ಬೊಮ್ಮಾಯಿ ಸಂಪುಟ ಸೇರಲಿದ್ದಾರೆಯೇ ಗೂಳಿಹಟ್ಟಿ ಶೇಖರ್?
ಚಿತ್ರದುರ್ಗ, ಆಗಸ್ಟ್ 03; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಹಲವಾರು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಕೂಡ ತೆರೆಮರೆಯಲ್ಲಿ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಚಿತ್ರದುರ್ಗದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. "ಬಿಜೆಪಿ ಪಕ್ಷದಲ್ಲಿ ನನಗೆ ಯಾರು ಗಾಡ್ ಫಾದರ್ ಇಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ತಂದ ಮೊದಲ ವ್ಯಕ್ತಿ ಗೂಳಿಹಟ್ಟಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನನಗೆ 2008 ಮಂತ್ರಿ ಮಾಡುವಾಗ ಅನ್ಯಾಯ ಮಾಡಿದ್ದರು. ನನ್ನ ಕರೆದುಕೊಂಡು ಹೋದ ಮೂವರು ಮಂತ್ರಿಗಳಾದರು" ಎಂದರು.
"ಗೂಳಿಹಟ್ಟಿ ಶೇಖರ್ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಬಿಂಬಿಸಿದರು. ನಾನೊಬ್ಬ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದ ಎಸ್ಸಿ ಸಮುದಾಯದ ವ್ಯಕ್ತಿಯಾಗಿದ್ದೇನೆ. ಮೋದಿ ಅಲೆಯಲ್ಲೂ ನಾನು ಹಿಂದೆ ಜೆಡಿಎಸ್ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಲಕ್ಷ ಮತ ಪಡೆದಿದ್ದೆ" ಎಂದು ಹೇಳಿದರು.
"ಮಂತ್ರಿ ಸ್ಥಾನ ಸಿಗದೇ ಈ ಹಿಂದೆ ಅನ್ಯಾಯವಾಗಿದೆ. ಈಗ ಕೊಡಿ ಎಂದು ಕೇಳಿದ್ದೇವೆ. ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಕೇಂದ್ರ ಸರ್ಕಾರ ಮಾದರಿಯಲ್ಲಿ ಸಚಿವ ಸಂಪುಟ ಮಾಡಿದರೆ ನಮಗೆ ಅವಕಾಶ ಸಿಗುತ್ತದೆ. ಇಲ್ಲವಾದರೆ ಬೇಕಾ ಬಿಟ್ಟಿ ಸಂಪುಟ ರಚನೆ ಮಾಡಿದರೆ ನಮಗೆ ಅವಕಾಶ ಸಿಗಲ್ಲ" ಎಂದು ಗೂಳಿಹಳ್ಳಿ ಶೇಖರ್ ಹೇಳಿದರು.

ಯಾವುದೇ ನಾಯಕರನ್ನು ಭೇಟಿಯಾಗಿಲ್ಲ
"ನಾನು ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ. ನನಗೆ ಗಾಡ್ ಫಾದರ್ ಇಲ್ಲ, ನಾನು ಯಾವಾಗಲೂ ಕೂಡಾ ಕ್ಷೇತ್ರದಲ್ಲಿ ಇರುತ್ತೇನೆ. ನಾನು ಸಚಿವ ಸ್ಥಾನ ಪಡೆಯಲು ದೆಹಲಿ, ಬೆಂಗಳೂರಿಗೆ ಹೋಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಅವರಿಂದ ಸಹಾಯ ಪಡೆದುಕೊಂಡಿದ್ದೆವು. ಆದ್ದರಿಂದ ಸೌಜನ್ಯಕ್ಕೆ ಅವರನ್ನು ಭೇಟಿ ಮಾಡಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಬಂದಿದ್ದೇನೆ" ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.

ಅಭಿನಂದನೆ ಸಲ್ಲಿಸಿ ಬಂದಿದ್ದೇನೆ
"ಯಡಿಯೂರಪ್ಪ ಭೇಟಿಯಾದ ಸಮಯದಲ್ಲಿ ಪದವಿ ವಿಚಾರವಾಗಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅವರಿಗೂ ಅಭಿನಂದನೆ ಸಲ್ಲಿಸಿ ಬಂದಿದ್ದೇನೆ. ಆಪರೇಷನ್ ಕಮಲದಲ್ಲಿ ಬಂದ ಎಲ್ಲರಿಗೂ ಉತ್ತಮ ಸ್ಥಾನ ನೀಡುತ್ತಾರೆ. ಪಕ್ಷದಲ್ಲಿ ಇರುವವರೆಗೂ ನಿಯತ್ತಾಗಿ ಇರುತ್ತೇನೆ. ನಾನು ಪಕ್ಷೇತರನಾಗಿ ಬಂದವನು, ಪಕ್ಷದಲ್ಲಿ ಇರುವವರೆಗೂ ನಿಯತ್ತಾಗಿ ಇರುವೆ" ಎಂದು ಹೇಳಿದರು.

ಪಕ್ಷದ ತೀರ್ಮಾನಕ್ಕೆ ಬದ್ದ
"ಪಕ್ಷ ನಿಷ್ಠೆ ನಮ್ಮಲ್ಲಿ ಇದೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಮ್ಮ ಶಕ್ತಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ತೋರಿಸುತ್ತೇನೆ. ನಮ್ಮ ಪಕ್ಷವನ್ನು ಗೆಲ್ಲಿಸುತ್ತೇವೆ, ಪಕ್ಷದ ಪರ ಇರುತ್ತೇವೆ, ಡಬಲ್ ಗೇಮ್ ಮಾಡಲ್ಲ. ಕೆಲವರು ಟೀ ಪಾರ್ಟಿ ಮಾಡಿಕೊಂಡು ಮಂತ್ರಿಗಳಾದರು" ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದರು.
Recommended Video

ನಾನು ಪಕ್ಷದಲ್ಲಿಯೇ ಇರುತ್ತೇನೆ
"ಕೆಲವರು ಬ್ಲಾಕ್ ಮೇಲ್ ಮಾಡಿ ಮಂತ್ರಿ ಆಗುತ್ತಾರೆ. ಪಕ್ಷದಲ್ಲಿ ಇದ್ದು ನಾನು ಜಾಸ್ತಿ ಮಾತನಾಡುವುದಿಲ್ಲ. ಮಂತ್ರಿ ಸ್ಥಾನ ನೀಡಿಲ್ಲ ಎಂದರೂ ಪಕ್ಷದಲ್ಲಿಯೇ ಇರುತ್ತೇನೆ. ನನ್ನ ವಾಟ್ಸಪ್ ಸ್ಟೇಟಸ್ ನನ್ನ ಹಾಜರಾತಿ" ಎಂದು ಗೂಳಿಹಟ್ಟಿ ಶೇಖರ್ ಪಕ್ಷದ ಕೆಲವು ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications