ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ 50 ನವಜಾತ ಶಿಶುಗಳ ಸಾವು
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ 33 ದಿನಗಳಲ್ಲಿ 50 ನವಜಾತ ಶಿಶುಗಳ ಮರಣ. ಮೂಲಭೂತ ಸೌಕರ್ಯ, ಸಿಬ್ಬಂದಿ ಕೊರತೆಯಿಂದ ಸಾವಿಗೀಡಾಗುತ್ತಿರುವ ಮಕ್ಕಳು.
ದಾವಣಗೆರೆ, ಸೆಪ್ಟೆಂಬರ್ 20: ಇತ್ತೀಚೆಗಷ್ಟೇ ಕೋಲಾರದ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹಲವಾರು ಶಿಶುಗಳ ಸಾವಿನ ಸುದ್ದಿ ಕೇಳಿದ್ದ ನಾಡಿನ ಜನರು ಈಗ ದಾವಣಗೆರೆ ಜಿಲ್ಲಾಸ್ಪತ್ರೆಯಿಂದ ಅಂಥದ್ದೇ ದುರ್ವಾರ್ತೆ ಕೇಳುವಂತಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 33 ದಿನಗಳಲ್ಲಿ ಸುಮಾರು 50 ಶಿಶುಗಳು ಮರಣ ಹೊಂದಿರುವುದು ಬೆಳಕಿಗೆ ಬಂದಿದೆ.
ವಿಚಾರ ತಿಳಿದ ಹಿನ್ನೆಲೆಯಲ್ಲಿ ಬಿಜೆಪಿಯ ಆಸ್ಪತ್ರೆ ಅಧ್ಯಯನ ಸಮಿತಿಯು ಈ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದೆ.

ಈ ಆಸ್ಪತ್ರೆಯಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಯೇ ಈ ಶಿಶುಗಳ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಶಿಶುಗಳಿಗಾಗಿ ಇರುವ ಇನ್ ಕ್ಯುಬೇಟರ್ ವ್ಯವಸ್ಥೆಯ ಸೌಕರ್ಯ ಇಲ್ಲಿ ಕಡಿಮೆ ಇದೆ. ಅಲ್ಲದೆ, ಮಕ್ಕಳ ಶುಶ್ರೂಷೆಯ ವಾರ್ಡ್ ಅನ್ನು 24 ಗಂಟೆಗಳ ಕಾಲ ಗಮನಿಸಲು 90 ಸಿಬ್ಬಂದಿಯ ಅಗತ್ಯವಿದ್ದು, ಇಲ್ಲಿ ಕೇವಲ 18 ನೌಕರರಷ್ಟೇ ಸೇವೆ ಸಲ್ಲಿಸುತ್ತಿದ್ದಾರೆ. ಈ ಎರಡು ಅಂಶಗಳೇ ಶಿಶುಗಳ ಸಾವಿಗೆ ಮೂಲ ಕಾರಣ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧೀಕ್ಷಕರಾದ ಡಾ. ನೀಲಾಂಬಿಕಾ ದೇವಿ, ''ಈವರೆಗೆ ಪುಟ್ಟದಾಗಿದ್ದ ಶಿಶುಗಳ ಆರೈಕೆ ವಾರ್ಡ್ ಅನ್ನು 30 ಬೆಡ್ ಗಳ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಆದರೆ, ಇದಕ್ಕೆ ಮೂಲಭೂತ ಸೌಕರ್ಯ ಇನ್ನೂ ಸಿಕ್ಕಿಲ್ಲ. ಅಗತ್ಯ ಸಿಬ್ಬಂದಿ ಬೇಕಿದೆ ಹಾಗೂ ಇನ್ ಕ್ಯುಬೇಟರ್ ಗಳು ಬೇಕಿವೆ. ಇಂಥ ಕೊರತೆಗಳಿಂದಾಗಿಯೇ ಇಲ್ಲಿ ಶಿಶುಗಳ ಮರಣ ಆಗುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿ, ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯ ನೀಡುವಂತೆ ಕೋರಲಾಗಿದೆ'' ಎಂದು ತಿಳಿಸಿದ್ದಾರೆ.
ಬಿಜೆಪಿಯ ಆಸ್ಪತ್ರೆ ಅಧ್ಯಯನ ಸಮಿತಿಯ ಮುಖ್ಯಸ್ಥ ಹಾಗೂ ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಮಾತನಾಡಿ, ಈ ಆಸ್ಪತ್ರೆಗೆ ಸೌಕರ್ಯ, ಸಿಬ್ಬಂದಿ ನೀಡಿ ಶಿಶುಗಳನ್ನು ಕಾಪಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ದೂರದ ಉತ್ತರ ಪ್ರದೇಶದ ಗೋರಖ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ನವಜಾತ ಶಿಶುಗಳು ಆಕ್ಸಿಜನ ಸೌಲಭ್ಯದ ಕೊರತೆಯಿಂದ ಅಸುನೀಗಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದಾದ ಬಳಿಕ, ಉತ್ತರ ಪ್ರದೇಶದ ಮತ್ತೊಂದು ನಗರ ಫಾರೂಕಾಬಾದ್ ನಲ್ಲಿ ಹಾಗೂ ಛತ್ತೀಸ್ ಗಢದಲ್ಲೂ ಇಂಥ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications