ಚಿತ್ರದುರ್ಗ: ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಹೊಸದುರ್ಗ ತಾಲೂಕಿನ ಜಿ. ಮಮತಾ
ಚಿತ್ರದುರ್ಗ, ಸೆಪ್ಟೆಂಬರ್ 25: ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಇದೀಗ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರ ಬೋವಿಹಟ್ಟಿ ಗ್ರಾಮದ ಯುವತಿ ಜಿ. ಮಮತಾ 707ನೇ ಶ್ರೇಯಾಂಕ ಪಡೆದು ತೇರ್ಗಡೆಯಾಗುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಭೋವಿಹಟ್ಟಿ ಗ್ರಾಮದ ಗೋವಿಂದಪ್ಪ ಹಾಗೂ ಚಂದ್ರಮ್ಮ ದಂಪತಿಯ ಪುತ್ರಿ ಜಿ. ಮಮತಾ ಪ್ರಾಥಮಿಕ ಶಿಕ್ಷಣವನ್ನು ದೇವಪುರ ಗ್ರಾಮದಲ್ಲಿ ಪೂರೈಸಿ, ಶಿವಮೊಗ್ಗದಲ್ಲಿ ಪಿಯುಸಿ ಓದಿ, ಬಳಿಕ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದಾರೆ.
ನಂತರ ಬೆಂಗಳೂರಿನಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ತೇರ್ಗಡೆ ಆಗಿರುವುದು ಸಂತಸ ತಂದಿದೆ. ನನ್ನ ಸಾಧನೆಗೆ ಪೋಷಕರು ಹಾಗೂ ಮಾರ್ಗದರ್ಶಕರ ಬೆಂಬಲ ಕಾರಣ. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತಿಯನ್ನು ನಮ್ಮ ತಂದೆ ತಾಯಿ ಬೆಳೆಸಿದರು. ಪರಿಣಾಮ ಇಂಥದೊಂದು ಸಾಧನೆಗೆ ಮುನ್ನುಡಿ ಆಯಿತು ಎಂದು ಮಮತಾ ಸುದ್ದಿಗಾರರ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಯಾರೇ ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಆಗಬೇಕೆಂದರೆ ಮೊದಲು ಸಿದ್ಧತೆ, ಪರಿಶ್ರಮದ ಜೊತೆಗೆ ಯುಪಿಎಸ್ಸಿ ಡಿಮ್ಯಾಂಡ್ ಅನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂಬ ಹಂಬಲ ಇದೆ ಎಂದು ಯುಪಿಎಸ್ಸಿ ಪಾಸಾದ ಮಮತಾ ಹೇಳುತ್ತಾರೆ.
ಗೂಳಿಹಟ್ಟಿ ಶೇಖರ್ ಅಭಿನಂದನೆ
ಕೇಂದ್ರ ಲೋಕಸೇವಾ ಆಯೋಗ (UPSC) ಪರೀಕ್ಷೆಯಲ್ಲಿ 707ನೇ ರ್ಯಾಂಕ್ ಪಡೆದಿರುವ ಮಮತಾಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಸಂತಸದ ಜೊತೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ನಮ್ಮ ಕ್ಷೇತ್ರಕ್ಕೆ ಅಂಟಿಕೊಂಡಿರುವ ಮತಾಂತರ ಪಿಡುಗಿನ ನಡುವೇ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರ ಭೋವಿಹಟ್ಟಿ ಗ್ರಾಮದ ಮಮತಾ. ಜಿ. ಯುಪಿಎಸ್ಸಿ ಪರೀಕ್ಷೆಯಲ್ಲಿ 707ನೇ ರ್ಯಾಂಕ್ ಪಡೆದಿರೋದು ಶ್ಲಾಘನೀಯ ಎಂದಿದ್ದಾರೆ.
ದೇವಪುರ ಭೋವಿಹಟ್ಟಿ ಗ್ರಾಮದ ಯುವತಿ ಜಿ. ಮಮತಾ ಖಾಸಗಿ ಶಾಲಾ ಶಿಕ್ಷಕರಾದ ಗೋವಿಂದಪ್ಪನವರ ಪುತ್ರಿ. ಇವರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂತಹ ವೇಳೆ ಯಾವುದಕ್ಕೂ ಎದೆಗುಂದದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ನನ್ನ ಕ್ಷೇತ್ರದ ಯುವತಿ ಸಾಧನೆ ನಮಗೆ ಅತೀವ ಸಂತೋಷ ತಂದಿದೆ. ಈ ಗ್ರಾಮದಲ್ಲಿ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಮತಾಂತರ ಆಗಿವೆ. ಆದರೂ ಇದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಶ್ರಮವಹಿಸಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಗಳಿಸಿದ್ದಾರೆ ಎಂದು ಹೇಳಿದ್ದಾರೆ.

2020ನೇ ಸಾಲಿನಲ್ಲಿ ಯುಪಿಎಸ್ಸಿ ತೇರ್ಗಡೆಯಾದ ಕನ್ನಡಿಗರು
ಅಕ್ಷಯ್ ಸಿಂಹ- 77ನೇ ಸ್ಥಾನ
ನಿಶ್ಚಯ ಪ್ರಸಾದ್- 130ನೇ ಸ್ಥಾನ
ಸಿರಿವೆನೆಲಾ- 204ನೇ ಸ್ಥಾನ
ಅನಿರುಧ್- ಗಂಗಾವರಂ 252ನೇ ಸ್ಥಾನ
ಸೂರಜ್. ಡಿ- 255ನೇ ಸ್ಥಾನ
ನೇತ್ರಾ ಮೇಟಿ- 326ನೇ ಸ್ಥಾನ
ಮೇಘಾ ಜೈನ್- 354ನೇ ಸ್ಥಾನ
ಪ್ರಜ್ವಲ್- 367ನೇ ಸ್ಥಾನ
ಸಾಗರ್. ಎ. ವಾಡಿ- 385ನೇ ಸ್ಥಾನ
ನಾಗರೋಜೆ ಶುಭಂ ಬಾವುಸಾಬ್- 453ನೇ ಸ್ಥಾನ
ಶಕೀರ್ ಅಹಮದ್- 583ನೇ ಸ್ಥಾನ
ಪ್ರಮೋದ್ ಆರಾಧ್ಯ- 601ನೇ ಸ್ಥಾನ
ಸೌರಭ್- 725ನೇ ಸ್ಥಾನ
ವೈಶಾಖ ಬಾಗಿ- 744ನೇ ಸ್ಥಾನ
ಸಂತೋಷ್. ಎಚ್- 751ನೇ ಸ್ಥಾನ












Click it and Unblock the Notifications