ಸೆ.2ಕ್ಕೆ ಅಧಿಕೃತವಾಗಿ ಭದ್ರೆಯಿಂದ ವಿವಿ ಸಾಗರಕ್ಕೆ ನೀರು
ಚಿತ್ರದುರ್ಗ, ಸೆಪ್ಟೆಂಬರ್ 1: ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆ ಮುಗಿದಿದ್ದು, ನಾಳೆ ಅಂದರೆ ಸೆಪ್ಟೆಂಬರ್ 02 ರಿಂದ ಅಧಿಕೃತವಾಗಿ ಭದ್ರಾ ಜಲಾಶಯದಿಂದ ವೇದಾವತಿ ನದಿಯ ಮೂಲಕ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದೆ.
Recommended Video
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆನ್ ಲೈನ್ ನಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಹಿಂದಿನ ವರ್ಷ ಪ್ರಾಯೋಗಿಕವಾಗಿ ಮೂರು ಬಾರಿ ಭದ್ರೆಯಿಂದ ವಿವಿ ಸಾಗರಕ್ಕೆ ನೀರು ಹರಿಸಲಾಗಿದೆ. ಇದು ಯಶಸ್ವಿಯಾದ ನಂತರ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಬುಧವಾರದಿಂದ ವಿವಿ ಸಾಗರಕ್ಕೆ ನೀರು ಹರಿಯಲಿದೆ.
ವಿವಿ ಸಾಗರಕ್ಕೆ2 ಟಿಎಂಸಿ ನೀರು
ವಿಶ್ವೇಶ್ವರಯ್ಯ ಜಲ ನಿಗಮದಿಂದ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಸರ್ಕಾರದ ನಿರ್ದೇಶದನ್ವಯ 2020-21 ನೇ ಸಾಲಿನಲ್ಲಿ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಅನುಗುಣವಾಗಿ ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆಯಿಂದ ಅಜ್ಜಂಪುರ ತಾಲೂಕಿನ ಹೆಬ್ಬೂರು ಗ್ರಾಮದ ಬಳಿಯ ಹಳ್ಳದ ವೇದಾವತಿ ನದಿಯ ಮೂಲಕ ವಾಣಿವಿಲಾಸ ಸಾಗರಕ್ಕೆ ಬುಧವಾರದಿಂದ 2 ಟಿಎಂಸಿ ನೀರನ್ನು ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ.
ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಯಲು ಇದ್ದ ತಡೆ ನಿವಾರಣೆ
ಆನ್ ಲೈನ್ ಮೂಲಕ ಸಿಎಂ ಉದ್ಘಾಟನೆ
ಭದ್ರೆ ನೀರು ಹರಿಸಲು ಸಿಎಂ ಯಡಿಯೂರಪ್ಪ ಅವರು ತರೀಕೆರೆ ಬೆಟ್ಟದ ತಾವರೆಕೆರೆಗೆ ಆಗಮಿಸಬೇಕಿತ್ತು. ಆದರೆ ಬದಲಾದ ಸನ್ನಿವೇಶದ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಚಾಲನೆ ನೀಡಲಿದ್ದು, ಜಿಲ್ಲೆಯ ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಭದ್ರಾ ಜಲಾಶಯದಿಂದ ಪ್ರಾರಂಭವಾದ ನೀರು ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತಿಪುರ ಪಂಪ್ ಹೌಸ್ -1 ಸೇರುತ್ತದೆ. ಶಾಂತಿಪುರ ಪಂಪ್ ಹೌಸ್ ನಿಂದ ಲಿಫ್ಟ್ ಮೂಲಕ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ತಲುಪಿ ಅಲ್ಲಿಂದ ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಬಂದ ನೀರು ಅಜ್ಜಂಪುರದ ರೈಲ್ವೆ ಅಂಡರ್ ಪಾಸ್ ನಿಂದ ಹೆಬ್ಬೂರು ಗ್ರಾಮದ ವೈ ಜಂಕ್ಷನ್ ಹಳ್ಳದ ಮೂಲಕ ನೀರು ಹಾದು ಹೋಗಲಿದೆ.
ನದಿ ಪಾತ್ರಗಳಲ್ಲಿ ಓಡಾಟ ನಿಷೇಧ
ನಂತರ ಬೇಗೂರು, ಆಸಂದಿ, ಎಚ್. ತಿಮ್ಮಾಪುರ, ಹನುಮನಹಳ್ಳಿ, ಕಲ್ಕೆರೆ, ಚೌಳ ಹಿರಿಯೂರು, ಕುಕ್ಕೆಸಮುದ್ರ ಕೆರೆಗೆ ತಲುಪಿ ಅಲ್ಲಿಂದ ವೇದಾವತಿ ನದಿಗೆ ನೀರು ಹರಿದು ಹೋಗುತ್ತದೆ. ಅಲ್ಲಿಂದ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ತುಂಬಿಕೊಂಡು ಕಾರೆಹಳ್ಳಿ, ಹತ್ತಿಮೊಗ್ಗೆ, ಬೆವಿನಹಳ್ಳಿ ಮುಖಾಂತರ ವಿವಿ ಸಾಗರಕ್ಕೆ ನೀರು ಹರಿದು ಬರುತ್ತದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದಲ್ಲಿ ಬರುವ ಕಾಲುವೆ, ಹಳ್ಳ ಹಾಗೂ ನದಿ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ-ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಹಾಗೂ ಇತರೆ ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು: ರಮೇಶ್ ಜಾರಕಿಹೊಳಿ
ಅನಧೀಕೃತ ಪಂಪ್ ಸೆಟ್ ಅಳವಡಿಕೆ ಬಗ್ಗೆ ಎಚ್ಚರಿಕೆ
ಇದೇ ಸಮಯದಲ್ಲಿ, ಅನಧಿಕೃತವಾಗಿ ಪಂಪ್ ಸೆಟ್ಗಳನ್ನು ಅಳವಡಿಸಿ ನೀರು ಎತ್ತುವುದು ನೀರಾವರಿ ಕಾಯ್ದೆಯ ನಿಯಮದ ಪ್ರಕಾರ ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಕಾನೂನು ಸೂಚನೆಗಳನ್ನು ಉಲ್ಲಂಘನೆ ಮಾಡಿದವರು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.