Wayanad landslide: ಜನರ ಗಮನ ಸೆಳೆದ ಡಿಸಿ, ಕನ್ನಡತಿ ಡಿ. ಆರ್. ಮೇಘಶ್ರೀ
ಚಿತ್ರದುರ್ಗ, ಆಗಸ್ಟ್ 04: ಕೇರಳ ರಾಜ್ಯದ ವಯನಾಡು ಜಿಲ್ಲೆಯಾದ್ಯಂತ ಸಂಭವಿಸಿದ ಸರಣಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 300ರ ಗಡಿ ದಾಟಿದೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬ ನಿಖರವಾದ ಮಾಹಿತಿ ಇನ್ನೂ ಸಹ ಸಿಕ್ಕಿಲ್ಲ.
ಈ ದುರಂತದ ಬಳಿಕ ವಯನಾಡು ಜಿಲ್ಲಾಡಳಿತ ಜನ ಜೀವನ ಸಹಜ ಸ್ಥಿತಿಗೆ ತರಲು ಹಗಲಿರುಳು ಕೆಲಸ ಮಾಡುತ್ತಿದೆ. ಇಂತಹ ಸಮಯದಲ್ಲಿ ಜಿಲ್ಲಾಧಿಕಾರಿ, ಕನ್ನಡತಿ ತಮ್ಮ ಕೆಲಸದ ಮೂಲಕ ಜನರ ಗಮನ ಸೆಳೆದಿದ್ದಾರೆ.

ಹೌದು, ವಯನಾಡು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಡಿ. ಆರ್. ಮೇಘಶ್ರೀ. ಕರ್ನಾಟಕದ ಕೋಟೆನಾಡು ಚಿತ್ರದುರ್ಗದವರು. ಇಂತಹ ಸಮಯದಲ್ಲಿ ಪ್ರತಿ ನಿಮಿಷದ ಕೆಲಸವೂ ಸಹ ಅತಿ ಮುಖ್ಯ ಎಂದು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ಮೇಘಶ್ರೀ.
ಸ್ಥಳದಲ್ಲಿಯೇ ಮೊಕ್ಕಂ: ಜಿಲ್ಲಾಧಿಕಾರಿ ಡಿ. ಆರ್. ಮೇಘಶ್ರೀ ದುರಂತ ನಡೆದ ಬಳಿಕ ಮುಂಜಾನೆ 3 ಗಂಟೆಯಿಂದ ಕೆಲಸ ಮಾಡುತ್ತಿದ್ದಾರೆ. ಜುಲೈ 10ರಂದು ಮೇಘಶ್ರೀ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆಲವೇ ದಿನಗಳಲ್ಲಿ ಅವರು ಅತಿ ದೊಡ್ಡ ಸವಾಲು ಎದುರಿಸಿದ್ದಾರೆ.
ರಕ್ಷಣಾ ಕಾರ್ಯ, ಶವಗಳ ಗುರುತು ಪತ್ತೆ ಹಚ್ಚುವುದು, ಗಾಯಗೊಂಡವರಿಗೆ ಚಿಕಿತ್ಸೆ, ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ, ವಿವಿಧ ರಕ್ಷಣಾ ಪಡೆಗಳಿಗೆ ನೆರವು ನೀಡುವುದು ಹೀಗೆ ಎಲ್ಲಾ ಕಾರ್ಯಗಳಲ್ಲಿಯೂ ಚುರುಕಿನಿಂದ ಕೆಲಸ ಮಾಡಿ ಮೇಘಶ್ರೀ ಕೇರಳದ ಜನರ ಗಮನ ಸೆಳೆದಿದ್ದಾರೆ.
ಚಳ್ಳಕೆರೆ ಮೂಲದ ಮೇಘಶ್ರೀ ಕಂಪ್ಯೂಟರ್ ಸೈನ್ಸ್ ಪದವೀಧರೆ. ಸುಮಾರು 3 ವರ್ಷ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಕೆಲಸ ಬಿಟ್ಟು ಐಎಎಸ್ ಪರೀಕ್ಷೆ ತಯಾರಿ ಆರಂಭಿಸಿದ್ದರು. 2016ರಲ್ಲಿ ಎರಡನೇ ಪ್ರಯತ್ನದಲ್ಲಿ ಅವರು ಪರೀಕ್ಷೆ ಪಾಸು ಮಾಡಿದರು.
ಮೇಘಶ್ರೀ ತಂದೆ ಎಸ್ಬಿಐ ಬ್ಯಾಂಕ್ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಡಿ. ಆರ್. ಮೇಘಶ್ರೀ ಅವರಿಗೆ ವಿಸ್ಮಯಾ ಮತ್ತು ಧೃತಿ ಎಂಬ ಇಬ್ಬರು ಮಕ್ಕಳಿದ್ದಾರೆ. ವಯನಾಡು ಜಿಲ್ಲೆಯಲ್ಲಿ ಭೂ ಕುಸಿತವಾದಾಗ ಅವರು ಬೆಂಗಳೂರಿನಲ್ಲಿದ್ದರು, ಕೆಲವೇ ಗಂಟೆಗಳಲ್ಲಿ ಅವರು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದ ಮೇಲುಸ್ತುವಾಗಿ ಆರಂಭಿಸಿದರು.
ದುರಂತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ವಯನಾಡು ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಸಹ ಜಿಲ್ಲಾಧಿಕಾರಿ ಡಿ. ಆರ್. ಮೇಘಶ್ರೀ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ವಿವಿಧ ಅಧಿಕಾರಿಗಳು ಸಹ ಡಿ. ಆರ್. ಮೇಘಶ್ರೀ ಅವರಿಗೆ ಬೆಂಬಲವಾಗಿ ನಿಂತು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಭಾನುವಾರ ವಯನಾಡು ಸರಣಿ ಭೂಕುಸಿತದ ಕುರಿತು ಮಾತನಾಡಿರುವ ಕೇಂದ್ರ ಪೆಟ್ರೋಲಿಯಂ, ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, "ವಯನಾಡು ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ಕುರಿತು ಕಾನೂನಿನ ಅಂಶಗಳ ಆಧಾರದ ಮೇಲೆ ಸರ್ಕಾರ ಪರಿಶೀಲನೆ ಮಾಡಲಿದೆ" ಎಂದು ಹೇಳಿದ್ದಾರೆ.
ಭೂ ಕುಸಿತದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, "ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶಗಳಲ್ಲಿ ಉಂಟಾಗಿರುವ ಭೂ ಕುಸಿತದ ಕುರಿತು ಮೌಲ್ಯ ಮಾಪನವನ್ನು ಕೇಂದ್ರ ಸರ್ಕಾರ ನಡೆಸಲಿದೆ" ಎಂದರು.












Click it and Unblock the Notifications