'ಕುಮಾರಸ್ವಾಮಿ ಸಾಂಧರ್ಭಿಕ ಶಿಶು ಅಲ್ಲ, ದೇವೇಗೌಡರ ಪ್ರಣಾಳ ಶಿಶು'
Recommended Video

ರಾಮನಗರ, ಜೂನ್ 03 : 'ಎಚ್.ಡಿ.ಕುಮಾರಸ್ವಾಮಿ ಸಾಂಧರ್ಭಿಕ ಶಿಶು ಅಲ್ಲ, ದೇವೇಗೌಡರ ಪ್ರಣಾಳ ಶಿಶು. ದೇವೇಗೌಡರ ಮಂತ್ರ ಶಕ್ತಿಯಿಂದ ಹುಟ್ಟಿರುವ ಮಗು ಕುಮಾರಸ್ವಾಮಿ' ಎಂದು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ ಲೇವಡಿ ಮಾಡಿದರು.
ಭಾನುವಾರ ಚನ್ನಪಟ್ಟಣದ ದೊಡ್ಡಮಳೂರು ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುವ ಸಮಾವೇಶದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ ಅವರು, 'ಚನ್ನಪಟ್ಟಣದ ಜನ ನನ್ನ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಎಂದು ಅವರನ್ನು ಗೆಲ್ಲಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ' ಎಂದರು.
'ಕಾಂಗ್ರೆಸ್ ಸರ್ಕಾರದಲ್ಲಿ ಒಕ್ಕಲಿಗರನ್ನು ಕಡೆಗಣಿಸಿದರು, ಹೀಯಾಳಿಸಿದರು ಎಂದು ಹಳೇ ಮೈಸೂರು ಭಾಗದ ಜನರಲ್ಲಿ ಭಾವನೆ ಇತ್ತು, ಹಾಗಾಗಿ ಹೆಚ್ಡಿಕೆ ಅವರಿಗೆ ಜಯಸಿಕ್ಕಿದೆ. ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಗೆದ್ದಿರುವುದು ಖುಷಿಯ ವಿಚಾರ, ಚನ್ನಪಟ್ಟಣ ಮುಖ್ಯಮಂತ್ರಿ ಕ್ಷೇತ್ರವಾಗಿದೆ, ಕುಮಾರಸ್ವಾಮಿಯವರು ಕ್ಷೇತ್ರದ ಅಭಿವೃದ್ದಿಯನ್ನ ಚೆನ್ನಾಗಿ ಮಾಡಲಿ' ಎಂದು ಹೇಳಿದರು.

'ಇನ್ನು ಸ್ತ್ರೀ ಶಕ್ತಿ ಸಾಲಮನ್ನಾ, ರೈತರ ಸಾಲಮನ್ನಾ, ವೃದ್ಧರಿಗೆ ಭತ್ಯೆ ಕೊಡುವುದಾಗಿ ಹೇಳಿದ್ದ ಅವರ ಭರವಸೆಗಳಿಗೆ ಜನ ಮರುಳಾಗಿದ್ದಾರೆ. ಅವರು ಕೊಟ್ಟಿರುವ ಭರವಸೆಗಳನ್ನು ಜನರಿಗೆ ಪೂರೈಸಲಿ, ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರು ಸಹ ಅವರಿಗೆ ಬೆಂಬಲ ಕೊಡುತ್ತೇವೆ' ಎಂದು ತಿಳಿಸಿದರು.
'ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ನನ್ನ ರಾಜಕೀಯ ವೈರಿಗಳು, ಅವರನ್ನು ಇವತ್ತು ಎದುರುಹಾಕಿಕೊಳ್ಳುವೆ. ಕುಮಾರಸ್ವಾಮಿಯವರ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಕೊಚ್ಚಿಹೋಗಿದೆ, ಅವರಿಗೆ ಶುಭಕೋರುತ್ತೇನೆ' ಎಂದರು.
'ನನಗೆ ಅಧಿಕಾರ ಇರಲಿ, ಇಲ್ಲದೇ ಇರಲಿ ನಾನು ಈ ತಾಲ್ಲೂಕಿನವನು ಇಲ್ಲೇ ಇರುತ್ತೇನೆ, ನಾನು ಯಾವ ಚುನಾವಣೆಯಿಂದಲೂ ಹಿಂದೆ ಸರಿಯಲ್ಲ, ಕುಮಾರಸ್ವಾಮಿಯವರ ಕುಟುಂಬದ ವಿರುದ್ಧ ಮೂರು ಚುನಾವಣೆ ಎದುರಿಸಿದ್ದೇನೆ. ಅನಿತಾ ಕುಮಾರಸ್ವಾಮಿ ಅವರನ್ನ ಸೋಲಿಸಿದ್ದೇನೆ, ಪಕ್ಷ ಸೂಚಿಸಿದರೆ ಚುನಾವಣೆಗೆ ನಿಲ್ಲಲ್ಲು ಸಿದ್ದ, ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದೇನೆ' ಎಂದು ಹೇಳಿದರು.

'ಕಾಂಗ್ರೆಸ್ ಎಡಗಡೆ ಆದರೆ, ಜೆಡಿಎಸ್ ಬಲಗಡೆ. ಈ ಸರ್ಕಾರದ ಅವಧಿ ಕೇವಲ ಲೋಕಸಭೆ ಚುನಾವಣೆ ತನಕ ಮಾತ್ರ. ಚುನಾವಣೆ ಇವತ್ತು ಬರುತ್ತೆ ನಾಳೆ ಹೋಗುತ್ತೆ ನಮ್ಮ ನಿಮ್ಮ ಸಂಬಂಧ ನೀರು ಹಾಗೂ ಮೀನಿನ ಸಂಬಂಧ' ಎಂದು ತಿಳಿಸಿದರು.











Click it and Unblock the Notifications