮಾದರಿ ಸಂಗ್ರಹಿಸಿದ್ದು ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಬೆಣ್ಣೆನಗರಿಯಲ್ಲಿ 10 ಮಂದಿಗೆ ಕೊರೊನಾ ಸೋಂಕು ದೃಢ
ದಾವಣಗೆರೆಯಲ್ಲಿ ಮೊದಲು ಕಾಣಿಸಿಕೊಂಡ ಇಬ್ಬರು ಕೊರೊನಾ ವೈರಸ್ ಸೋಂಕಿತರು ಡಿಸ್ಚಾರ್ಜ್ ಆದರು. ಜಿಲ್ಲೆಯಲ್ಲಿ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಲಿಲ್ಲ. ಜಿಲ್ಲೆಯು ಹಸಿರು ವಲಯಕ್ಕೆ ಸೇರ್ಪಡೆಯಾಗಿತ್ತು. ಅದಾಗಿ ಎರಡು ದಿನದಲ್ಲೇ ಎಂಟು ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ನಗರವನ್ನು ಪ್ರವೇಶಿಸುವ 10 ಚೆಕ್ ಪೋಸ್ಟ್ ಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.











Click it and Unblock the Notifications